ಕೇಂದ್ರದಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ವೀಸಾ, ಪ್ರಯಾಣ ನಿರ್ಬಂಧ ಸಡಿಲಿಕೆ
ನವದೆಹಲಿ, ಅಕ್ಟೋಬರ್ 22: ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲಿನ ವೀಸಾ, ಪ್ರಯಾಣ ನಿರ್ಬಂಧವನ್ನು ಸಡಿಲಗೊಳಿಸಿದೆ.
ವೀಸಾ ಮತ್ತು ಪ್ರಯಾಣ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಿಸಲು ನಿರ್ಧರಿಸಿದ್ದು, ಆ ಮೂಲಕ ದೇಶಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಭಾರತೀಯರು ಮತ್ತು ವಿದೇಶಿ ಪ್ರಜೆಗಳಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ಆದ್ದರಿಂದ ಭಾರತಕ್ಕೆ ಯಾವುದೇ ಉದ್ದೇಶಕ್ಕೆ ಆಗಮಿಸಲು ಬಯಸುವ ಎಲ್ಲ ವಿದೇಶಿ ಪ್ರಜೆಗಳಿಗೆ ಮತ್ತು ಒಸಿಐ ಮತ್ತು ಪಿಐಒ ಕಾರ್ಡ್ ಹೊಂದಿರುವವರಿಗೆ ಅನುಮತಿ ನೀಡಲು ತೀರ್ಮಾನಿಸಲಾಗಿದೆ.
ಕೊರೊನಾ ಸೋಂಕು ಉಂಟಾಗಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2020ರ ಫೆಬ್ರವರಿಯಿಂದೀಚೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರ ಆಗಮನ ಮತ್ತು ನಿರ್ಗಮನ ಸಂಚಾರ ನಿರ್ಬಂಧಿಸಲು ಹಂತಹಂತವಾಗಿ ಕ್ರಮಗಳನ್ನು ಕೈಗೊಂಡಿತ್ತು. ಇದೀಗ ಸಡಿಲಿಕೆ ಮಾಡಲಾಗುತ್ತಿದೆ.

ಒಂದು ವೇಳೆ ಅಂತಹ ವೀಸಾಗಳ ಅವಧಿ ಮುಗಿದಿದ್ದರೆ ಸಂಬಂಧಿಸಿದ ಭಾರತೀಯ ರಾಯಭಾರ ಕಚೇರಿಗಳಿಂದ ಸೂಕ್ತ ವರ್ಗದಡಿ ಹೊಸ ವೀಸಾಗಳನ್ನು ಪಡೆಯಬಹುದಾಗಿದೆ. ಯಾವುದೇ ವಿದೇಶಿಯರು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಭೇಟಿ ನೀಡಲು ಬಯಸಿದರೆ ಅವರು ತಮ್ಮ ಪರಿಚಾರಕರು ಸೇರಿದಂತೆ ಪ್ರತ್ಯೇಕ ವೈದ್ಯಕೀಯ ವೀಸಾಗಾಗಿ ಅರ್ಜಿ ಸಲ್ಲಿಸಬಹುದು.
ಅಧಿಕೃತ ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ತಪಾಸಣಾ ಕೇಂದ್ರಗಳ ಮೂಲಕ ವಾಯು ಅಥವಾ ಜಲಮಾರ್ಗದ ಮೂಲಕ ಪ್ರವೇಶಿಸಲು ಅವಕಾಶವಿದೆ. ಆದರೆ ಪ್ರವಾಸಿ ವೀಸಾ ಹೊಂದಿರುವವರಿಗೆ ಈ ಅವಕಾಶ ಇರುವುದಿಲ್ಲ.
ಈ ನಿರ್ಧಾರದಡಿ, ವಂದೇ ಭಾರತ್ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮಾನಗಳು, ವಾಯುಸಾರಿಗೆ ಬಬಲ್ ವ್ಯವಸ್ಥೆ ಅಥವಾ ನಾಗರಿಕ ವಿಮಾನಯಾನ ಸಚಿವಾಲಯ ಅವಕಾಶ ನೀಡಿರುವ ಯಾವುದೇ ನಿಗದಿಯಾಗದ ವಾಣಿಜ್ಯ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಕೇಂದ್ರ ಸರ್ಕಾರ ಹಂತ ಹಂತವಾಗಿ ನಿಯಮಗಳನ್ನು ಸಡಿಲಿಸಲು ನಿರ್ಧರಿಸಿರುವ ಜೊತೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಹಾಲಿ ಇರುವ ವೀಸಾಗಳು ಪುನರ್ ಜಾರಿಗೆ ಬರಲಿದೆ.












Click it and Unblock the Notifications