ಆಕೆಯ ಛಲದೆದುರು ಸೀಳುಬಿಟ್ಟ 16 ಮೂಳೆಗಳೂ ಗೌಣವಾದವು!
ರಾಜಸ್ಥಾನದ ಬೀದಿ ವ್ಯಾಪಾರಿಯ ಮಗಳಾದ ಆಕೆಯ ಮನೆಯಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದುದು ಬಡತನ ಮಾತ್ರ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ! ಹುಟ್ಟುತ್ತಲೇ ಮೂಳೆಯ ದೌರ್ಬಲ್ಯದಿಂದ ಬಳಲುತ್ತಿದ್ದ ಆಕೆಯ 16 ಮೂಳೆಗಳು ಸೀಳು ಬಿಟ್ಟಿದ್ದವು!
ನವದೆಹಲಿ, ಜೂನ್ 2: ಮನೆಬಿಟ್ಟು ಬಂದ ಆ ಸುದೀರ್ಘ 14 ವರ್ಷದಲ್ಲಿ ಆಕೆಯ ಬದುಕಿನಲ್ಲಿ ಏನೆಲ್ಲ ಬದಲಾವಣೆಯಾಗಿದೆ! ಸೀಳುಬಿಟ್ಟ 16 ಮೂಳೆಗಳು, 8 ಅತ್ಯಂತ ಗಂಭೀರ ಶಸ್ತ್ರಚಿಕಿತ್ಸೆಗಳು, ಬಡತನ... ಸಾಲು ಸಾಲು ಸಂಕಷ್ಟಗಳು ಎಲ್ಲವೂ ಆಕೆಯನ್ನು ಕುಗ್ಗಿಸುವ ಬದಲು ಮತ್ತಷ್ಟು ಗಟ್ಟಿಗೊಳಿಸಿವೆ.
ಬದುಕಿನ ಸಂಕಷ್ಟದ ಸನ್ನಿವೇಶಗಳು ಆಕೆಯ ಮನಸ್ಸಿನಲ್ಲಿ ಯಾವ ಪರಿ ಛಲ ಹುಟ್ಟಿಸಿದ್ದವು ಎನ್ನುವುದಕ್ಕೆ ಮೊನ್ನೆ ಪ್ರಕಟವಾದ ಯುಪಿಎಸ್ ಸಿ ಫಲಿತಾಂಶದಲ್ಲಿ, ಮೊದಲ ಪ್ರಯತ್ನದಲ್ಲೇ ಆಕೆ ಗಳಿಸಿದ 420 ನೇ ಸ್ಥಾನವೇ ಸಾಕ್ಷಿ!
ಮೇ 31 ರಂದು ಹೊರಬಿದ್ದ ಈ ಬಾರಿಯ ಯುಪಿಎಸ್ಸಿ ಫಲಿತಾಂಶ ಹಲವು ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದ್ದು ದಿಟ. ಅಂಥ ಮೈಲಿಗಲ್ಲುಗಳಲ್ಲಿ ಉಮ್ಮುಳ್ ಖೇರ್ ಸಾಧನೆ ಓದುಗರಲ್ಲೊಮ್ಮೆ ಧನ್ಯತೆಯ ಭಾವವನ್ನು ಹುಟ್ಟಿಸಲಿಕ್ಕೆ ಸಾಕು. ಆಕೆಯ ಕತೆ, ಇನ್ನೆಷ್ಟೋ ಪರಿತ್ಯಕ್ತ ಮಹಿಳೆಯರಿಗೆ, ಬಡವರಿಗೆ, ದೈಹಿಕ ನ್ಯೂನತೆಯಿಂದ ಬಳಲುತ್ತಿರುವವರಿಗೆ ಮಾದರಿಯೇ ಸರಿ.[ಕರ್ನಾಟಕದ ಹೆಮ್ಮೆ ಕೋಲಾರಕ್ಕೆ ನಂದಿನಿ ಎಂಬ ಮತ್ತೊಂದು ಕೋಡು!]
ರಾಜಸ್ಥಾನದ ಬೀದಿ ವ್ಯಾಪಾರಿಯ ಮಗಳಾದ ಆಕೆಯ ಮನೆಯಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದುದು ಬಡತನ ಮಾತ್ರ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ! ಹುಟ್ಟುತ್ತಲೇ ಮೂಳೆಯ ದೌರ್ಬಲ್ಯದಿಂದ ಬಳಲುತ್ತಿದ್ದ ಆಕೆಯ 16 ಮೂಳೆಗಳು ಸೀಳು ಬಿಟ್ಟಿದ್ದವು! 8 ಅತ್ಯಂತ ಕಠಿಣ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದ ಆಕೆ ವಿಧಿಗೆ ಶಾಪಹಾಕದ ದಿನವಿಲ್ಲ!
ಐದನೇ ತರಗತಿ ಓದುವ ಸಮಯದಲ್ಲಿ, ಹೊಟ್ಟೆಪಾಡು ಆಕೆಯ ಕುಟುಂಬವನ್ನು ಕರೆತಂದಿದ್ದು ದೆಹಲಿಗೆ. 8 ನೇ ತರಗತಿಯವರೆಗೂ ಸರ್ಕಾರಿ ಶಾಲೆಗಳಲ್ಲೇ ಓದಿದ ಆಕೆಯ ಓದಿಗೆ ಕುಟುಂಬವೇನೂ ಅಡ್ಡಬರಲಿಲ್ಲ. ಯಾಕಂದ್ರೆ ಆ ಶಾಲೆಗಳಿಗೆ ಶುಲ್ಕ ಕಟ್ಟುವ ಅಗತ್ಯವಿರಲಿಲ್ಲ!
ಆದರೆ ಮಗಳು ಮುಂದೆಯೂ ಓದಬೇಕು ಎಂದಾಗ ಶುರುವಾಗಿದ್ದು ತಲೆಬಿಸಿ! ಒಪ್ಪೊತ್ತಿನ ಊಟಕ್ಕೇ ತತ್ವಾರವಾಗಿರುವಾಗ ಓದು ಯಾರಿಗೆ ಬೇಕಿದೆ ಎಂಬುದು ಆಕೆಯ ಕುಟುಂಬದ ಅಂಬೋಣ. ಆಕೆಯ ಮುಂದೆ ಆಗ ನಿಂತಿದ್ದು ಓದು ಮತ್ತು ಕುಟುಂಬ ಎಂಬ ಎರಡು ಆಯ್ಕೆ! ಎರಡು ಕಣ್ಣಿನಲ್ಲಿ ಒಂದನ್ನು ಆಯ್ದುಕೊಳ್ಳಬೇಕಾದ ದಯನೀಯ ಸ್ಥಿತಿಯಲ್ಲೂ ಆಕೆ ಆರಿಸಿಕೊಂಡಿದ್ದು ಓದನ್ನ![ಶಕ್ತಿ ಮೀರಿ ಪ್ರಯತ್ನಿಸಿದ್ದರಿಂದ ಯಶಸ್ಸು: ಐಎಎಸ್ ಟಾಪರ್ ನಂದಿನಿ]
ಫೋಟೋ ಕೃಫೆ: ಫೇಸ್ ಬುಕ್
ಮನೆಯಿದ ಹೊರಬಂದ ಉಮ್ಮುಳ್
ತನ್ನ ಓದಿಗೆ ಪ್ರೋತ್ಸಾಹ ಸಿಗದ ಕಡೆ ತನಗೆ ಜಾಗವಿಲ್ಲ ಅನ್ನಿಸಿದ ಕೂಡಲೆ ದೈಹಿಕ ನ್ಯೂನತೆಯ ನಡುವಲ್ಲೂ ಮನೆಯಿಂದ ಹೊರಬಿದ್ದ ಉಮ್ಮುಳ್ ಖೇರ್ ಗೆ ಆಗ ವಯಸ್ಸು 14! ಓದುವುದರಲ್ಲಿ ಸದಾ ಮುಂದಿದ್ದ ಉಮ್ಮುಳ್ ಚಿಕ್ಕ ಮನೆಯೊಂದನ್ನು ಹುಡುಕಿಕೊಂದು, ಟ್ಯೂಶನ್ ಮಾಡಿ ಬಂದ ಹಣದಲ್ಲಿ ಮನೆಯ ಬಾಡಿಗೆ-ಓದಿನ ಖರ್ಚನ್ನು ಹೊಂದಿಸುತ್ತಿದ್ದಳು!
ಕಳೆಯಿತು ಸುದೀರ್ಘ 14 ವರ್ಷ
ದಿನಗಳು ಉರುಳಿದವು. ಈಗ ಆಕೆಯ ವಯಸ್ಸು 28. ಮನೆಬಿಟ್ಟು ಬರುವಾಗ ಆಕೆಗೆ 14 ವರ್ಷ. ಮನೆಯಿಂದ ಹೊರಬಂದೇ ಈಗ 14 ವರ್ಷ ಕಳೆದಿದೆ. ಮೊದಲ ಪ್ರಯತ್ನದಲ್ಲೇ ಉತ್ತಮ ರ್ಯಾಂಕ್ ಗಳೊಂದಿಗೆ ಐಎಎಸ್ ಪಾಸುಮಾಡಿದ ಉಮ್ಮುಳ್ ಗೆ ದೇಶದಾದ್ಯಂತ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ.[ಕೆ.ಆರ್.ನಂದಿನಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ 1ಲಕ್ಷ ರೂ. ಬಹುಮಾನ]
ಐಎಎಸ್ ಅಧಿಕಾರಿಯಾಗುವ ಕನಸು
ಐಎಎಸ್ ಅಧಿಕಾರಿಯಾಗಬೇಕೆಂಬುದು ಆಕೆಯ ಕನಸು. ಅಂಗವೈಕಲ್ಯದ ಕೋಟಾದಿಂದಾಗಿ ತನಗೆ ಆ ಅವಕಾಶ ಸಿಕ್ಕೇ ಸಿಗುತ್ತದೆ ಎಂಬುದು ಉಮ್ಮಳ್ ಆತ್ಮವಿಶ್ವಾಸದಿಂದ ಹೇಳುವ ಮಾತು. ಆಕೆಯ ಈ ಆತ್ಮವಿಶ್ವಾಸವೇ ಆಕೆಯನ್ನು ಈ ಸಾಧನೆಯ ಹಾದಿಯವರೆಗೂ ಕರೆತಂದಿದೆ.[ಸಂಘರ್ಷದ ಮಧ್ಯೆ ಯುಪಿಎಸ್ಸಿ ಪಾಸ್ ಮಾಡಿದ 14 ಕಾಶ್ಮೀರಿಗರು]
ಬಡಮಕ್ಕಳ ಸೇವೆಯಲ್ಲೆ ತೃಪ್ತಿ
ಈಗಲೂ ಬಡ ಮಕ್ಕಳಿಗೆ ಕಡಿಮೆ ಶುಲ್ಕದೊಂದಿಗೆ ಟ್ಯೂಶನ್ ಮಾಡುವ ಉಮ್ಮುಳ್, ಇಂಥ ಮಕ್ಕಳಿಂದ ನಾನು ಹೆಚ್ಚುನ ಹಣ ನಿರೀಕ್ಷಿಸುವುದು ತಪ್ಪು. ಕೇವಲ ಹಣಕ್ಕಷ್ಟೇ ನಾನು ಕೆಲಸ ಮಾಡುವುದಿಲ್ಲ. ಈ ಕೆಲಸದಿಂದ ನನ್ನ ಮನಸ್ಸಿಗೆ ತೃಪ್ತಿ ಸಿಗುತ್ತದೆ ಎನ್ನುತ್ತಾರೆ.[ಕನ್ನಡ ಮಾಧ್ಯಮದಲ್ಲಿ ಓದಿದ ಕೆಆರ್ ನಂದಿನಿ ಐಎಎಸ್ ಮುಕುಟ ಮಣಿ]
ಆದರ್ಶನೀಯ ಬದುಕು
ಓದಿಗಾಗಿ ಮನೆಯಿಂದ ಹೊರಬಂದು, ನ್ಯೂನತೆಯ ನಡುವಲ್ಲೂ ಮೊದಲ ಪ್ರಯತ್ನದಲ್ಲೇ ಇಂಥ ಕಠಿಣ ಪರೀಕ್ಷೆಯನ್ನು ಪಾಸು ಮಾಡಿದ ಉಮ್ಮುಳ್ ಜೀವನ ಪಯಣ ನಿಜಕ್ಕೂ ಆದರ್ಶನೀಯ.[ಅಂಧತ್ವಕ್ಕೆ ಸವಾಲು: ಯುಪಿಎಸ್ಸಿಯಲ್ಲಿ ಯಶಸ್ಸು ಗಳಿಸಿದ ಕೆಂಪಹೊನ್ನಯ್ಯ]