ಎಲ್ಲಾ ಪಕ್ಷಗಳ ಒಪ್ಪಿಗೆ ಪಡೆದ ಬಳಿಕವಷ್ಟೇ ಜಾತಿಗಣತಿ: ನಿತೀಶ್ ಕುಮಾರ್
ಪಾಟ್ನಾ, ಅಕ್ಟೋಬರ್ 05:ಎಲ್ಲಾ ರಾಜಕೀಯ ಪಕ್ಷಗಳು ಒಪ್ಪಿಗೆ ನೀಡಿದ ಬಳಿಕವಷ್ಟೇ ಜಾತಿ ಗಣತಿ ನಡೆಸಲಾಗುವುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಜಾತಿ ಗಣತಿ ನಡೆಸಲು ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಒಪ್ಪಿಕೊಳ್ಳಲಿವೆ ಎಂಬ ವಿಶ್ವಾಸವಿದ್ದು, ರಾಜ್ಯ ಮಟ್ಟದಲ್ಲಿ ಜಾತಿ ಗಣತಿ ನಡೆಸಲಾಗುವುದು ಹಾಗೂ ಅದನ್ನು ನಡೆಸುವ ಕ್ರಮಗಳ ಕುರಿತು ಚರ್ಚಿಸಲಾಗುವುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮುಂದಿನ ಜನಗಣತಿ ವೇಳೆ ದೇಶದಲ್ಲಿ ಕೆಲ ರಾಜ್ಯಗಳು ಜಾತಿ ಗಣತಿ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿವೆ. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ)ದವರು ಶೇ.50ಕ್ಕಿಂತ ಹೆಚ್ಚಿದ್ದಾರೆ.

ಆದರೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಾತ್ರ ಒಬಿಸಿ ವರ್ಗಕ್ಕೆ ಶೇ.27ರಷ್ಟು ಮೀಸಲಾತಿಯಿದೆ. ಹೀಗಾಗಿ ಜಾತಿ ಗಣತಿ ನಡೆಸಿದರೆ, ಒಬಿಸಿ ವರ್ಗದ ನಿಖರ ಅಂಕಿ - ಅಂಶ ಹೊರಬೀಳಲಿದೆ. ಬಳಿಕ ಒಬಿಸಿಗೆ ಮೀಸಲಾತಿ ಹೆಚ್ಚಿಸಬಹುದು ಎಂಬುದು ಇದರ ಉದ್ದೇಶವಾಗಿದೆ.
ಭಾರತದಾದ್ಯಂತ ಜಾತಿ ಗಣತಿ ನಡೆಸಬೇಕು ಎಂದು ನಾವು ಒತ್ತಾಯಿಸಿದ್ದೇವೆ. ಈ ಹಿಂದೆ ಕೂಡ 10 ಪಕ್ಷಗಳ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಜಾತಿ ಗಣತಿಗೆ ಒತ್ತಾಯಿಸಿತು. ಕೆಲವೇ ದಿನಗಳಲ್ಲಿ ರಾಜ್ಯದ ಎಲ್ಲ ಪಕ್ಷಗಳು ಜಾತಿ ಗಣತಿಯನ್ನು ನಡೆಸಲು ಕೈ ಜೋಡಿಸುತ್ತವೆ, ಇದಕ್ಕೆ ಒಮ್ಮತ ನೀಡುತ್ತವೆ ಎಂದು ಭಾವಿಸಿದ್ದೇನೆ ಎಂದರೆ.
ದೇಶದಲ್ಲಿ ಜಾತಿ ಗಣತಿ ಅಸಾಧ್ಯ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿರುವ ಹಿನ್ನೆಲೆಯಲ್ಲಿ ಈ ನಿಲುವನ್ನು ಮರು ಪರಿಶೀಲಿಸಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಗ್ರಹಿಸಿದ್ದಾರೆ.
ಬಿಹಾರ ವಿಧಾನಸಭೆ ಹಾಗೂ ಪರಿಷತ್ನಲ್ಲಿ ಜಾತಿ ಗಣತಿ ಬೆಂಬಲಿಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ನಾವೆಲ್ಲರೂ ಈಗಾಗಲೇ ಬೇಡಿಕೆಗಳನ್ನು ಒಟ್ಟಾಗಿ ಇರಿಸಿದ್ದೇವೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಇತ್ತೀಚಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ 10 ಪಕ್ಷಗಳ ನಿಯೋಗ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಹಿಂದುಳಿದ ವರ್ಗಗಳ ಜನಗಣತಿ ನಡೆಸಬೇಕು ಎಂದು ಮನವಿ ಮಾಡಿತ್ತು. ಜೊತೆಗೆ ದೇಶದ ಹಲವು ರಾಜ್ಯಗಳಿಂದಲೂ ಇಂಥ ಬೇಡಿಕೆ ವ್ಯಕ್ತವಾಗಿತ್ತು.
ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಅಭಿಪ್ರಾಯ ವ್ಯಕ್ತಪಡಿಸಿರುವುದು ಮಹತ್ವ ಪಡೆದುಕೊಂಡಿದೆ. "ಈ ಜಾತಿಗಣತಿ ವಿಚಾರವನ್ನು ಈ ಹಿಂದಿನ ಎಲ್ಲಾ ಅಂಶಗಳೊಂದಿಗೆ ತುಲನೆ ಮಾಡಿ ಪರಿಶೀಲನೆ ನಡೆಸಲಾಗಿದೆ. ಆದರೆ ಎಲ್ಲಾ ಸಂದರ್ಭದಲ್ಲೂ ಈ ಜಾತಿಗಣತಿಯು ಕಷ್ಟ ಹಾಗೂ ನಿಷ್ಪ್ರಯೋಜಕ ಎಂದು ತಿಳಿದು ಬಂದಿದೆ.
ಈ ಜಾತಿ ಗಣತಿಯನ್ನು ಮಾಡಿದರೆ, ಇದು ಪೂರ್ತಿ ಎಂದು ಆಗದು ಹಾಗೂ ಯಾವುದೇ ಸ್ಪಷ್ಟತೆಯೂ ಇರದು. ಇದು 2011 ರಲ್ಲಿ ನಡೆಸಿದ ಜಾತಿಗಣತಿಯಿಂದ ಸ್ಪಷ್ಟವಾಗಿದೆ," ಎಂದು ಕೂಡಾ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ತನ್ನ ಅಫಿಡವಿಟ್ನಲ್ಲಿ ಅಭಿಪ್ರಾಯಿಸಿದೆ.
"2011 ರಲ್ಲಿ ನಡೆಸಿದ ಸಾಮಾಜಿಕ, ಆರ್ಥಿಕ ಹಾಗೂ ಜಾತಿಗಣತಿಯಲ್ಲಿನ (ಎಸ್ಇಸಿಸಿ) ಮಾಹಿತಿಯು ಯಾವುದೇ ಅಧಿಕೃತ ಬಳಕೆಗೆ ಸಹಕಾರಿಯಾಗಿಲ್ಲ. ಹಾಗೆಯೇ ಇದು ಇದನ್ನು ಜನಸಂಖ್ಯೆಯ ಬಗ್ಗೆ ತಿಳಿಯಲು ಸಹಾಯ ಮಾಡುವ ಮೂಲ ಡೇಟಾ ಎಂದು ಕೂಡಾ ಪರಿಗಣಿಸಲಾಗದು," ಎಂದು ಕೇಂದ್ರ ಸರ್ಕಾರವು ತಿಳಿಸಿತ್ತು.
2021 ರ ಜನಗಣತಿಯ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಜಾತಿಗಣತಿಯನ್ನು ಕೂಡಾ ಮಾಡಬೇಕು. ಜನರಿಂದ ಜಾತಿಯ ಮಾಹಿತಿ ಕೂಡಾ ಸಂಗ್ರಹ ಮಾಡಬೇಕು ಎಂದು ಮಹಾರಾಷ್ಟ್ರವು ಸಲ್ಲಿಕೆ ಮಾಡಿರುವ ರಿಟ್ ಅರ್ಜಿಗೆ ಪ್ರತಿಕ್ರಿಯೆ ನೀಡಿ ತನ್ನ ಅಫಿಡವಿಟ್ನಲ್ಲಿ ಕೇಂದ್ರ ಸರ್ಕಾರ ಈ ಹೇಳಿಕೆ ನೀಡಿದೆ.












Click it and Unblock the Notifications