ಇದೆಂಥಾ ಲೆಕ್ಕಾಚಾರ?:ಶಿವಸೇನೆ ಬೆಂಬಲಿಸುವುದು ದ್ರೌಪದಿಯನ್ನೇ ವಿನಃ, ಬಿಜೆಪಿಯನ್ನಲ್ಲ!
ಮುಂಬೈ, ಜುಲೈ 12: ಭಾರತದ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅನ್ನು ಬೆಂಬಲಿಸುವುದಕ್ಕೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಕೋರ್ ಕಮಿಟಿ ನಿರ್ಧರಿಸಿದೆ.
ನಾವು ದ್ರೌಪದಿ ಮುರ್ಮು ಅನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ ಎಂದರೆ ಇದರ ಅರ್ಥ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತೇವೆ ಎಂದು ಅರ್ಥವಲ್ಲ ಅಂತಾ ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ದೇವೇಗೌಡ ಮನೆಗೆ ದ್ರೌಪದಿ ಮುರ್ಮು ಭೇಟಿ: ರಾಷ್ಟ್ರಪತಿ ಚುನಾವಣೆಗೆ ಜೆಡಿಎಸ್ ಬೆಂಬಲ ಕೋರಿಕೆ
ಮುಂಬೈನಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ ಪಕ್ಷದ ಸಂಸದರು ರಾಷ್ಟ್ರಪತಿ ಹುದ್ದೆಗೆ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅನ್ನು ಬೆಂಬಲಿಸಲು ವಿನಂತಿಸಿದ್ದಾರೆ. ಆ ಮೂಲಕ ಬಿಜೆಪಿಯ ಜೊತೆಗಿನ ಹೊಂದಾಣಿಕೆ ಬಾಗಿಲು ತೆರೆಯುವುದಕ್ಕೆ ಅನುವು ಮಾಡಿಕೊಂಡುವಂತೆ ಮನವಿ ಮಾಡಿಕೊಂಡಿದ್ದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಠಾಕ್ರೆ ಬಣವೂ ಸಹ NDA ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ನೀಡಲು ನಿರ್ಧರಿಸಿದೆ.
ಬಿಜೆಪಿಗೆ ಬೆಂಬಲ ನೀಡುತ್ತಿಲ್ಲ ಎಂದ ಸಂಜಯ್ ರಾವತ್
ದೇಶದಲ್ಲಿ ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅನ್ನು ಬೆಂಬಲಿಸುವುದಕ್ಕೆ ಶಿವಸೇನೆಯ 16 ಸಂಸದರು ಸಲಹೆ ನೀಡಿದ್ದಾರೆ. ಶಿವಸೇನೆ ಸಂಸದರ ಸಲಹೆಯ ಹಿನ್ನೆಲೆಯಲ್ಲಿ ದ್ರೌಪದಿ ಮುರ್ಮುಗೆ ಬೆಂಬಲ ನೀಡುವುದಕ್ಕೆ ನಾವು ನಿರ್ಧರಿಸಿದ್ದೇವೆ. ಅಂದ ಮಾತ್ರಕ್ಕೆ ನಾವು ಬಿಜೆಪಿಗೆ ಬೆಂಬಲಿಸುತ್ತೇವೆ ಎಂದರ್ಥವಲ್ಲ ಅಂತಾ ಶಿವಸೇನೆ ಮುಖಂಡ ಸಂಜಯ್ ರಾವತ್ ಸ್ಪಷ್ಟನೆ ನೀಡಿದ್ದಾರೆ.
ಶಿವಸೇನೆ ಸಂಸದರಿಗೆ ವಿಪ್ ಜಾರಿಗೊಳಿಸಿಲ್ಲ
"ದೇಶದಲ್ಲಿ ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಈ ಸಂಬಂಧ ಶಿವಸೇನೆಯ ಯಾವುದೇ ಸಂಸದರಿಗೆ ವಿಪ್ ಜಾರಿಗೊಳಿಸಿಲ್ಲ. ಶಿವಸೇನೆ 16 ಸಂಸದರು ಪಕ್ಷದ ನಿರ್ಧಾರದಂತೆ ತಮ್ಮ ಮತವನ್ನು ಚಲಾಯಿಸಲಿದ್ದಾರೆ," ಎಂದು ಗಜಾನನ್ ಕೀರ್ತಿಕರ್ ಹೇಳಿದ್ದಾರೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆ ಆಗಿರುವ ದ್ರೌಪದಿ ಮುರ್ಮುರಿಗೆ ಶಿವಸೇನೆಯ 16 ಸಂಸದರು ಬೆಂಬಲ ನೀಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಅವರು ಎನ್ಡಿಎ ಅಭ್ಯರ್ಥಿ ಆಗಿದ್ದರೂ, ದ್ರೌಪದಿ ಮುರ್ಮು ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯಾಗಿದ್ದು, ನಾವು ಅವರಿಗೆ ನಮ್ಮ ಬೆಂಬಲ ನೀಡಬೇಕು. ಇದು ಪಕ್ಷದ ಎಲ್ಲಾ ಸಂಸದರ ಬೇಡಿಕೆಯಾಗಿತ್ತು. ಉದ್ಧವ್ ಠಾಕ್ರೆ ತಮ್ಮ ನಿರ್ಧಾರವನ್ನು ಒಂದು ಅಥವಾ ಎರಡು ದಿನಗಳಲ್ಲಿ ನಮಗೆ ತಿಳಿಸುತ್ತಾರೆ," ಎಂದು ಕೀರ್ತಿಕರ್ ಹೇಳಿದರು.
ಉದ್ಧವ್ ಠಾಕ್ರೆ ಕರೆದ ಸಭೆಯಲ್ಲಿ 16 ಸಂಸದರು
ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕರೆದ ಮಹತ್ವದ ಸಭೆಯಲ್ಲಿ 18 ಸಂಸದರ ಪೈಕಿ 16 ಸಂಸದರು ಹಾಜರಾಗಿದ್ದರು. ಈ ವೇಳೆ ಇಬ್ಬರು ಸಂಸದರು ಗೈರು ಹಾಜರಾಗಿದ್ದು, ಈ ಸಭೆಯಲ್ಲಿ ಹಾಜರಾದ ಎಲ್ಲಾ 16 ಸಂಸದರು ದ್ರೌಪದಿ ಮುರ್ಮುಗೆ ಬೆಂಬಲಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮಂಗಳವಾರದ ಸಭೆಯಲ್ಲಿ ಭಾವನಾ ಗವಾಲಿ ಮತ್ತು ಶ್ರೀಕಾಂತ್ ಶಿಂಧೆ ಗೈರಾಗಿದ್ದರು.
ದೇಶದ ರಾಷ್ಟ್ರಪತಿ ಚುನಾವಣೆ
ಭಾರತದ 16ನೇ ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರಗಳ ಪರಿಶೀಲನೆಗೆ ಜೂನ್ 30 ಮತ್ತು ಉಮೇದುವಾರಿಕೆ ಹಿಂಪಡೆಯಲು ಜುಲೈ 2 ಕೊನೆಯ ದಿನಾಂಕವಾಗಿದೆ. ಭಾರತದ 14 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸುತ್ತಿರುವ ರಾಮನಾಥ್ ಕೋವಿಂದ್ ಜುಲೈ 25, 2017 ರಂದು ಅಧಿಕಾರ ವಹಿಸಿಕೊಂಡಿದ್ದು, ಅವರ ಅವಧಿಯು ಜುಲೈ 24, 2022 ರಂದು ಕೊನೆಗೊಳ್ಳುತ್ತದೆ.
Recommended Video