ಯುಪಿ ಹಿಂಸಾಚಾರ: ಸರ್ಕಾರ ಘೋಷಿತ 'ಮಹಾರಾಷ್ಟ್ರ ಬಂದ್ಗೆ ಬೆಂಬಲವಿಲ್ಲ' ಎಂದ ವ್ಯಾಪಾರಿಗಳ ಸಂಘ
ಮುಂಬೈ, ಅಕ್ಟೋಬರ್ 10: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ಕು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ವಿಚಾರದಲ್ಲಿ ಮಹಾರಾಷ್ಟ್ರದಲ್ಲಿ ಸೋಮವಾರದಂದು ನಡೆಯಲಿರುವ ಬಂದ್ಗೆ ಮಹಾರಾಷ್ಟ್ರ ಸರ್ಕಾರವು ಬೆಂಬಲ ನೀಡಿದೆ. ಆದರೆ ವ್ಯಾಪಾರಿಗಳ ಸಂಘವು ಬೆಂಬಲ ಸೂಚಿಸಿಲ್ಲ.
"ಕೊರೊನಾ ವೈರಸ್ ಸೋಂಕು ಕಾರಣದಿಂದಾಗಿ ಲಾಕ್ಡೌನ್ ಮಾಡಿದ ಹಿನ್ನೆಲೆಯಿಂದ ಈಗಾಗಲೇ ನಮ್ಮ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಈ ಕಾರಣದಿಂದಾಗಿ ನಾವು ಈಗ ಬಂದ್ಗೆ ಬೆಂಬಲ ನೀಡುವುದಿಲ್ಲ," ಎಂದು ವ್ಯಾಪಾರಿಗಳ ಸಂಘವು ಹೇಳಿದೆ.
ಲಖೀಂಪುರ್ ಖೇರಿ ಹಿಂಸಾಚಾರ ಖಂಡಿಸಿ ಅ.18ರಂದು ರಾಷ್ಟ್ರವ್ಯಾಪಿ ರೈಲುತಡೆ
ಶಿವಸೇನೆ, ಕಾಂಗ್ರೆಸ್ ಹಾಗೂ ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮಹಾರಾಷ್ಟ್ರ ವಿಕಾಸ್ ಅಘಾಡಿಯು ಉತ್ತರ ಪ್ರದೇಶದ ಲಖಿಂಪುರದಲ್ಲಿ ನಡೆದ ಹಿಂಸಾಚಾರದಲ್ಲಿ ರೈತರು ಸಾವನ್ನಪ್ಪಿದ ಹಿನ್ನೆಲೆ ಮಾಡಲಾಗುವ ಬಂದ್ಗೆ ಬೆಂಬಲವನ್ನು ಸೂಚಿಸಿದೆ. ಅಷ್ಟೇ ಅಲ್ಲದೇ ಈ ಬಂದ್ ಬಗ್ಗೆ ಜಂಠಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರವೇ ಘೋಷಣೆ ಮಾಡಿದೆ.
ಈ ಬಗ್ಗೆ ಮಾತನಾಡಿದ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್, "ರೈತರಿಗೆ ಬೆಂಬಲ ನೀಡುವಂತೆ ನಾನು ಮಹಾರಾಷ್ಟ್ರದ 12 ಕೋಟಿ ಜನತೆಗೆ ಮನವಿ ಮಾಡುತ್ತೇನೆ. ಬೆಂಬಲವೆಂದರೆ ನೀವು ಎಲ್ಲರೂ ಈ ಬಂದ್ನಲ್ಲಿ ಒಗ್ಗೂಡುವುದು. ಒಂದು ದಿನದ ಮಟ್ಟಿಗೆ ನಿಮ್ಮ ಎಲ್ಲಾ ಕೆಲಸವನ್ನು ನಿಲ್ಲಿಸಿ," ಎಂದು ಮನವಿ ಮಾಡಿಕೊಂಡಿದ್ದಾರೆ."ಬಂದ್ನ ದಿನ ಅಗತ್ಯ ಸಾಮಾಗ್ರಿಗಳನ್ನು ಹೊರತು ಪಡಿಸಿ ಉಳಿದ ಯಾವುದೇ ಸೇವೆಗಳು ಇರುವುದಿಲ್ಲ," ಎಂದು ಸರ್ಕಾರವು ತಿಳಿಸಿದೆ.
ಇನ್ನು ವ್ಯಾಪಾರಿಗಳ ಸಂಘವು ಈ ಬಂದ್ಗೆ ಸಹಕಾರ ನೀಡದಿರುವ ಬಗ್ಗೆ ಮಾಹಿತಿ ನೀಡಿದ ಫೆಡರಲ್ ಆಫ್ ರಿಟೇಲ್ ಟ್ರೇಡರ್ಸ್ ವೆಲ್ಫೆರ್ ಅಸೋಸಿಯೇಶನ್ ಅಥವಾ ಎಫ್ಆರ್ಟಿಡಬ್ಲ್ಯೂಎ, "ನಾವು ಈ ಬಂದ್ಗೆ ಬೆಂಬಲ ನೀಡುವುದಿಲ್ಲ. ನಾವು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಕೊಲೆಯನ್ನು ವಿರೋಧ ಮಾಡುತ್ತೇವೆ. ಈ ಕೊಲೆಗೆ ಯಾರೂ ಹೊಣೆಗಾರರೋ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು. ಆದರೆ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರ ಘೋಷಣೆ ಮಾಡಿರುವ ಬಂದ್ಗೆ ಎಫ್ಆರ್ಟಿಡಬ್ಲ್ಯೂಎ ಬೆಂಬಲ ನೀಡುವುದಿಲ್ಲ," ಎಂದು ಹೇಳಿದೆ. ಈ ಬಗ್ಗೆ ವಿಡಿಯೋ ಹೇಳಿಕೆಯಲ್ಲಿ ವ್ಯಾಪಾರಿ ಸಂಘದ ಮುಖ್ಯಸ್ಥ ವಿರೇನ್ ಶಾ ತಿಳಿಸಿದ್ದಾರೆ.
"ಲಾಕ್ಡೌನ್ ಕಾರಣದಿಂದಾಗಿ ನಾವು ಕಳೆದ 18 ತಿಂಗಳಲ್ಲಿ ಭಾರೀ ನಷ್ಟವನ್ನು ಅನುಭವಿಸಿದ್ದೇವೆ. ಈಗಷ್ಟೇ ನಮ್ಮ ವ್ಯಾಪಾರವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಈ ಹಬ್ಬದ ಸಂದರ್ಭದಲ್ಲಿ ಜನರು ತಮಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿ ಮಾಡಲು ಬರುತ್ತಿದ್ದಾರೆ. ಹಾಗಾಗಿ ಈ ಸಂದರ್ಭದಲ್ಲಿ ನಮಗೆ ಶಾಂತಿಯುತವಾಗಿ ವ್ಯಾಪಾರ ಮಾಡಲು ಬಿಡಿ," ಎಂದು ಹೇಳಿದ್ದಾರೆ.
ಭಾರತದಲ್ಲಿ ಈ ಎರಡು ವಿಧದ ಜನರು ಮಾತ್ರ ಸುರಕ್ಷಿತ; ಪ್ರಿಯಾಂಕಾ ಗಾಂಧಿ
"ಚಿಲ್ಲರೆ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಎಂದಿನಂತೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ವ್ಯಾಪಾರಿಗಳು ತಮ್ಮ ಅಂಗಡಿ-ಮುಗ್ಗಟ್ಟುಗಳನ್ನು ಬಂದ್ ಮಾಡುವಂತೆ ಒತ್ತಾಯ ಮಾಡಲಾರರು ಹಾಗೂ ದೌರ್ಜನ್ಯ ನಡೆಸಲಾರರು ಎಂದು ನಾವು ಭರವಸೆ ಹೊಂದಿದ್ದೇವೆ," ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಒಂಟು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶೀಶ್ ಮಿಶ್ರಾ ಇದ್ದ ಕಾರು ವೇಗವಾಗಿ ರೈತರ ಮೇಲೆ ಹರಿದು ಹೋದ ಕಾರಣದಿಂದಾಗಿ ರೈತರು ಸಾವನ್ನಪ್ಪಿದ್ದಾರೆ. ಹಾಗೆಯೇ ಆಶೀಶ್ ಮಿಶ್ರಾ ಗುಂಡು ಹಾರಿಸಿದ್ದಾನೆ ಎಂದು ರೈತರು ಆರೋಪ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಆಶೀಶ್ ಮಿಶ್ರಾನ ವಿರುದ್ದ ಪ್ರಕರಣ ದಾಖಲಾಗಿದ್ದು, ಹಲವಾರು ದಿನದ ನಂತರ ಬಂಧನವಾಗಿದೆ.
ಈ ಬಂಧನಕ್ಕೂ ಮುನ್ನ ವಿಚಾರಣೆಗೆ ಆಶೀಶ್ ಮಿಶ್ರಾರನ್ನು ಕರೆಯಲಾಗಿತ್ತು. ಎಫ್ಐಆರ್ ದಾಖಲು ಆದರೂ ಇನ್ನೂ ಯಾಕೆ ಆಶೀಶ್ ಮಿಶ್ರಾರನ್ನು ಬಂಧನ ಮಾಡಿಲ್ಲ ಎಂದು ಸಾಮಾಜಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ "ಯಾವುದೇ ಸಾಕ್ಷಿ ಆಧಾರವಿಲ್ಲದೆ ಯಾರನ್ನೂ ಕೂಡಾ ಬಂಧನ ಮಾಡಲು ಸಾಧ್ಯವಿಲ್ಲ," ಎಂದು ಹೇಳಿದ್ದರು. ಇನ್ನು ಈ ನಡುವೆ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ರಾಜ್ಯ ಸಚಿವ ಅಜಯ್ ಮಿಶ್ರಾ ರಾಜೀನಾಮೆ ಹಾಗೂ ಅವರ ಪುತ್ರ ಆಶಿಶ್ ಮಿಶ್ರಾ ಬಂಧನಕ್ಕೆ ಆಗ್ರಹಿಸಿ ಅಕ್ಟೋಬರ್ 18ರಂದು ರಾಷ್ಟ್ರವ್ಯಾಪಿ ರೈಲು ತಡೆ ನಡೆಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)