ಪದ್ಮನಾಭ ಪ್ರಸನ್ನ ಕುಮಾರ್ ದೆಹಲಿಯಲ್ಲಿ ಪತ್ತೆ
ಪದ್ಮನಾಭ ಪ್ರಸನ್ನ ಕುಮಾರ್ ಬೆಂಗಳೂರಿನಿಂದ ನಾಪತ್ತೆಯಾಗಿದ್ದರು. ಶನಿವಾರ ತನ್ನ ಮಗ ಡಿ.6ರಿಂದ ನಾಪತ್ತೆಯಾಗಿದ್ದಾನೆ ಎಂದು ಪ್ರಸನ್ನ ಕುಮಾರ್ ತಂದೆ ನಂಜುಡಪ್ಪ ಬೆಂಗಳೂರಿನ ಅಶೋಕ ನಗರ ಪೊಲೀಸರಿಗೆ ದೂರು ನೀಡಿದ್ದರು. ಡಿ.6ರ ಶುಕ್ರವಾರ ಪ್ರಸನ್ನ ಕುಮಾರ್ ಅವರು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತೇನೆ ಎಂದು ಮನೆಯಿಂದ ಹೋಗಿದ್ದರು. [ಕೆಜೆಪಿ ಸಂಸ್ಥಾಪಕ ಪ್ರಸನ್ನ ಕುಮಾರ್ ನಾಪತ್ತೆ]
ಅಂದಿನಿಂದಲೂ ಅವರ ಮೊಬೈಲ್ ಸಂಪರ್ಕ ಸಿಗುತ್ತಿಲ್ಲ, ಅವರು ನಾಪತ್ತೆಯಾಗಿದ್ದಾರೆ ಎಂದು ಪ್ರಸನ್ನ ಕುಮಾರ್ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದರು. ಸದ್ಯ, ಸೋಮವಾರ ನವದೆಹಲಿಯಲ್ಲಿ ಪದ್ಮನಾಭ ಪ್ರಸನ್ನ ಕುಮಾರ್ ಪತ್ತೆಯಾಗಿದ್ದಾರೆ. ಆದರೆ, ಕೆಜೆಪಿ ನಾಯಕರ ವಿರುದ್ಧ ಗಂಭೀರವಾ ಆರೋಪಗಳನ್ನು ಮಾಡುತ್ತಿದ್ದಾರೆ.
ಸದ್ಯ, ಪದ್ಮನಾಭ ಪ್ರಸನ್ನ ಕುಮಾರ್ ನವದೆಹಲಿಯ ಭದ್ರಾಪುರ ಪೊಲೀಸ್ ಠಾಣೆಯಲ್ಲಿದ್ದಾರೆ. ಕೆಜೆಪಿ ಮುಖಂಡರು ಬೆಂಗಳೂರಿನಿಂದ ನನ್ನನ್ನು ಅಪಹರಿಸಿ ದೆಹಲಿಗೆ ಕರೆತಂದರು. ನನ್ನ ಮೇಲೆ ಅವರು ಹಲ್ಲೆ ನಡೆಸಿದ್ದಾರೆ ಎಂದು ಪ್ರಸನ್ನ ಕುಮಾರ್ ಆರೋಪ ಮಾಡುತ್ತಿದ್ದಾರೆ. ಪೊಲೀಸರು ಅವರ ವಿಚಾರಣೆ ನಡೆಸುತ್ತಿದ್ದು, ನಂತರ ಅಪಹರಣವಾಗಿದ್ದು, ನಿಜವೇ ಎಂದು ತಿಳಿದುಬರಲಿದೆ.
ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಗಳಗಳನೆ ಅತ್ತು ಸುದ್ದಿ ಮಾಡಿದ್ದ ಪ್ರಸನ್ನ ಕುಮಾರ್, ಯಡಿಯೂರಪ್ಪ ಭೇಟಿಗೆ ತೆರಳುತ್ತೇನೆ ಎಂದು ಹೋಗಿ ಕಣ್ಮರೆ ಆಗಿದ್ದರು. ಸದ್ಯ ಕೆಜೆಪಿ ಮುಖಂಡರ ಮೇಲೆ ಅಪಹರಣದ ಆರೋಪ ಹೊರಿಸುತ್ತಿದ್ದಾರೆ. [ರಕ್ಷಣೆ ಬೇಕೆಂದು ಗಳಗಳನೆ ಅತ್ತ]