ಐಶ್ವರ್ಯ ರೈಯನ್ನು ಅನಗತ್ಯವಾಗಿ ಎಳೆತಂದ ಅ'ವಿವೇಕ' ಓಬೇರಾಯ್
ಮುಂಬೈ, ಮೇ 20 : ಚುನಾವಣೆಗೂ, ತಮ್ಮ ಒಂದಾನೊಂದು ಕಾಲದ ಪ್ರಿಯತಮೆ ಐಶ್ವರ್ಯ ರೈ ಬಚ್ಚನ್ ಬಗ್ಗೆ ಸಭ್ಯತೆಯ ಗಡಿಮೀರಿ ಟ್ವೀಟ್ ಮಾಡಿದ್ದ ಹಿಂದಿ ಚಿತ್ರನಟ ವಿವೇಕ್ ಓಬೇರಾಯ್ ಅವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಸಂಬಂಧಪಟ್ಟ ವ್ಯಕ್ತಿಗೆ (ಐಶ್ವರ್ಯ ರೈ ಬಚ್ಚನ್) ಸಾಮಾಜಿಕ ಜಾಲತಾಣದಲ್ಲಿ ಮತ್ತು ವೈಯಕ್ತಿಕವಾಗಿ ಅವರು ಕ್ಷಮೆ ಕೇಳಬೇಕು. ಅವರು ಹಾಗೆ ಮಾಡದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಅಲ್ಲದೆ, ಅವರ ಟ್ವಿಟ್ಟರ್ ಖಾತೆಯನ್ನು ತೆಗೆದುಹಾಕುವಂತೆ ಟ್ವಿಟ್ಟರ್ ಗೆ ಮನವಿ ಮಾಡಬೇಕಾಗುತ್ತದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಎಚ್ಚರಿಕೆ ನೀಡಿದ್ದಾರೆ.
Haha! 👍 creative! No politics here....just life 🙏😃
— Vivek Anand Oberoi (@vivekoberoi) May 20, 2019
Credits : @pavansingh1985 pic.twitter.com/1rPbbXZU8T
'ಪಿಎಂ ನರೇಂದ್ರ ಮೋದಿ' ಬಯೋಪಿಕ್ ನಲ್ಲಿ ನರೇಂದ್ರ ಮೋದಿ ಪಾತ್ರ ಮಾಡಿರುವ ವಿವೇಕ್ ಓಬೇರಾಯ್ ಅವರು ಅನಗತ್ಯವಾಗಿ, ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಐಶ್ವರ್ಯ ರೈ ಬಚ್ಚನ್ ಅವರನ್ನು ಎಳೆದು ತಂದಿದ್ದಾರೆ ಮತ್ತು ಕೀಳುಮಟ್ಟದಲ್ಲಿ ಅವರ ಬಗ್ಗೆ ಹಾಸ್ಯ ಮಾಡಿ ಅಪಹಾಸ್ಯಕ್ಕೀಡಾಗಿದ್ದಾರೆ.

ಅವರು ಟ್ವೀಟ್ ಮಾಡಿರುವ ಚಿತ್ರದಲ್ಲಿ, 'ಓಪಿನಿಯನ್ ಪೋಲ್' ಅಡಿಬರಹವಿರುವ ಚಿತ್ರದಲ್ಲಿ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಇದ್ದಾರೆ, ಅದರ ಕೆಳಗಡೆ, ಎಕ್ಸಿಟ್ ಪೋಲ್ ಚಿತ್ರಕ್ಕೆ 'ಎಕ್ಸಿಟ್ ಪೋಲ್' ಅಂತ ಶೀರ್ಷಿಕೆಯಿದೆ ಮತ್ತು ಕಡೆಯದಾಗಿ, 'ರಿಸಲ್ಟ್' ಶೀರ್ಷಿಕೆಯ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಇದ್ದಾರೆ.
ಲೋಕಸಭೆ ಫಲಿತಾಂಶ ಬರಲು ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ, ಎಕ್ಸಿಟ್ ಪೋಲ್ ಪ್ರಕಟವಾಗಿ ಬಿಜೆಪಿ ನೇತೃತ್ವದ ಎನ್ಡಿಎ ಜಯಭೇರಿ ಬಾರಿಸುತ್ತದೆ ಎಂದು ಘೋಷಿತವಾಗಿರುವ ಸಂದರ್ಭದಲ್ಲಿ, ಇಂಥ ಕೀಳುಮಟ್ಟದ ಫೋಟೋ ಬಳಸಿ ಟ್ವೀಟಿಸುವ ಅಗತ್ಯವಿರಲಿಲ್ಲ. ಜೊತೆಗೆ, ಚಿತ್ರ ತುಂಬಾ ಸೃಜನಾತ್ಮಕವಾಗಿದೆ. ಇಲ್ಲಿ ಯಾವುದೇ ರಾಜಕೀಯವಿಲ್ಲ, ಇದು ಜೀವನ ಮಾತ್ರ ಎಂದು ಅವರು ಬರೆದುಕೊಂಡಿದ್ದಾರೆ. ಪವನ್ ಸಿಂಗ್ ಎಂಬುವವರಿಗೆ ಕ್ರೆಡಿಟ್ ಕೂಡ ಕೊಟ್ಟಿದ್ದಾರೆ.
ಇದು ಯಾರೇ ಸೃಷ್ಟಿಸಿದ್ದರೂ ಇದನ್ನು ಹಂಚಿಕೊಳ್ಳುವಾಗ, ಜವಾಬ್ದಾರಿಯುವ ಕಲಾವಿದನಾಗಿರುವ ವಿವೇಕ್ ಓಬೇರಾಯ್ ಅವಿವೇಕತನದಿಂದ, ಬೇಜವಾಬ್ದಾರಿತನದಿಂದ ವರ್ತಿಸಬಾರದಿತ್ತು. ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿಯೂ ನಿರತರಾಗಿರುವ ಅವರು ಸಂಯಮ ಕಳೆದುಕೊಳ್ಳಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ನೀವೋ ನಿಮ್ಮ ಅಪಹಾಸ್ಯವೋ. ನಿಮಗೆ ಮಹಿಳೆಯರ ಬಗ್ಗೆ ಕಿಂಚಿತ್ತೂ ಗೌರವವಿಲ್ಲ. ನಿಮ್ಮನ್ನು ಐಶ್ವರ್ಯ ರೈ ಬಚ್ಚನ್ ತಿರಸ್ಕರಿಸಿದ್ದರಲ್ಲಿ ಯಾವುದೇ ಅಚ್ಚರಿಯಿಲ್ಲ ಎಂದು ಮೀನಾ ಎಂಬುವವರು ತಪರಾಕಿ ನೀಡಿದ್ದಾರೆ. ಶೇಮ್ ಶೇಮ್, ನೀವು ಎಂಥ ದರ್ಜೆಯವರು ಎಂದು ತೋರಿಸಿದ್ದೀರಿ, ನಿಮ್ಮಿಂದ ಕ್ಷಮೆ ನಿರೀಕ್ಷಿಸುವುದು ಕೂಡ ಅಸಹ್ಯ ಎಂದು ಪಲ್ಲವಿ ಎಂಬುವವರು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿನಗೆ ವಿವೇಕ್ ಅಂತ ಹೆಸರಿಟ್ಟಿದ್ದಾದರೂ ಯಾರು? ಆ ಹೆಸರನ್ನು ವ್ಯಂಗ್ಯವಾಗಿ ಇಟ್ಟರಾ ಏನು ಕಥೆ ಎಂದು ಮತ್ತೊಬ್ಬರು ಝಾಡಿಸಿದ್ದಾರೆ. ಸಲ್ಮಾನ್ ಖಾನ್, ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಅವರು ನಿಮ್ಮ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು. ಆ ಮಗುವನ್ನು ಯಾಕೆ ಎಳೆತಂದೆ ಎಂದು ಹಲವರು ಮಾತಿನಿಂದ ಇರಿದಿದ್ದಾರೆ. ಐಶ್ವರ್ಯ ರೈ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಸಲ್ಮಾನ್ ಖಾನ್ ಅವರಿಗೆ ಕ್ಷಮೆ ಕೇಳದೆ ವಿವೇಕ್ ಓಬೇರಾಯ್ ಅವರಿಗೆ ಬೇರೆ ದಾರಿಯೇ ಈಗ ಉಳಿದಿಲ್ಲ.
ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರತ್ನಾಕರ್ ಅವರು, ವಿವೇಕ್ ಓಬೇರಾಯ್ ಅವರಿಗೆ ನೋಟೀಸ್ ನೀಡಿದ್ದು, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕಾಗಿ ವಿವೇಕ್ ವಿರುದ್ಧ ಕ್ರಮ ಜರುಗಿಸಲು ಚಿಂತನೆ ನಡೆಸಿದೆ.












Click it and Unblock the Notifications