ಸೂಯೆಜ್ ಫಾರಂ ಕುರಿತ ರಾಮದಾಸ್ ಪ್ರಶ್ನೆಗೆ ಪ್ರತಾಪ ಸಿಂಹ ತಿರುಗುತ್ತರ
ಮೈಸೂರು, ಮೇ 15: 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ನಿಂದಾಗಿ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳ ಅಭಿವೃದ್ಧಿಗೆ ಅನುಕೂಲವಾಗಲಿದ್ದು, ಹೆಚ್ಚಿನ ಉದ್ಯೋಗ ಸೃಷ್ಟಿ ಆಗಲಿದೆ ಎಂದಿದ್ದಾರೆ ಸಂಸದ ಪ್ರತಾಪ್ ಸಿಂಹ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಂಕಷ್ಟಕ್ಕೀಡಾಗಿದ್ದು, ಪ್ಯಾಕೇಜ್ ನಿಂದ ಪುನಶ್ಚೇತನಗೊಳ್ಳಲಿದೆ. ಇದು ಖಂಡಿತ ಕೈಗಾರಿಕೆಗಳ ಅಭಿವೃದ್ಧಿಗೆ, ಉದ್ಯೋಗ ಸೃಷ್ಟಿಗೆ ದೊಡ್ಡ ಅನುಕೂಲ ಮಾಡಿಕೊಡಲಿದೆ ಎಂದು ಭಾವಿಸುತ್ತೇನೆ" ಎಂದರು. ಇದೇ ಸಂದರ್ಭ, ಸೂಯೆಜ್ ಫಾರಂ ಕುರಿತು ಶಾಸಕ ರಾಮದಾಸ್ ಎತ್ತಿರುವ ಪ್ರಶ್ನೆಗಳಿಗೂ ಪ್ರತಿಕ್ರಿಯಿಸಿದ್ದಾರೆ.
ಸೂಯೆಜ್ ಫಾರಂ ಪ್ರಾಜೆಕ್ಟ್ ಬಗ್ಗೆ ಮೊದಲು ಮಾಹಿತಿ ಕೊಡಿ; ಶಾಸಕ ರಾಮದಾಸ್ ತಿರುಗೇಟು
"ರಾಮದಾಸ್ ಅವರಿಗೆ ಈ ವಿಷಯ ಗೊತ್ತಿಲ್ಲವಾ?"
ಸೂಯೆಜ್ ಫಾರಂ ವಿಚಾರವಾಗಿ ಸಾರ್ವಜನಿಕ ಅಭಿಪ್ರಾಯ ಕೇಳಿಲ್ಲ, ತಮ್ಮ ಗಮನಕ್ಕೂ ಬಂದಿಲ್ಲ ಎಂದಿರುವ ಶಾಸಕ ರಾಮದಾಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಪಬ್ಲಿಕ್ ಹಿಯರಿಂಗ್ ಆಗಿಲ್ಲ ಅಂತ ಶಾಸಕ ರಾಮದಾಸ್ ಅವರು ಹೇಳಿರೋದನ್ನೇ ನಂಬಲು ಕಷ್ಟ. ಯಾಕೆಂದರೆ ನಾಲ್ಕು ಸಲ ಶಾಸಕರಾಗಿರುವಂತಹವರು, ಸಚಿವರಾಗಿದ್ದವರು, ಕಾರ್ಪೊರೇಷನ್ ಚುನಾವಣೆ ಮತ್ತು ಪದವೀಧರರ ಕ್ಷೇತ್ರದಿಂದಲೂ ಹಿಂದೆ ಸ್ಪರ್ಧಿಸಿದ್ದಂತಹವರು, ಗ್ರಾಮ ಪಂಚಾಯತ್ ಸದಸ್ಯನಿಗೆ ಕೂಡ ಅದು ತಿಳಿದಿರುತ್ತದೆ. ಯಾವುದಾದರೂ ಹೊಸ ಯೋಜನೆ ಬರತ್ತೆ ಅಂತಾದರೆ, ಅದು ಪರಿಸರಕ್ಕೆ ಹಾನಿ ಮಾಡತ್ತಾ? ಮಾಲಿನ್ಯ ಉಂಟು ಮಾಡತ್ತಾ ಅನ್ನೋದನ್ನು ತಿಳಿಯುವುದಕ್ಕಾಗಿ ಡಿಸಿ ನೇತೃತ್ವದಲ್ಲಿ ಪರಿಸರ ನಿಯಂತ್ರಣ ಮಂಡಳಿ ನೋಟೀಸ್ ಕೊಟ್ಟು ಜನರ ಅಭಿಪ್ರಾಯವನ್ನು ಸಂಗ್ರಹಿಸಲು ಆರಂಭಿಸುತ್ತಾರೆ. ಅಂಥದ್ದರಲ್ಲಿ ರಾಮದಾಸ್ ಅವರಿಗೆ ಈ ವಿಷಯ ಗೊತ್ತಿಲ್ಲವಾ" ಎಂದು ಪ್ರಶ್ನಿಸಿದರು.
"ಎಕ್ಸೆಲ್ ಪ್ಲಾಂಟ್ ಹೊಸ ಯೋಜನೆ ಅಲ್ಲ"
"ಕಾರ್ಖಾನೆಯೊಂದು ಬರುತ್ತಿದೆ ಎಂದಾದರೆ, ಸ್ಥಳೀಯರಿಗೆ ಏನಾದರೂ ಹಾನಿಯಾಗತ್ತಾ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅಂತ ಕೇಳ್ತಾರೆ. ಹಾನಿ ಆಗುತ್ತೆ ಅಂತಾದರೆ ಯಾಕಾಗಿ ಅಲ್ಲಿ ಹಾನಿ ಆಗತ್ತೆ, ಯಾಕಾಗಿ ಯೋಜನೆ ಬೇಡ ಅನ್ನೋದನ್ನು ಅಲ್ಲಿ ಹೇಳಬಹುದು. ಆದರೆ, ಇದು ಹೊಸ ಯೋಜನೆ ಅಲ್ಲ, ಎಕ್ಸೆಲ್ ಪ್ಲಾಂಟ್ ಹೊಸ ಯೋಜನೆ ಅಲ್ಲ. 30 ವರ್ಷದಿಂದ ಇದೆ. ರಂದೀಪ್ ಅವರು ಡಿಸಿ ಆಗಿದ್ದಾಗ್ಲೆ 2017ರಲ್ಲಿ ರಿ ಮಾಡಲಿಂಗ್ ಮಾಡುವಾಗಲೂ ಸಭೆ ಮಾಡಿದ್ದಾರೆ. ಕೆಸರೆ ಮತ್ತು ರಾಯನಕೆರೆನಲ್ಲೂ ಹೊಸ ಪ್ಲಾಂಟ್ ಗಳನ್ನು ಹಾಕುವಾಗ ಪಬ್ಲಿಕ್ ಹಿಯರಿಂಗ್ ಆಗಿದೆ. ಜನರು ಅಭಿಪ್ರಾಯ ಕೊಟ್ಟೂ ಆಗಿದೆ. ಇನ್ನು ಹೊಸ ಪಬ್ಲಿಕ್ ಹಿಯರಿಂಗ್ ಯಾವುದು ಅಂತ ನನಗಂತೂ ಅರ್ಥವಾಗುತ್ತಿಲ್ಲ, ನನಗೆ ಅವರು ಹೇಳಬೇಕು ಎಂದು ವ್ಯಂಗ್ಯವಾಡಿದರು.
"ಇದು ಕಸ ಸ್ವಚ್ಛಗೊಳಿಸುವ ಕೆಲಸ"
ಇದು ಯಾವ ಹೊಸ ಯೋಜನೆ ಅಲ್ಲ, ಪರಿಸರಕ್ಕೆ ಹಾನಿ, ಜನರಿಗೆ ದುರ್ವಾಸನೆ ನೀಡುತ್ತಿರುವ 2-3 ಟನ್ ಕಸವನ್ನು ಸ್ವಚ್ಛ ಮಾಡುವ ಕೆಲಸ. 2018ರ ಫೆಬ್ರವರಿಯಲ್ಲಿ ರಾಮದಾಸ್ ಅವರು ಮಾಜಿ ಶಾಸಕರಾಗಿದ್ದರು. ಆ ಸಮಯದಲ್ಲಿ ಕಸದ ಸಮಸ್ಯೆ ಕುರಿತು ಆಮರಣಾಂತ ಉಪವಾಸ ಕುಳಿತು ಪರಿಹಾರ ಕೊಡಿಸಿ ಅಂತ ಕುಳಿತಿದ್ದರು. ನಾನೇ ಖುದ್ದಾಗಿ ಮೀಟಿಂಗ್ ಮಾಡಿ ಬಂದು ಡಿಸಿಯವರನ್ನು ಜೊತೆಗೆ ಕರೆತಂದು ಮುಕ್ತಿ ಹಾಡುವ ಭರವಸೆ ಕೊಟ್ಟಿದ್ದೆ ಎಂದು ಹೇಳಿದರು.
"ಈ ಯೋಜನೆ ಮಾಡೇ ತೀರುತ್ತೇನೆ"
ನಾನು ಜನರಿಗೆ ಪ್ರಮಾಣ ಮಾಡಿದ್ದೆ. ಸಚಿವ ಸೋಮಣ್ಣನವರ ಬಳಿ ಜನರಿಗೆ ಹೀಗೊಂದು ಪ್ರಮಾಣ ಮಾಡಿದ್ದೆ ಅಂತ ಹೇಳಿದ್ದೆ. 14 ತಿಂಗಳಾದರೂ ನಾವಲ್ಲಿ ಹೋಗಿಲ್ಲ ಎಂದಾಗ ಅವರೂ ಸ್ಥಳಕ್ಕೆ ಬಂದರು. ಜನರ ಅಭಿಪ್ರಾಯ ಸಂಗ್ರಹಿಸಿದ್ದೆವು. ಎಲ್ಲರೂ ಬಂದರು. ತಮ್ಮ ಅಭಿಪ್ರಾಯ ಹೇಳಿದರು. ಮೂರು ಸಭೆ ನಡೆಸಿ, ಅಂತಿಮವಾಗಿ ಯೋಜನೆ ತಂದೆವು. ಅದೀಗ ಟೆಂಡರ್ ಕರೆಯುವ ಹಂತಕ್ಕೆ ಬಂದು ನಿಂತಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಪ್ರಧಾನಿ ಮೋದಿಯವರು 2014 ಅಕ್ಟೋಬರ್ 2ರಂದು ಲಾಂಚ್ ಮಾಡಿದ ಸ್ವಚ್ಛ ಭಾರತ ಅಭಿಯಾನದ ಒಂದು ಭಾಗವಾಗಿದೆ ಇದು. ಈ ಯೋಜನೆಗೆ ಯಾರದ್ದೂ ತಕರಾರಿಲ್ಲ, ತಕರಾರು ಮಾಡಿದರೆ ಅವರು ಸ್ವಚ್ಛ ಭಾರತದ ವಿರೋಧಿಗಳಷ್ಟೆ ಎಂದ ಅವರು, ಈ ಯೋಜನೆ ಮಾಡೇ ತೀರುವುದಾಗಿ ಸ್ಪಷ್ಟಪಡಿಸಿದರು.