ಮೈಸೂರಿನಲ್ಲಿ ಹೊಸವರ್ಷಾಚರಣೆ ಪ್ರಯುಕ್ತ 2ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಣೆ
ಮೈಸೂರು, ಡಿಸೆಂಬರ್ 29 : ಪ್ರತಿವರ್ಷದಂತೆ ಈ ವರ್ಷವೂ ಸಹ ವಿಜಯನಗರ 1ನೇ ಹಂತದಲ್ಲಿರುವ ಯೋಗಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಜ.1ರಂದು ಕ್ರೈಸ್ತ ವರ್ಷಾಚರಣೆಯ ಪ್ರಯುಕ್ತ ಮುಂಜಾನೆ 4ರಿಂದ ರಾತ್ರಿ 12ರವರಗೆ 2ಲಕ್ಷ ತಿರುಪತಿ ಮಾದರಿಯ ಲಡ್ಡುಗಳನ್ನು ಭಕ್ತರಿಗೆ ವಿತರಿಸಲಾಗುವುದು ಎಂದು ದೇವಾಲಯದ ಸಂಸ್ಥಾಪಕ ಪ್ರೊ.ಭಾಷ್ಯಂ ಸ್ವಾಮೀಜಿ ತಿಳಿಸಿದರು.
ಯೋಗಾನರಸಿಂಹಸ್ವಾಮಿ ದೇವರಿಗೆ ತಮಿಳುನಾಡಿನ ಶ್ರೀರಂಗಂ ಕ್ಷೇತ್ರ, ಮಧುರೈ ಕ್ಷೇತ್ರ ಹಾಗೂ ಶ್ರೀವಿಲ್ಲಿಪುತ್ತೂರು ಕ್ಷೇತ್ರದಿಂದ ತರಿಸಿದ 'ತೋಮಾಲೆ'ಯಿಂದ ಅಲಂಕರಿಸಿ 'ಸ್ವರ್ಣಪುಷ್ಪ'ದಿಂದ 'ಸಹಸ್ತ್ರ ನಾಮಾರ್ಚನೆ' ಮಾಡಲಾಗುವುದು. ದೇವಾಲಯದ ಉತ್ಸವ ಮೂರ್ತಿ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ, ಮಹಾಲಕ್ಷ್ಮಿ ದೇವರಿಗೆ ಏಕಾದಶಿ ಪ್ರಾಕಾರೋತ್ಸವ ಹಾಗೂ ಪುಳಿಯೋಗರೆ ನೈವೇದ್ಯ ಸಲ್ಲಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದಿನ ವರ್ಷಗಳಲ್ಲಿ ಭಕ್ತರಿಗೆ 1 ಲಕ್ಷ ಲಡ್ಡು ವಿತರಿಸಲಾಗಿತ್ತು. ಈ ವರ್ಷ 100ಗ್ರಾಂ ತೂಕದ 2 ಲಕ್ಷ ಲಡ್ಡು, 1,500ಗ್ರಾಂ ತೂಕದ 5 ಸಾವಿರ ಲಡ್ಡುಗಳನ್ನು ವಿತರಣೆ ಮಾಡಲಾಗುತ್ತಿದೆ. 60 ಜನ ಬಾಣಸಿಗರು ಡಿ.21ರಿಂದಲೂ ಲಡ್ಡುಗಳನ್ನು ತಯಾರಿ ಸುತ್ತಿದ್ದಾರೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ, ತಮಿಳುನಾಡು, ಕೇರಳ, ಆಂಧ್ರ ಪ್ರದೇ ಶದ ವಿವಿಧ ದೇವಾ ಲಯಗಳಿಗೂ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಲಡ್ಡು ತಯಾರಿಕೆ ಸಾಮಗ್ರಿಗಳು
ಲಡ್ಡು ತಯಾರಿಸಲು 50ಕ್ವಿಂಟಲ್ ಕಡಲೆ ಹಿಟ್ಟು, 100ಕ್ವಿಂಟಲ್ ಸಕ್ಕರೆ, ಐದು ಸಾವಿರ ಖಾದ್ಯ ತೈಲ, 100ಕೆ.ಜಿ.ಗೋಡಂಬಿ, 50ಕೆ.ಜಿ.ಒಣದ್ರಾಕ್ಷಿ, 50ಕೆ.ಜಿ.ಬಾದಾಮಿ, 50ಕೆ.ಜಿ. ಡೈಮಂಡ್ ಸಕ್ಕರೆ, 500ಕೆ.ಜಿ. ಬೂರಾ ಸಕ್ಕರೆ, 10 ಕೆ.ಜಿ ಪಿಸ್ತಾ, 20 ಕೆ.ಜಿ.ಏಲಕ್ಕಿ, 20ಕೆ.ಜಿ. ಜಾಕಾಯಿ ಮತ್ತು ಪತ್ರೆ, 5 ಕೆ.ಜಿ ಪಚ್ಚೆ ಕರ್ಪೂರ, 50 ಕೆ.ಜಿ. ಲವಂಗ ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು.












Click it and Unblock the Notifications