ಕಾಂಗ್ರೆಸ್, ಬಿಜೆಪಿಗೆ ಅರವಿಂದ್ ಹದಿನೆಂಟು ಷರತ್ತು!
ನವದೆಹಲಿ, ಡಿ. 14 : ಯಾವುದೇ ಷರತ್ತುಗಳಿಲ್ಲದೆ ದೆಹಲಿಯಲ್ಲಿ ಸರಕಾರ ರಚಿಸಲು ಬೆಂಬಲ ನೀಡುವುದಾಗಿ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷಕ್ಕೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಹಲವಾರು ಷರತ್ತುಗಳನ್ನು ವಿಧಿಸಿದ್ದಾರೆ.
32 ಸ್ಥಾನಗಳನ್ನು ಗೆದ್ದಿದ್ದರೂ ಸರಕಾರ ರಚಿಸಲು ಭಾರತೀಯ ಜನತಾ ಪಕ್ಷ ಹಿಂದೇಟು ಹಾಕಿದ್ದರಿಂದ 28 ಸ್ಥಾನಗಳನ್ನು ಗಳಿಸಿ ಎರಡನೇ ದೊಡ್ಡ ಪಕ್ಷವಾಗಿರುವ ಎಎಪಿಗೆ ಸರಕಾರ ರಚಿಸಲು ದೆಹಲಿ ರಾಜ್ಯಪಾಲ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಆಹ್ವಾನ ನೀಡಿದರು.
ನಜೀಬ್ ಜಂಗ್ ಅವರನ್ನು ಶನಿವಾರ ಬೆಳಿಗ್ಗೆ ಭೇಟಿ ಮಾಡಿಬಂದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅರವಿಂದ್ ಕೇಜ್ರಿವಾಲ್ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದು, ಜನ ಲೋಕಪಾಲ್ ಮಸೂದೆ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಉತ್ತರ ನೀಡಬೇಕೆಂದು ಆಗ್ರಹಿಸಿದ್ದಾರೆ. [ಕೇಜ್ರಿವಾಲ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರಾ?]
ಕಾಂಗ್ರೆಸ್ ಪಕ್ಷ ಷರತ್ತು ರಹಿತ ಬೆಂಬಲ ನೀಡುವುದಾಗಿ ಹೇಳಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ಅವರು, ಇಂದಿನ ಕಾಲದಲ್ಲಿ ಯಾವುದೂ ಪುಗಸಟ್ಟೆಯಾಗಿ ಸಿಗುವುದಿಲ್ಲ. ಏನನ್ನೋ ನಿರೀಕ್ಷಿಸಿಯೇ ಈ ಪಕ್ಷಗಳು ನಮಗೆ ಬೆಂಬಲ ನೀಡಲು ಮುಂದೆ ಬಂದಿವೆ ಎಂದು ಅವರು ಖಾರವಾಗಿ ಮತ್ತು ವ್ಯಂಗ್ಯವಾಗಿ ನುಡಿದಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ಮತ್ತು ಬಿಜೆಪಿಗಳಿಂದ ಉತ್ತರ ನಿರೀಕ್ಷಿಸಿ ಅವರಿಗೆ ಬರೆದಿರುವ ಪತ್ರದಲ್ಲಿನ 18 ಅಂಶಗಳಲ್ಲಿನ ಪ್ರಮುಖ ಸಂಗತಿಗಳು ಕೆಳಗಿನಂತಿವೆ. ಎರಡೂ ಪಕ್ಷಗಳಿಂದ ಉತ್ತರ ಬಂದನಂತರ ಅವೆಲ್ಲವನ್ನೂ ಸಾರ್ವಜನಿಕವಾಗಿ ಬಹಿರಂಗಗೊಳಿಸುವುದಾಗಿಯೂ ಅವರು ಹೇಳಿದ್ದಾರೆ. [ಹತ್ತು ದಿನ ಟೈಮ್ ಕೊಡಿ]

ವಿಐಪಿ ಸಂಸ್ಕೃತಿಗೆ ಕಡಿವಾಣ
ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಬೇಕು. ವಿಐಪಿಗಳಿಗೆ ವಿಶೇಷ ಭದ್ರತೆ, ವಿಐಪಿಗಳಿಗೆ ಸರಕಾರಿ ಬಂಗ್ಲೆ ನೀಡಬಾರದು. ಯಾವುದೇ ಮಂತ್ರಿಗೆ ಕೆಂಪು ದೀಪ, ಗೂಟದ ಕಾರು ನೀಡಬಾರದು. ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರಿಗೆ ಫಂಡ್ ನೀಡಬಾರದು.

ಜನ ಲೋಕಪಾಲ ಮಸೂದೆಗೆ ವಿಶೇಷ ಅಧಿವೇಶನ
ರಾಮ ಲೀಲಾ ಮೈದಾನದಲ್ಲಿ ಜನ ಲೋಕಪಾಲ್ ಮಸೂದೆ ಮಂಡನೆಗಾಗಿ ಆಮ್ ಆದ್ಮಿ ಪಕ್ಷ ವಿಶೇಷ ಅಧಿವೇಶನ ಆಯೋಜಿಸುತ್ತದೆ. ಇದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಒಪ್ಪುತ್ತದಾ?

ದೆಹಲಿಗೆ ಜನಲೋಕಪಾಲ ನೇಮಕ
ದೆಹಲಿಗೆ ಜನಲೋಕಪಾಲ ನೇಮಕವಾಗಬೇಕು ಮತ್ತು ಎಲ್ಲ ಹಗರಣಗಳ ತನಿಖೆ ನಡೆಸಬೇಕು.

ವಿದ್ಯುತ್ ಕಂಪನಿಗಳ ಲೆಕ್ಕಪತ್ರ ಶೋಧನೆ
ವಿದ್ಯುತ್ ಕಂಪನಿಗಳ ಲೆಕ್ಕಪತ್ರ ಶೋಧನೆ ಮತ್ತು ದೆಹಲಿಯ ವಿದ್ಯುತ್ ಬೆಲೆಯನ್ನು ಇಳಿಸಬೇಕು.

ಜನರು ತಾವೇ ತಮ್ಮ ಬಡಾವಣೆ ನಿಭಾಯಿಸಬೇಕು
ಜನರು ತಮ್ಮ ಬಡಾವಣೆ, ಕಾಲೋನಿ, ನಗರವನ್ನು ನಿಭಾಯಿಸಲು ಮುಕ್ತ ಅವಕಾಶ ನೀಡಬೇಕು.

ದೆಹಲಿಗೆ ಪೂರ್ಣ ರಾಜ್ಯ ಸ್ಥಾನಮಾನ
ದೆಹಲಿಗೆ ಪೂರ್ಣ ರಾಜ್ಯ ಸ್ಥಾನಮಾನ ನೀಡಬೇಕು. ದೆಹಲಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆಯ ಕೆಲಸಗಳಲ್ಲಿ ಕೇಂದ್ರ ಸರಕಾರ ಮೂಗು ತೂರಿಸಬಾರದು.

ಖಾಸಗಿ ಕಂಪನಿಗಳ ಲೆಕ್ಕಪತ್ರ ಪರಿಶೋಧನೆ
ವಿದ್ಯುತ್ ಕಂಪನಿಗಳ ಲೆಕ್ಕಪತ್ರ ಶೋಧನೆ ಮತ್ತು ದೆಹಲಿಯ ವಿದ್ಯುತ್ ಬೆಲೆಯನ್ನು ಇಳಿಸಬೇಕು. ಈ ಕಂಪನಿಗಳ ವಿರುದ್ಧ ಹಲವಾರು ಆರೋಪಗಳು ಕೇಳಿಬಂದಿವೆ.

ವಿದ್ಯುತ್ ಮೀಟರ್ ಹಗರಣದ ತನಿಖೆ
ಸ್ವತಂತ್ರ ಸಂಸ್ಥೆಯಿಂದ ವಿದ್ಯುತ್ ಮೀಟರ್ ಹಗರಣದ ಕುರಿತಾಗಿ ತನಿಖೆಯಾಗಬೇಕು.

ನೀರು ಮಾಫಿಯಾ ಮೇಲೆ ಕ್ರಮ
ದೆಹಲಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ನೀರು ಮಾಫಿಯಾ ಮೇಲೆ ಒಂದು ಕಣ್ಣಿಡಬೇಕು ಮತ್ತು ಅವುಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮ ಜರುಗಿಸಬೇಕು.

ಅನಧಿಕೃತ ಬಡಾವಣೆ ಅಧಿಕೃತ
ಒಂದು ವರ್ಷದೊಳಗಾಗಿ ದೆಹಲಿಯ ಅನಧಿಕೃತ ಬಡಾವಣೆಗಳನ್ನು ರೆಗ್ಯುಲರೈಸ್ ಮಾಡಬೇಕು. ಅವುಗಳಿಗೆ ಸರ್ವರೀತಿಯ ಅನುಕೂಲತೆಗಳನ್ನು ಒದಗಿಸಿಕೊಡಬೇಕು.

ಸ್ಲಂಗಳಿಗೆ ಕಾಯಕಲ್ಪ
ದೆಹಲಿಯಲ್ಲಿ ಮೂರನೇ ಒಂದರಷ್ಟು ಪ್ರದೇಶ ಸ್ಲಂನಿಂದ ಕೂಡಿದೆ. ಸ್ಲಂನಲ್ಲಿ ವಾಸಿಸುತ್ತಿರುವ ಎಲ್ಲ ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.

ಕಾಯಂ ಉದ್ಯೋಗಿಗಳ ಸಂಖ್ಯೆ ಹೆಚ್ಚಬೇಕು
ಶಿಕ್ಷಕ, ವೈದ್ಯ, ನರ್ಸ್ ಅಥವಾ ಯಾರೇ ಆಗಲಿ ದೆಹಲಿಯಲ್ಲಿ ಗುತ್ತಿಗೆಯ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಹೆಚ್ಚುತ್ತಿದ್ದಾರೆ. ಅವರನ್ನು ಸಾಕಷ್ಟು ಸುಲಿಗೆ ಮಾಡಲಾಗುತ್ತಿದೆ. ಇದು ನಿಲ್ಲಬೇಕು. ಪರ್ಮನೆಂಟ್ ಉದ್ಯೋಗಿಗಳು ಹೆಚ್ಚಬೇಕು.

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ತಡೆ
ದೆಹಲಿಯಲ್ಲಿ ಮಹಿಳೆಯರ ಮೇಲೆ ಅಪರಾಧ ಹೆಚ್ಚುತ್ತಿದೆ. ಮಹಿಳೆಯರು ಅಸುರಕ್ಷಿತರಾಗುತ್ತಿದ್ದಾರೆ. ಇದನ್ನು ಮಟ್ಟಹಾಕಲು ಆರೋಪಿಗಳ ಮೇಲೆ ಹೂಡಿರುವ ಕೇಸ್ ಗಳು 6 ತಿಂಗಳಲ್ಲಿ ಇತ್ಯರ್ಥವಾಗುವಂತಾಗಬೇಕು.

ಮೌಲ್ಯವರ್ಧಿತ ತೆರಿಗೆಗೆ ಸರಳೀಕರಣ
ಮೌಲ್ಯವರ್ಧಿತ ತೆರಿಗೆಯನ್ನು ಸರಳೀಕೃತಗೊಳಿಸಬೇಕು. ಅತ್ಯಧಿಕ ವ್ಯಾಟ್ ನಿಂದಾಗಿ ವ್ಯಾಪಾರಿಗಳು ಸಂಕಟ ಅನುಭವಿಸುತ್ತಿದ್ದಾರೆ. ಈ ವ್ಯಾಪಾರಿಗಳು ಹೆಚ್ಚಾಗಿ ಸಾಮಾನ್ಯರೇ ಆಗಿರುತ್ತಾರೆ. ಹೀಗಾಗಿ ಆಮ್ ಆದ್ಮಿ ಪಕ್ಷ ವ್ಯಾಟ್ ಅನ್ನು ಸರಳೀಕರಣಗೊಳಿಸಲು ಇಚ್ಛಿಸುತ್ತದೆ.

ವಿದೇಶಿ ನೇರ ಬಂಡವಾಳ ಹೂಡಿಕೆ ಬೇಡ
ಆಮ್ ಆದ್ಮಿ ಪಕ್ಷ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕಡು ವಿರೋಧಿಯಾಗಿದೆ. ರಿಟೇಲ್ ಕ್ಷೇತ್ರದಲ್ಲಿ ಎಫ್ ಡಿಐ ಇರಲೇಕೂಡದು.

ಗ್ರಾಮಸ್ಥರಿಗೆ ಅನುಕೂಲತೆ
ದೆಹಲಿಯಲ್ಲಿ 360 ಹಳ್ಳಿಗಳಿವೆ. ಗ್ರಾಮಸ್ಥರ ಜಮೀನನ್ನು ಕಿತ್ತುಕೊಂಡು ಲಾಭಕ್ಕಾಗಿ ಬಿಲ್ಡರ್ ಗಳಿಗೆ ನೀಡಲಾಗಿದೆ. ಹಳ್ಳಿಗರಿಗೆ ಯಾವುದೇ ಅನುಕೂಲತೆಗಳನ್ನು ಮಾಡಿಲ್ಲ. ಇದೆಲ್ಲ ಸರಿಯಾಗಬೇಕು.

ವಿದ್ಯಾಭ್ಯಾಸ ದೆಹಲಿಯ ಬಹುದೊಡ್ಡ ಸಮಸ್ಯೆ
ವಿದ್ಯಾಭ್ಯಾಸ ದೆಹಲಿಯನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ಖಾಸಗಿ ಶಾಲೆಗಳ ಶುಲ್ಕ ವಿಪರೀತವಾಗಿದೆ ಮತ್ತು ಸರಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇರುವುದಿಲ್ಲ.

ಬಡವರಿಗೆ ನಿಲುಕದ ಆಸ್ಪತ್ರೆ ಸೇವೆ
ದೆಹಲಿಯ ಆಸ್ಪತ್ರೆಗಳು ಬಡವರಿಗೆ ನಿಲುಕದಂತಾಗಿವೆ. ಸರಕಾರಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ಮತ್ತು ವೈದ್ಯರೇ ಇಲ್ಲದಿರುವುದು ಬಡವರನ್ನು ಕಾಡುತ್ತಿವೆ.
ರಾಜ್ಯಪಾಲರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ದೆಹಲಿಯಲ್ಲಿ ಸರಕಾರ ರಚಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ 10 ದಿನಗಳ ಕಾಲಾವಕಾಶವನ್ನು ಅರವಿಂದ್ ಕೇಜ್ರಿವಾಲ್ ಅವರು ಕೇಳಿದ್ದಾರೆ. ಕೇಜ್ರಿವಾಲ್ ಅವರು ವಿಧಿಸಿರುವ ಷರತ್ತುಗಳನ್ನು ಗಮನಿಸಿದರೆ ಕಾಂಗ್ರೆಸ್ ಅವರಿಗೆ ನೀಡಬೇಕಾಗಿರುವ ಬೆಂಬಲದಿಂದ ಹಿಂದೆ ಸರಿದರೂ ಅಚ್ಚರಿಯಿಲ್ಲ. ಪ್ರಸಕ್ತ ವಿದ್ಯಮಾನಗಳನ್ನು ಗಮನಿಸಿದರೆ ದೆಹಲಿಗೆ ಮತ್ತೆ ಚುನಾವಣೆ ನಡೆಸುವುದು ಅನಿವಾರ್ಯವಾಗುತ್ತದೆ.












Click it and Unblock the Notifications