KSRTC ಬಸ್ ನಲ್ಲಿ ಸಿಕ್ಕಿದ 50 ಲಕ್ಷ ರೂ. ಯಾರಿಗೆ ಸೇರಿದ್ದು?
ಮೈಸೂರು, ಮೇ 05: ಚುನಾವಣಾಧಿಕಾರಿಗಳು ಚಾಪೆ ಕೆಳಗೆ ನುಸುಳಿದರೆ ರಾಜಕೀಯ ಪಕ್ಷಗಳ ನಾಯಕರು ರಂಗೋಲಿ ಕೆಳಗೆ ನುಸುಳುವ ಯತ್ನವನ್ನು ಮಾಡುತ್ತಲೇ ಇದ್ದಾರೆ. ಈಗಾಗಲೇ ಎಲ್ಲೆಡೆಯೂ ಚೆಕ್ ಪೋಸ್ಟ್ ಮಾಡಿ ವಾಹನಗಳ ತಪಾಸಣೆ ಮಾಡುತ್ತಿದ್ದು, ದಾಖಲೆಗಳಿಲ್ಲದೆ ಹಣ ಸಾಗಿಸುತ್ತಿರುವ ಪ್ರಕರಣಗಳನ್ನು ಪತ್ತೆ ಹೆಚ್ಚುತ್ತಲೇ ಇದ್ದಾರೆ.
ಸಾಮಾನ್ಯವಾಗಿ ಕೆಎಸ್ ಆರ್ಟಿಸಿ ಬಸ್ ಗಳಲ್ಲಿ ಹಣ ಸಾಗಿಸಲ್ಲ ಎಂಬ ನಂಬಿಕೆಯಿತ್ತು. ಬಸ್ ಗಳನ್ನು ತಪಾಸಣೆ ಮಾಡುವ ಕಾರ್ಯಕ್ಕೆ ಸಿಬ್ಬಂದಿಗಳು ಹೋಗುತ್ತಿರಲಿಲ್ಲ. ಆದರೆ ಆ ನಂಬಿಕೆ ಸುಳ್ಳಾಗಿದ್ದು, ಹಣ ಸಾಗಿಸಲು ಬಸ್ಗಳನ್ನೇ ಬಳಸಲಾಗುತ್ತಿತ್ತು ಎಂಬುದು ಇದೀಗ ಹುಣಸೂರು ಬಳಿ ಕೆಎಸ್ ಆರ್ ಟಿಸಿ ಬಸ್ ನಲ್ಲಿ 50ಲಕ್ಷ ರೂ. ಹಣ ದೊರೆತ ಬಳಿಕ ಬೆಳಕಿಗೆ ಬಂದಿದೆ.
ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಪತ್ತೆಯಾಯ್ತು ಭಾರೀ ಮೊತ್ತದ ಹಣ
ಚುನಾವಣಾ ಆಯೋಗ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ನೋಟು ಹೊಡೆಯದೆ ಓಟು ಬೀಳಲ್ಲ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ. ಅಭ್ಯರ್ಥಿ ಪರ ಪ್ರಚಾರಕ್ಕೆ ಬರುವವರಿಗೆ ಹಣ ನೀಡದಿದ್ದರೆ ಬರುವುದಿಲ್ಲ. ಇನ್ನು ಕೆಲವರಿಗೆ ಹಣ ಕೊಡದಿದ್ದರೆ ಓಟು ಹಾಕಲ್ಲ ಎಂಬ ಭಯದಿಂದಲೇ ಅಭ್ಯರ್ಥಿಗಳು ಹಣವನ್ನು ನೀರಿನಂತೆ ಚೆಲ್ಲುತ್ತಿದ್ದಾರೆ.
ಹೀಗಾಗಿ ಹಣವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಕೆಎಸ್ ಆರ್ಟಿಸಿ ಬಸ್ ಗಳನ್ನು ಬಳಸಲಾಗುತ್ತಿದೆ. ಬಸ್ ನಲ್ಲಿ ಬ್ಯಾಗ್ನಲ್ಲಿಟ್ಟು ಸಾಗಿಸಿದರೆ ಯಾರಿಗೂ ಗೊತ್ತಾಗಲ್ಲ ಎಂಬುದು ಹಣ ಸಾಗಿಸುವವರ ಯೋಚನೆ. ಆದರೆ ಇದೀಗ ಬಸ್ನಲ್ಲೇ ಹಣ ಸಿಕ್ಕಿದ್ದರಿಂದ ಸಿಬ್ಬಂದಿ ಎಲ್ಲ ಬಸ್ ಗಳನ್ನು ತಪಾಸಣೆ ಮಾಡುವುದು ಅನಿವಾರ್ಯವಾಗಿದೆ.
ಇದೀಗ ಮೈಸೂರಿನಿಂದ ಉಡುಪಿಗೆ ತೆರಳುತ್ತಿದ್ದ ಬಸ್ನಲ್ಲಿ ಸಾಗಿಸುತ್ತಿದ್ದ ಹಣ ಯಾರದ್ದು ಎಂಬುದು ಮಾತ್ರ ನಿಗೂಢವಾಗಿದೆ. ಬಹುಶಃ ಈ ಹಣ ಕೊಡಗು ಮತ್ತು ದ.ಕನ್ನಡಕ್ಕೆ ಸಾಗಿಸುತ್ತಿದ್ದ ಹಣವಂತು ಅಲ್ಲವೇ ಅಲ್ಲ. ಹೀಗಾಗಿ ಪಿರಿಯಾಪಟ್ಟಣ ಅಥವಾ ಹುಣಸೂರಿಗೆ ಸಾಗಿಸಿರಬಹುದು ಎಂಬ ಸಂಶಯವೂ ಇದೆ.
ಇಷ್ಟಕ್ಕೂ ಯಾರೋ ಆಗದವರು, ಹತ್ತಿರದಿಂದ ನೋಡಿದವರು ಚುನಾವಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರಿಂದ ಈ ಪ್ರಕರಣ ಪತ್ತೆಯಾಗಿದೆ ಇಲ್ಲದೆ ಹೋಗಿದ್ದರೆ ಯಾರ ಅರಿವಿಗೂ ಬರುತ್ತಿರಲಿಲ್ಲವೇನೋ? ಇದಕ್ಕೂ ಹಿಂದೆ ಇದೇ ರೀತಿ ಅದೆಷ್ಟು ಬಾರಿ ಕೊಂಡೊಯ್ದಿದ್ದಾರೋ? ಸದ್ಯ ನಸೀಬು ಕೆಟ್ಟಿತ್ತು. ಹಣ ಸಿಕ್ಕಿದೆ.
ವಾರಾಸುದಾರರು ಯಾರು ಎಂಬುದು ಪತ್ತೆಯಾಗದ ಹಿನ್ನಲೆಯಲ್ಲಿ 50 ಲಕ್ಷ ರೂ ಅನಾಮಧೇಯ ಹಣವನ್ನು ಚುನಾವಣಾ ಸಿಬ್ಬಂದಿ ವಶಪಡಿಸಿಕೊಂಡು ಸಮೀಪದ ಬಿಳಿಕೆರೆಯ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ಏಣಿಕೆ ಕಾರ್ಯ ನಡೆಸಿ, ಚುನಾವಣಾಧಿಕಾರಿಗಳ ಸುಪರ್ಧಿಗೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಗಂಗಾದರಪ್ಪ, ಪಿ.ಎಸ್.ಐ ಮಹೇಶ್ ನಾಯಕ, ಅಪರಾಧ ವಿಭಾಗದ ಕೆಂಡಗಣ್ಣಪ್ಪ, ಕುಮಾರ್, ಚಾಲಕ ಮಂಜು, ರವಿ, ಶಿವಕುಮಾರ್ ಭಾಗವಹಿಸಿದ್ದರು. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿ ವಾರಾಸುದಾರರನ್ನು ಪತ್ತೆಹಚ್ಚುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಮೈಸೂರು ಜಿಲ್ಲೆಯಲ್ಲಿ ಹಣದ ಹೊಳೆ ಹರಿಯುತ್ತಿದ್ದು ಓಟಿಗಾಗಿ ತಮ್ಮನ್ನು ಮಾರಿಕೊಳ್ಳುವ ಮತದಾರರು ಇರುವ ತನಕ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ.