ಸಂಘರ್ಷದ ಮಧ್ಯೆ ಯುಪಿಎಸ್ಸಿ ಪಾಸ್ ಮಾಡಿದ 14 ಕಾಶ್ಮೀರಿಗರು
ಜಮ್ಮು ಮತ್ತು ಕಾಶ್ಮೀರ, ಜೂನ್ 1: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದು ವರ್ಷಗಳಿಂದ ಸಂಘರ್ಷ ಜಾರಿಯಲ್ಲಿದೆ. ಆದರೆ ಇದು ಅಲ್ಲಿನ ಯುಪಿಎಸ್ಸಿ ಪರೀಕ್ಷೆ ಬರೆಯುವವರ ಮೇಲೆ ಯಾವುದೇ ಪರಿಣಾಮ ಬಿದ್ದಂತೆ ಕಾಣಿಸುತ್ತಿಲ್ಲ. ಕಾರಣ ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲೇ ಮೊದಲ ಬಾರಿಗೆ 14 ಜನ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆ ಪಾಸ್ ಆಗಿದ್ದಾರೆ.
ಇದರಲ್ಲಿ ಉತ್ತರ ಕಾಶ್ಮೀರದ ಲಂಗಾಟೆ ಪ್ರದೇಶಕ್ಕೆ ಸೇರಿದ ಬಿಲಾಲ್ ಮೊಹಿದ್ದೀನ್ ತಮ್ಮ ಕೊನೆಯ ಯತ್ನದಲ್ಲಿ 10ನೇ ರ್ಯಾಂಕ್ ಗಳಿಸಿದ್ದಾರೆ. ಅವರಿಗೀಗ 31 ವರ್ಷ, ಜತೆಗೆ ನಾಲ್ಕನೇ ಪ್ರಯತ್ನ. ಇದು ಅವರ ಕೊನೆಯ ಪ್ರಯತ್ನವಾಗಿತ್ತು. ಸದ್ಯ ಅವರು ಭಾರತೀಯ ಅರಣ್ಯ ಸೇವೆಯಲ್ಲಿದ್ದು ಲಕ್ನೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2012ರಲ್ಲಿ ಅವರು ಕಾಶ್ಮೀರ ಕೆಎಎಸ್ ಪರೀಕ್ಷೆಯಲ್ಲಿ 15ನೇ ರ್ಯಾಂಕ್ ಗಳಿಸಿದ್ದರು. ನಂತರ ಅರಣ್ಯ ಸೇವೆಗೆ ನಿಯೋಜನೆಯಾಗಿದ್ದರು.[ಕನ್ನಡ ಮಾಧ್ಯಮದಲ್ಲಿ ಓದಿದ ಕೆಆರ್ ನಂದಿನಿ ಐಎಎಸ್ ಟಾಪರ್]

ವಿಶೇಷ ಎಂದರೆ ಜಮ್ಮು ಕಾಶ್ಮೀರ ಕೇಡರ್ ನಲ್ಲಿ ಕೇವಲ ಒಂದೇ ಹುದ್ದೆ ಖಾಲಿ ಇತ್ತು. ಇದಕ್ಕೆ ನಾನೇ ಆಯ್ಕೆಯಾಗಬೇಕು ಎಂಬ ಗುರಿ ಇಟ್ಟುಕೊಂಡು ಅವರು ಪರೀಕ್ಷೆ ಬರೆದಿದ್ದರು. ಈ ಮೂಲಕ ಕಾಶ್ಮೀರಿಗಳ ಸೇವೆ ಮಾಡಬೇಕು ಎಂಬ ಉದ್ದೇಶ ಅವರಿಗಿತ್ತು. ಇದೀಗ ಅವರು 10ನೇ ರ್ಯಾಂಕ್ ಗಳಿಸಿದ್ದಾರೆ.
"ನನಗೆ ನಿವೃತ್ತ ಕೆಎಎಸ್ ಅಧಿಕಾರಿ ನನ್ನ ತಂದೆಯೇ ಸ್ಪೂರ್ತಿ. ಇದಲ್ಲದೆ ಕರ್ನಾಟಕದಲ್ಲಿ ಕೆಎಎಸ್ ಅಧಿಕಾರಿಯಾಗಿರುವ ನನ್ನ ಹೆಂಡತಿಗೂ ಇದರ ಶ್ರೇಯಸ್ಸು ಸಲ್ಲಬೇಕು," ಎನ್ನುತ್ತಾರೆ ಬಿಲಾಲ್ ಮೊಹಿದ್ದೀನ್.[2016ನೇ ಸಾಲಿನ UPSC ಫಲಿತಾಂಶ ಪ್ರಕಟ, ಕರ್ನಾಟಕದ ನಂದಿನಿ ಪ್ರಥಮ]
ಸಾಮಾನ್ಯವಾಗಿ ಕಾಶ್ಮೀರಿಗಳು ಸರಕಾರಿ ಸೇವೆಗಳಿಂದ ದೂರ ಇರುವುದೇ ಹೆಚ್ಚು. ಆದರೆ 2009ರಲ್ಲಿ ಶಾ ಫೈಸಲ್ ಯುಪಿಎಸ್ಸಿಯಲ್ಲಿ ಮೊದಲ ರ್ಯಾಂಕ್ ಪಡೆಯುವುದರೊಂದಿಗೆ ಕಣಿವೆ ರಾಜ್ಯದಲ್ಲಿ ಸರಕಾರಿ ಸೇವೆಗಳ ಬಗ್ಗೆ, ಯುಪಿಎಸ್ಸಿ ಬಗ್ಗೆ ಆಸಕ್ತಿ ಹೆಚ್ಚಾಯಿತು. ಸದ್ಯ 14 ಜನ ಪಾಸಾಗಿರುವುದು ಕಾಶ್ಮೀರದ ಮಟ್ಟಿಗೆ ಗಮನಾರ್ಹ ಬೆಳವಣಿಗೆಯೇ ಸರಿ.












Click it and Unblock the Notifications