ಆನ್ಲೈನ್ನಲ್ಲಿ ಲವ್, ಬಿಸಿನೆಸ್ ಆಸೆ ತೋರಿಸಿ ಕೋಟಿ ಕೋಟಿ ವಂಚಿಸಿದ್ದ ಕುಖ್ಯಾತ ಯುವತಿ ಅರೆಸ್ಟ್
ಬೆಂಗಳೂರು: ಪ್ರೇಮಪಾಶ ಬಲೆಯೊಡ್ಡಿ ಮತ್ತು ಉದ್ಯಮದಲ್ಲಿ ತನ್ನೊಂದಿಗೆ ಪಾಲುದಾರಿ ಹೊಂದುವಂತೆ ನಕಲಿ ಜಾಲ ಹೆಣೆದು ಯುವಕರಿಂದ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಕೇರಳದ ಕುಖ್ಯಾತ ಯುವತಿಯೊಬ್ಬಳನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಬಂಧಿತಳನ್ನು ಎರ್ನಾಕುಲಂ ಜಿಲ್ಲೆಯ ಆಲುವಾ ಸಮೀಪದ ಎಡತ್ತಲ ನಿವಾಸಿ ಶಾಮ್ಲಾ (29) ಎಂದು ಗುರುತಿಸಲಾಗಿದೆ.
ಈ ಬಂಧಿ ಯವತಿ ಶಾಮ್ಲಾ ಶ್ರೀಮಂತರನ್ನು ಟಾರ್ಗೆಟ್ ಮಾಡುತ್ತಿದ್ದಳು. ಇತ್ತೀಚೆಗೆ ಯುವಕನೊಬ್ಬನಿಗೆ ಬರೋಬ್ಬರಿ 50 ಲಕ್ಷ ರೂಪಾಯಿ ವಂಚಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣ ಕೇರಳದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಅದರ ಬೆನ್ನಲ್ಲೆ ತನಿಖೆ ಚುರುಕುಗೊಳಿಸಿದ ಪೊಲೀಸರು ಆಕೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಯುವಕರಿಗೆ ಗಾಳ
ಶಾಮ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯಳಾಗಿ ಇರುತ್ತಿದ್ದಳು. ಪೆರುಂಬಾವೂರ್ ಸಮೀಪದ ಮಂಜಪಟ್ಟಿ ನಿವಾಸಿಯಾದ ಯುವಕನಿಗೆ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದಳು. ದಿನಕಳೆದಂತೆ ಇಬ್ಬರ ನಡುವೆ ಮಾತುಕತೆ ಬೆಳೆದು ಸ್ನೇಹ ಗಟ್ಟಿಯಾಗಿತ್ತು. ಮೊಬೈಲ್ ಸಂಖ್ಯೆಗಳನ್ನು ಹಂಚಿಕೊಂಡು ದಿನವಿಡೀ ಮಾತನಾಡುತ್ತಿದ್ದರು. ಆತನನ್ನು ತಾನು ಗಾಢವಾಗಿ ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗುವುದಾಗಿ ನಂಬಿಸಿದ್ದಳು. ಜೊತೆಗೆ ತನ್ನ ಆನ್ಲೈನ್ ಉದ್ಯಮದಲ್ಲಿ ಪಾಲುದಾರಿಕೆ ನೀಡುವುದಾಗಿ ತಿಳಿಸಿ ಹಣ ಹೂಡಿಕೆ ಮಾಡುವಂತೆ ಪುಸಲಾಯಿಸಿದ್ದಳು.ಇದಕ್ಕೆ ಆ ಯುವಕ ಒಪ್ಪಿದ್ದ.
ಮದುವೆಯಾಗಲಿರುವ ಯುವತಿಯ ಮಾತನ್ನು ಪೂರ್ಣವಾಗಿ ನಂಬಿದ ಆ ಯುವಕ, 2024ರ ಸೆಪ್ಟೆಂಬರ್ 3 ರಿಂದ ನವೆಂಬರ್ 20 ರವರೆಗಿನ ಅಲ್ಪಾವಧಿಯಲ್ಲಿ ಹಂತ-ಹಂತವಾಗಿ ಒಟ್ಟು 50 ಲಕ್ಷ ರೂಪಾಯಿ ಆಕೆಯ ಬ್ಯಾಂಕ್ ಹಾಗೂ ಗೂಗಲ್ ಪೇ ಖಾತೆಗಳಿಗೆ ವರ್ಗಾವಣೆ ಮಾಡಿದ್ದ. ಆದರೆ, ಹಣ ಕೈ ಸೇರಿದ ತಕ್ಷಣ ಶಾಮ್ಲಾಳ ನಿಜ ರೂಪ ಬಯಲಾಗಿತ್ತು. ಮದುವೆ ಪ್ರಸ್ತಾಪದಿಂದ ದೂರ ಸರಿದಿದ್ದಲ್ಲದೆ, ಉದ್ಯಮದ ಪಾಲುದಾರಿಕೆಯನ್ನೂ ನೀಡದೆ ವಂಚಿಸತೊಡಗಿದಳು.
ಕೇರಳದ ವಿವಿಧ ಜಿಲ್ಲೆಗಳಲ್ಲೂ ವಂಚನೆ ಜಾಲ
ತಾನು ಸಂಪೂರ್ಣವಾಗಿ ವಂಚನೆಗೊಳಗಾಗಿರುವುದನ್ನು ಅರಿತ ಸಂತ್ರಸ್ತ ಯುವಕ ತನ್ನ ಹಣವನ್ನು ಮರಳಿ ಕೇಳಿದಾಗ ಆಕೆಯಿಂದ ಕೊಲೆ ಬೆದರಿಕೆಗಳು ಬಂದಿವೆ. ಇದರಿಂದ ಬೇಸತ್ತ ಯುವಕ ಪೆರುಂಬಾವೂರ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾನೆ. ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ತಕ್ಷಣ ಕಾರ್ಯಾಚರಣೆಗೆ ಇಳಿದು, ಡಿಜಿಟಲ್ ಮತ್ತು ಬ್ಯಾಂಕಿಂಗ್ ವಹಿವಾಟಿನ ಸಾಕ್ಷ್ಯಗಳ ಆಧಾರದ ಮೇಲೆ ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಶಾಮ್ಲಾಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಹನಿಟ್ರ್ಯಾಪ್ ಶೈಲಿಯಲ್ಲಿ ಶ್ರೀಮಂತರಿಗೆ ಬಲೆ
ಇನ್ನು ಪೊಲೀಸರ ತನಿಖೆಯ ವೇಳೆ ಬಯಲಾದ ಸತ್ಯಗಳು ಸ್ವತಃ ಹಿರಿಯ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ. ಆರೋಪಿ ಶಾಮ್ಲಾ ಕೇವಲ ಒಬ್ಬ ಯುವಕನಿಗೆ ಮಾತ್ರವಲ್ಲದೆ ಮಲಪ್ಪುರಂ, ವಯನಾಡು, ಕೊಠಮಂಗಲಂ ಮತ್ತು ಆಲುವಾ ಸೇರಿದಂತೆ ಕೇರಳದ ವಿವಿಧ ಜಿಲ್ಲೆಗಳ ಹಲವು ಶ್ರೀಮಂತ ಯುವಕರನ್ನು ಇದೇ ಹನಿಟ್ರಾಪ್ ಶೈಲಿಯಲ್ಲಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಕೊಠಮಂಗಲಂನ ವ್ಯಕ್ತಿಯೊಬ್ಬರಿಂದ 20 ಲಕ್ಷ ರೂಪಾಯಿ ಹಾಗೂ ಆಲುವಾ ಮೂಲದ ವ್ಯಕ್ತಿಯಿಂದ 11 ಲಕ್ಷ ರೂಪಾಯಿ ದೋಚಿದ್ದಾಳೆ.
ಈ ರೀತಿ ನೂರಾರು ಯುವಕರನ್ನು ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಶಾಮ್ಲಾ, ಆ ಹಣದಿಂದ ಐಷಾರಾಮಿ ಮನೆ, ದುಬಾರಿ ವಾಹನಗಳು ಹಾಗೂ ಮೋಜಿನ ಜೀವನ ನಡೆಸುತ್ತಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದು, ಈ ಇಡೀ ವಂಚನೆಯ ಹಿಂದೆ ದೊಡ್ಡ ಸಂಘಟಿತ ಜಾಲವಿದೆಯೇ ಅಥವಾ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ನಿಟ್ಟಿನಲ್ಲಿ ತನಿಖೆ ತೀವ್ರಗೊಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ನಡೆಸುವಾಗ ಎಚ್ಚರಿಕೆ ಅಗತ್ಯ ಎಂದು ಪೊಲೀಸರು ತಿಳಿಸಿದ್ದಾರೆ. ಆನ್ಲೈನ್ನಲ್ಲಿ ಯುವತಿಯರನ್ನು ನಂಬಿ ಮೋಸ ಹೋಗುವವರಿಗೆ ಇದೊಂದು ನಿದರ್ಶನವಾಗಿದ್ದು, ಜಾಗ್ರತೆ ವಹಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.














Click it and Unblock the Notifications