ಡಿ.10ರಿಂದ ಮದ್ದೂರು ಬೈಪಾಸ್ ರಸ್ತೆ ಸಂಚಾರಕ್ಕೆ ಮುಕ್ತ: ಪ್ರತಾಪ್ ಸಿಂಹ
ಮಂಡ್ಯ, ಡಿಸೆಂಬರ್ 7: ಬಹು ನಿರೀಕ್ಷಿತ ಬೆಂಗಳೂರು ಹಾಗೂ ಮೈಸೂರು ದಶಪಥ ಹೆದ್ದಾರಿಯ ಒಂದನೇ ಹಂತದ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದು, ಎರಡನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. ಅಲ್ಲದೇ ಇದೇ ತಿಂಗಳ 10 ರಂದು ( ಶನಿವಾರದಿಂದ ) ಮದ್ದೂರಿನ ಬೈಪಾಸ್ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮದ್ದೂರಿನ ಎಲಿವೇಟೆಡ್ ರಸ್ತೆಯ ಮೇಲೆ ಸಂಚರಿಸುತ್ತಾ ಫೇಸ್ಬುಕ್ ಲೈವ್ನಲ್ಲಿ ಮಾಹಿತಿ ನೀಡಿದ ಅವರು, ಕಳೆದ ನವೆಂಬರ್ ತಿಂಗಳ 30ರಂದು ಮದ್ದೂರು, ಶ್ರೀರಂಗಪಟ್ಟಣ ಬೈಪಾಸ್ ರಸ್ತೆಯನ್ನು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಭರವಸೆ ನೀಡಿದ್ದೆ.
ಕಳೆದ ತಿಂಗಳು ಹವಾಮಾನ ವೈಪರಿತ್ಯದಿಂದಾಗಿ ಮೂರ್ನಾಲ್ಕು ದಿನಗಳ ಕಾಲ ಮಳೆ ಬಂದ ಕಾರಣ ಸ್ವಲ್ಪ ಮಟ್ಟದ ಕೆಲಸ ಕಾರ್ಯಗಳು ಬಾಕಿ ಇದ್ದ ಕಾರಣ ಸಂಚಾರಕ್ಕೆ ಅನುವು ಮಾಡಿಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಒಂದು ವಾರ ತಡವಾಗಿದಕ್ಕೆ ಪ್ರತಾಪ್ ಸಿಂಹ ರಾಜ್ಯದ ಜನತೆಯಲ್ಲಿ ಕ್ಷಮೆ ಕೋರಿದ್ದಾರೆ.

ಮಾತು ಮುಂದುವರಿಸಿದ ಅವರು, ಮದ್ದೂರು ಬೈಪಾಸ್ ಕೆಲಸ ಬಹುತೇಕ ಕಂಪ್ಲೀಟ್ ಆಗಿದ್ದು, ಎಕ್ಸ್ಪೆನ್ಷನ್ ಜಾಯಿಂಟ್ಸ್ ಕೆಲಸ ಕೂಡ ಮುಗಿದಿದೆ. ಎಲಿವೇಟೆಡ್ ರಸ್ತೆಯ ಸ್ವಚ್ಚತಾ ಕೆಲಸ ಮತ್ತು ಟ್ರ್ಯಾಕ್ಗೆ ಸ್ವಲ್ಪ ಬಣ್ಣ ಹಚ್ಚುವ ಕೆಲಸ ಮಾತ್ರ ಬಾಕಿ ಇದೆ. ಆ ಕೆಲಸವು ಇನ್ನು ಮೂರ್ನಾಲ್ಕು ದಿನಗಳಲ್ಲಿ ಮುಗಿಯಲಿದ್ದು, ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಶ್ರೀರಂಗಪಟ್ಟಣ ಬೈಪಾಸ್ ಕೂಡ ಇನ್ನೊಂದು ವಾರದಲ್ಲಿ ಸಂಚಾರಕ್ಕೆ ಮುಕ್ತವಾಗಲಿದ್ದು, ಮಂಡ್ಯ ಬೈಪಾಸ್ ಡಿಸೆಂಬರ್ ಅಂತ್ಯಕ್ಕೆ ಸಂಪೂರ್ಣ ಆಗಲಿದೆ. ಹೊಸ ವರ್ಷದಿಂದ ಸರಾಗವಾಗಿ ಬೆಂಗಳೂರಿನಿಂದ ಮೈಸೂರಿಗೆ ಸಂಚಾರ ಮಾಡಬಹುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಈ ಕಾಮಗಾರಿ ಮುಕ್ತಾಯಗೊಂಡರೆ 75 ರಿಂದ 80ನಿಮಿಷಗಳಲ್ಲಿ ಬೆಂಗಳೂರಿನಿಂದ ಮೈಸೂರು ತಲುಪಬಹುದು. ಕೆಲವೆಡೆ ಕೆನಾಲ್, ಅಂಡರ್ ಪಾಸ್ನ ಸಣ್ಣ ಪುಟ್ಟ ಕೆಲಸವಿದೆ. ಆ ಕೆಲಸದ ಬಳಿಕ ಟ್ರಾಫಿಕ್ ಡೈವರ್ಟ್ ಮಾಡಿ, ಮುಕ್ತ ಸಂಚಾರಕ್ಕೆ ಅವಕಾಶ ನೀಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಮದ್ದೂರು ಬೈಪಾಸ್ ಬಳಿ ಫೇಸ್ಬುಕ್ ಲೈವ್ನಲ್ಲಿ ಮಾಹಿತಿ ನೀಡಿದ್ದಾರೆ.












Click it and Unblock the Notifications