ಮುಂಬೈನಲ್ಲಿ ಭೀಕರ ಅಗ್ನಿ ದುರಂತ, ಏಳು ಸಾವು
ಮುಂಬೈ, ಡಿ. 14 : ಶುಕ್ರವಾರ ರಾತ್ರಿ ಮುಂಬೈನ 26 ಮಹಡಿಗಳಿರುವ ಮಾಂಟ್ ಬ್ಲಾಂಕ್ ವಸತಿ ಸಮುಚ್ಚಯದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 7 ಜನರು ಸಾವಿಗೀಡಾಗಿದ್ದಾರೆ. ಕೆಂಪ್ಸ್ ಕಾರ್ನರ್ ಪ್ರದೇಶದಲ್ಲಿರುವ ಐಷಾರಾಮಿ ಅಪಾರ್ಟ್ಮೆಂಟಿನ 12ನೇ ಮಹಡಿಯಲ್ಲಿ ಈ ದುರಂತ ಸಂಭವಿಸಿದೆ.
ಶುಕ್ರವಾರ ಸಂಜೆ 7.30ರ ಸುಮಾರಿಗೆ 12ನೇ ಮಹಡಿಯಲ್ಲಿರುವ 1201 ಫ್ಲಾಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕೂಡಲೆ 1202ನೇ ಫ್ಲಾಟಿಗೆ ಕೂಡ ಹರಡಿಕೊಂಡಿದೆ. ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕಿಟ್ ಕಾರಣ ಎಂದು ತಿಳಿದುಬಂದಿದೆ. ಸುಮಾರು 4-5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ನಂತರ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಲು ಯಶಸ್ವಿಯಾಗಿದೆ.
ಕ್ರಾಂತಿ ಮಾರ್ಗ್ ನಲ್ಲಿರುವ, ಬಹುತೇಕ ಖ್ಯಾತನಾಮರೇ ವಾಸಿಸುತ್ತಿರುವ ಈ ಅಪಾರ್ಟ್ಮೆಂಟಿನ ಪ್ರತಿ ಮಹಡಿಯಲ್ಲಿ ಎರಡು ಫ್ಲಾಟ್ ಗಳಿವೆ. ಒಂದರಲ್ಲಿ ಗಾಂಧಿ ಕುಟುಂಬ ನೆಲೆಸುತ್ತಿದ್ದರೆ, ಮತ್ತೊಂದರಲ್ಲಿ ಯಾರೂ ಇರಲಿಲ್ಲ. ಆ ಫ್ಲಾಟ್ ನಲ್ಲಿ ರಿಪೇರಿ ಕೆಲಸ ನಡೆಯುತ್ತಿತ್ತು. ಆ ಸಮಯದಲ್ಲಿಯೇ ಶಾರ್ಟ್ ಸರ್ಕಿಟ್ ಆಗಿ ಅಗ್ನಿ ದುರಂತ ಸಂಭವಿಸಿದೆ.

ಒಟ್ಟು ಏಳು ಜನರು ಮರಣಹೊಂದಿರುವುದು ದೃಢಪಟ್ಟಿದೆ. 25ರಿಂದ 30 ಜನರನ್ನು ಪಾರು ಮಾಡುವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಗಿದೆ. ಗಾಯಗೊಂಡ ಏಳು ಜನರಲ್ಲಿ ನಾಲ್ವರು ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಇದ್ದಾರೆ. ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ನಿಯಮ ಪಾಲಿಸಿದ್ದರಿಂದ ಸಾಕಷ್ಟು ಜನರನ್ನು ಪಾರುಮಾಡುವಲ್ಲಿ ಸಿಬ್ಬಂದಿ ಯಶಸ್ವಿಯಾದರು.
ಸತ್ತವರ ವಿವರ ಇನ್ನೂ ತಿಳಿದಿಲ್ಲವಾದರೂ, ದಿನೇಶ್ ಗಾಂಧಿ ಕುಟುಂಬದ ಇಬ್ಬರು ಇನ್ನೂ ಕಣ್ಮರೆಯಾಗಿದ್ದಾರೆ. ದಿನೇಶ್ ಗಾಂಧಿ 1980ರಲ್ಲಿ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡಿದ್ದ 'ತೇಜಾಬ್' ಚಿತ್ರದ ನಿರ್ಮಾಪಕ. ಗಾಯಗೊಂಡವರನ್ನು ಬೀಚ್ ಕ್ಯಾಂಡಿ ಆಸ್ಪತ್ರೆ, ಬಾಂಬೆ ಆಸ್ಪತ್ರೆ ಮತ್ತು ನಾಯರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟ ಕೂಡ ಆಗಿರಬಹುದೆಂದು ಅಂದಾಜಿಸಲಾಗಿದೆ. ಆದರೆ, ಅದು ಇನ್ನೂ ದೃಢಪಟ್ಟಿಲ್ಲ. ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿಯುತ್ತಿದ್ದಂತೆ ಕೇಂದ್ರೀಕೃತ ಲಿಫ್ಟ್ ನಿಂದ ಒಂದಿಷ್ಟು ಜನರು ಕೆಳಗಿಳಿದು ಬಂದಿದ್ದಾರೆ. ಆದರೆ, ಅಷ್ಟರಲ್ಲಿ ಲಿಫ್ಟ್ ಕೆಟ್ಟುಹೋಗಿದೆ.
ಕಳೆದ ತಿಂಗಳು ಕೂಡ ಮುಂಬೈನಲ್ಲಿ ಬೆಂಕಿ ದುರಂತ ಸಂಭವಿಸಿ ಐವರು ಜೀವಂತ ದಹನವಾಗಿದ್ದರು. ನ.11ರಂದು ವಿಕ್ರೋಲಿ ಪ್ರದೇಶದಲ್ಲಿರುವ ಏಳು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಏಳು ಅಂತಸ್ತಿನ ಸಿದ್ಧಾರ್ಥ್ ಅಪಾರ್ಟ್ಮೆಂಟಿನಲ್ಲಿ ಜನರು ನಿದ್ರಿಸುತ್ತಿದ್ದ ಸಮಯದಲ್ಲಿ ಈ ದುರಂತ ನಡೆದಿತ್ತು. ಆ ಘಟನೆಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.












Click it and Unblock the Notifications