"ಬಾಯಿಗೆ ಬಂದದ್ದು ಮಾತನಾಡುವುದಲ್ಲ" ಡಿಕೆಶಿ-ಎಂ.ಬಿ. ಪಾಟೀಲ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ
"ಬಾಯಿ ಇದೆ ಎಂದು ಏನು ಬೇಕಾದರೂ ಮಾತನಾಡುವುದಲ್ಲ, ನಮ್ಮ ಕುಟುಂಬದ 100 ಎಕರೆ ಭೂಮಿ ಇದೆ ಎನ್ನುವ ಆರೋಪವನ್ನು ಸಾಬೀತು ಮಾಡಬೇಕು ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ" ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಎಚ್ಚರಿಸಿದ್ದಾರೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದಿದ್ದಾರೆ. ಬಾಯಿ ಇದೆ ಎಂದು ಏನು ಬೇಕಾದರೂ ಮಾತನಾಡುವುದಲ್ಲ. ಎಂ.ಬಿ. ಪಾಟೀಲ್ ಅವರನ್ನು ವಿದ್ಯಾವಂತರು ಅಂದುಕೊಂಡಿದ್ದೆ. ಯಾವ ಆಧಾರದ ಮೇಲೆ ಮಾತನಾಡಿದ್ದರೋ ಗೊತ್ತಿಲ್ಲ. ಸಚಿವ ಎಂ.ಬಿ. ಪಾಟೀಲ್ ಅವರು ನಮ್ಮ ಕುಟುಂಬದ 100 ಎಕರೆ ಭೂಮಿ ಇದೆ ಎಂದು ಆರೋಪ ಮಾಡಿದ್ದಾರೆ. ಇದನ್ನು ಸಾಬೀತು ಮಾಡಿದರೆ ಅವರಿಗೆ ನಾನು ತಲೆಬಾಗುತ್ತೇನೆ. ಇಲ್ಲದಿದ್ದರೆ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಎಚ್ಚರಿಸಿದ್ದಾರೆ.
ಪೋಸ್ಟರ್ ರಾಜಕೀಯದ ಬಗ್ಗೆ ವ್ಯಂಗ್ಯ
ಕೆಲವು ಪುಂಡಪೋಕರಿ ಚೇಲಾಗಳು ಈ ಕೆಲಸ ಮಾಡಿದ್ದಾರೆ. ಅವರಿಗೆಲ್ಲ ಉತ್ತರಿಸಲು ಆಗಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಪೋಸ್ಟರ್ ರಾಜಕೀಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ ಈಗಿನ 'ಸ್ಟೇಟಸ್ ಮುಖ್ಯಮಂತ್ರಿ'ಗಳು ಕೆಲವು ಚೇಲಾಗಳನ್ನು ನಿಖಿಲ್ ಕುಮಾರಸ್ವಾಮಿ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರನ್ನು ಬೈಯಲು ಬಿಟ್ಟಿದ್ದಾರೆ. ಅತೀ ಹೆಚ್ಚು ಬೈದವರಿಗೆ ಮಂತ್ರಿಸ್ಥಾನ ನೀಡಲಾಗುವುದು ಎಂದು ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಆದ್ರೆ ಇವರೆಲ್ಲ ಮನೆ ಸೇರಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಶಾಸಕ ಬಾಲಕೃಷ್ಣಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು
ನಿಖಿಲ್ ಲೇಔಟ್ ಮಾಡ್ತೀನಿ ಎಂಬ ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ನಿಖಿಲ್, ರೈತರಿಗೆ ಬೇಕಿರುವುದು ನೆಮ್ಮದಿಯ ಜೀವನ, ಸ್ವಾಭಿಮಾನದ ಬದುಕು. ಶಾಸಕರಿಗೆ ಲೇಔಟ್ ಬೇಕಾಗಿದೆ ಎಂದು ತಿರುಗೇಟು ನೀಡಿದರು. ಮುಂದುವರಿದು ವಿಧಾನಸೌಧದಲ್ಲಿ ಚರ್ಚೆಗೆ ಸಂಬಂಧಿಸಿದಂತೆ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ, 'ನಾನೂ ಟೌನ್ಶಿಪ್ ಮಾಡುತ್ತಿದ್ದೇನೆ' ಎಂದು ಹೇಳಿದ್ದಾಗಿ ಸುಳ್ಳು ವದಂತಿ ಹರಡಿಸಿದ್ದಾರೆ. ಒಂದು ವೇಳೆ 'ಅಲ್ಲಿ ಫಲವತ್ತಾದ ಭೂಮಿ ಇದೆ, ರೈತರಿಗೆ ಅನ್ಯಾಯ ಮಾಡಿ, 10 ಲಕ್ಷಕ್ಕೂ ಅಧಿಕ ಗಿಡಮರಗಳನ್ನು ಕಡಿದು ಟೌನ್ಶಿಪ್ ಮಾಡುತ್ತಿದ್ದೇವೆ' ಎಂದು ಹೇಳಿದ್ದರೆ ಪ್ರಧಾನಮಂತ್ರಿಗಳು ಒಪ್ಪುತ್ತಿದ್ದರೇ ಎಂದೂ ಪ್ರಶ್ನಿಸಿದ್ದಾರೆ.
ವಿಧಾನಸೌಧದ ಎಸಿ ರೂಮ್ನಲ್ಲಿ ಚರ್ಚೆ ಬೇಡ. ರೈತರಿಗೆ ಅನ್ಯಾಯವಾಗುತ್ತಿರುವ ಪ್ರದೇಶದಲ್ಲೇ, ರೈತರ ಮಧ್ಯೆ ಪರ-ವಿರೋಧ ಚರ್ಚೆಯಾಗಲಿ. ಕುಮಾರಸ್ವಾಮಿ ಅವರಿಗೆ ಯಾವುದೇ ತಂಡ ಇಲ್ಲ. ತಂಡ ಇರುವುದು ಮುಖ್ಯಮಂತ್ರಿಗಳಿಗೆ. ನಮ್ಮ ಕಾರ್ಯಕರ್ತರು ಯಾರೂ ಬರುವುದಿಲ್ಲ. ನೀವೇ ನಿಮ್ಮ ಕಾರ್ಯಕರ್ತರು, ನಿಮ್ಮ ಚೇಲಾಗಳನ್ನು ಕರೆದುಕೊಂಡು ಬಂದು ರೈತರ ಮಧ್ಯೆ ಚರ್ಚೆ ಮಾಡಿ. ಸತ್ಯಾಸತ್ಯತೆ ಹೊರಬರಲಿ ಎಂದೂ ಅವರು ಹೇಳಿದ್ದಾರೆ.
"ಬದನೆಕಾಯಿ ಬೆಳೆದು ಕಾಲೇಜು ಕಟ್ಟಿದ್ದಾರಾ?"
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಬಗ್ಗೆಯೂ ನಿಖಿಲ್ ಕುಮಾರಸ್ವಾಮಿ ಅವರು ಟೀಕೆ ಮಾಡಿದ್ದಾರೆ. "ಇವರೇನು ಬದನೆಕಾಯಿ ಬೆಳೆದು ಸ್ಕೂಲ್, ಕಾಲೇಜು, ಕಮರ್ಷಿಯಲ್ ಬಿಲ್ಡಿಂಗ್ ಕಟ್ಟಿದ್ದಾರೆಯೇ ಎಂದು ಪ್ರಶ್ನೆ ಮಾಡಿರುವ ಅವರು, ನಮಗೂ ಪೋಸ್ಟರ್ ಅಭಿಯಾನ ಮಾಡಲು ಬರುತ್ತದೆ. ಆದರೆ ಇವರಂತೆ ಕೀಳು ಮಟ್ಟದ ರಾಜಕಾರಣ ಮಾಡಬಾರದು ಎಂದು ಸುಮ್ಮನಿದ್ದೇವೆ ಎಂದಿದ್ದಾರೆ.














Click it and Unblock the Notifications