ಪ್ರವಾಹದ ಅಘಾತದಿಂದ ಅನ್ನದಾತ ಹೊರಬಂದಿಲ್ಲ..!
ಮೈಸೂರು, ಆಗಸ್ಟ್ 22 : ಕೇರಳದಲ್ಲಿ ಸುರಿದ ಭಾರೀ ಮಳೆಗೆ ಕಬಿನಿ ಜಲಾಶಯ ತುಂಬಿ ಹರಿದ ಪರಿಣಾಮ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡು ಎಚ್.ಡಿ.ಕೋಟೆ, ನಂಜನಗೂಡು, ನರಸೀಪುರ ತಾಲೂಕಿನ ರೈತಾಪಿ ಜನರ ಬದುಕೇ ಸಂಕಷ್ಟಕ್ಕೀಡಾಗಿದ್ದು ಪ್ರವಾಹ ಇಳಿದ ಬಳಿಕವೂ ಅವರು ನೋವು ಕಡಿಮೆಯಾದಂತೆ ಕಾಣುತ್ತಿಲ್ಲ.
ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಭತ್ತ ಬೆಳೆಯುವ ಸಂಕಲ್ಪ ಮಾಡಿದ್ದರು. ಅದರಂತೆ ಸಸಿ ಮಡಿಗಳನ್ನು ತಯಾರಿಸಿಟ್ಟಿದ್ದರೆ, ಮತ್ತೆ ಕೆಲವರು ಭತ್ತದ ನಾಟಿಯನ್ನು ಕೂಡ ಮಾಡಿದ್ದರು. ಆದರೆ, ಈಗ ಅದೆಲ್ಲವೂ ಪ್ರವಾಹದಿಂದಾಗಿ ಕೊಚ್ಚಿ ಹೋಗಿದ್ದು, ಮತ್ತೆ ಗದ್ದೆಗಳನ್ನು ಸರಿಪಡಿಸಿ ಕೃಷಿ ಮಾಡುವುದು ಸವಾಲಿನ ಕೆಲಸವಾಗಿ ಪರಿಣಮಿಸಿದೆ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಹಾಗೆ ನೋಡಿದರೆ ಕಳೆದ ಕೆಲವು ವರ್ಷಗಳಿಂದ ಕಬಿನಿ ಜಲಾಶಯ ವ್ಯಾಪ್ತಿಯ ರೈತರಿಗೆ ನೀರಿನ ಕೊರತೆಯ ಕಾರಣ ಭತ್ತ ಬೆಳೆಯಲು ಸಾಧ್ಯವಾಗಿರಲಿಲ್ಲ. ಇತರೆ ಬೆಳೆ ಬೆಳೆಯುವುದಕ್ಕೆ ಮಳೆಯೂ ಸರಿಯಾಗಿ ಸುರಿದಿರಲಿಲ್ಲ. ಇದರಿಂದಾಗಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದರಲ್ಲದೆ, ಬಹಳಷ್ಟು ಮಂದಿ ಕೆಲಸ ಹುಡುಕಿಕೊಂಡು ಪಟ್ಟಣದತ್ತ ಮುಖ ಮಾಡಿದ್ದರು.
ಕಳೆದ ವರ್ಷದ ಹಿಂಗಾರು ಮಳೆ ಚೆನ್ನಾಗಿ ಸುರಿದಿತ್ತು. ಇದರಿಂದ ಕೆರೆಕಟ್ಟೆಗಳು ತುಂಬಿದ್ದವು. ಜತೆಗೆ ಈ ಬಾರಿಯ ಮುಂಗಾರಿನ ಆರಂಭವೂ ಆಶಾದಾಯಕವಾಗಿತ್ತು. ಕಬಿನಿ ಜಲಾಶಯ ತುಂಬುತ್ತಿದ್ದಂತೆಯೇ ಈ ವ್ಯಾಪ್ತಿಯ ಜಲಾನಯನ ಪ್ರದೇಶದ ರೈತರು ಹಿರಿ ಹಿರಿ ಹಿಗ್ಗಿದ್ದರು. ತಮಗೆ ಬಂದ ಸಂಕಷ್ಟ ದೂರವಾಯಿತೆಂದು ಖುಷಿ ಪಟ್ಟಿದ್ದರು.
ಕೇರಳ- ಕೊಡಗು ಪ್ರವಾಹ ದುರಂತಕ್ಕೆ ಮಿಡಿದ ಉತ್ತರಾಖಂಡ ಸರ್ಕಾರ!
ಆದರೆ, ಯಾವಾಗ ಕೇರಳದಲ್ಲಿ ಜಲಪ್ರಳಯ ಆರಂಭವಾಯಿತೋ ವೈನಾಡು ವ್ಯಾಪ್ತಿಯಲ್ಲಿ ಮಳೆ ಭೋರ್ಗರೆದು ಸುರಿಯತೊಡಗಿತ್ತಲ್ಲದೆ ಅಲ್ಲಿನ ನೀರು ಕಬಿನಿ ಜಲಾಶಯವನ್ನು ತಲುಪತೊಡಗಿತ್ತು. ನಿರೀಕ್ಷೆಗೂ ಮೀರಿ ಬಂದ ನೀರನ್ನು ಹೊರಗೆ ಬಿಡುವುದು ಅನಿವಾರ್ಯವಾಗಿತ್ತು.
ಹೀಗಾಗಿ ಸುಮಾರು 80 ಸಾವಿರ ಕ್ಯೂಸೆಕ್ಗಿಂತಲೂ ಹೆಚ್ಚು ನೀರು ಜಲಾಶಯದಿಂದ ಹೊರಗೆ ಹರಿಯತೊಡಗಿತು. ಅದರ ಪರಿಣಾಮ ಕಪಿಲ ನದಿ ಉಗ್ರ ಸ್ವರೂಪ ತಾಳಿ ಭತ್ತದ ಗದ್ದೆ, ಕಬ್ಬಿನ ಗದ್ದೆ ಹೀಗೆ ಸಿಕ್ಕ ಸಿಕ್ಕ ಜಮೀನಿಗೆ ನೀರು ನುಗ್ಗಿದ ಪರಿಣಾಮ ರೈತರು ಬೆಳೆದಿದ್ದ ಫಸಲು ನಾಶವಾಗಿ ತಲೆಮೇಲೆ ಕೈಹೊತ್ತು ಕೂರುವಂತಾಯಿತು.
ಸದ್ಯ ಇದೀಗ ಕಪಿಲ ನದಿ ಯಥಾಸ್ಥಿತಿಗೆ ಮರಳಿದೆ. ಪ್ರವಾಹದಿಂದ ನಾಶವಾಗಿದ್ದ ಗದ್ದೆ ಸೇರಿದಂತೆ ಕೃಷಿ ಭೂಮಿಯನ್ನು ಸರಿಪಡಿಸುವ ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ. ಈಗಾಗಲೇ ಬೆಳೆ ನಾಶವಾಗಿದ್ದರೂ ಅದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಆದ್ದರಿಂದ ಏನಾದರೊಂದು ಮಾಡಿ ಅಳಿದುಳಿದ ಬೆಳೆಯನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಅನ್ನದಾತ ತೊಡಗಿಸಿಕೊಂಡಿದ್ದಾನೆ.
ಪ್ರವಾಹದಿಂದಾಗಿ ಕಪಿಲಾ ನದಿ ದಡದಲ್ಲಿರುವ ಮರಳೂರು-ಗೊದ್ದನಪುರ, ರಾಂಪುರ, ಹಳ್ಳಿದಿಡ್ಡಿ, ಏಚಗಳ್ಳಿ, ತಾಂಡವಪುರ, ಚಿಕ್ಕಯ್ಯನ ಛತ್ರ, ಬಂಚಹಳ್ಳಿ ಹುಂಡಿ, ಕೆಂಪೀಸಿದ್ದನಹುಂಡಿ, ಹೆಜ್ಜಿಗೆ, ತೊರೆಮಾವು, ಇಮ್ಮಾವು, ಇಮ್ಮಾವು ಹುಂಡಿ, ಬೊಕ್ಕಹಳ್ಳಿ , ಹದಿನಾರು, ಹದಿನಾರು ಮೋಳೆ, ಆಲತ್ತೂರು, ಹೊಸಕೋಟೆ, ಸೇರಿದಂತೆ ಹಲವಾರು ಗ್ರಾಮಗಳ ರೈತರುಗಳು ಜಮೀನುಗಳು ಮುಳುಗಡೆಯಾಗಿತ್ತು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ತಂಡ ಪ್ರವಾಹ ಪೀಡಿತ ಕೊಡಗಿಗೆ
ರೈತರು ತಮ್ಮ ಗದ್ದೆಯಲ್ಲಿ ನಾಟಿ ಮಾಡಲು ಸಸಿ ಮಡಿ ತಯಾರು ಮಾಡಿಕೊಂಡಿದ್ದರು. ಅದೂ ಮುಳುಗಡೆಯಾಗಿ ನಾಶವಾಗಿತ್ತು. ಇದರಿಂದ ರೈತರು ಇತ್ತ ಭತ್ತದ ನಾಟಿಯೂ ಮಾಡುವಂತಿಲ್ಲ, ಅತ್ತ ಬೇರೆ ಫಸಲೂ ಬೆಳೆಯುವಂತೆಯೂ ಇಲ್ಲದಾಗಿತ್ತು.
ಈಗಾಗಲೇ ಎಕರೆಗೆ ಸುಮಾರು ಹದಿನೈದು ಸಾವಿರದಷ್ಟು ಖರ್ಚು ಮಾಡಿ ಭತ್ತದ ಕೃಷಿ ಮಾಡಿದ್ದ ರೈತರು ಮತ್ತೆ ಕೃಷಿ ಮಾಡಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಆದರೆ ಪ್ರವಾಹ ಪೀಡಿತ ಭೂಮಿಯಲ್ಲಿ ಮತ್ತೆ ಕೃಷಿ ಮಾಡುವ ಸಾಮರ್ಥ್ಯ ಆತನಲ್ಲಿ ಇಲ್ಲದಾಗಿದೆ.
ಕೆಲವು ಪ್ರವಾಹ ಇಳಿದ ಬಳಿಕ ಕೃಷಿ ಚಟುವಟಿಕೆಯನ್ನು ಮುಂದುವರೆಸಿದ್ದಾರೆ. ಆದರೂ ಅವರಲ್ಲಿ ನೋವಂತು ಇದ್ದೇ ಇದೆ. ಅನ್ನದಾತನ ಕಣ್ಣೀರು ಒರೆಸುವ ಕಾರ್ಯ ತುರ್ತಾಗಿ ಆಗಬೇಕಿದೆ.