ಮತಯಾಚನೆಗೆ ಬಂದ ವಸಂತ ಬಂಗೇರಾರನ್ನು ಹಿಂದಕ್ಕೆ ಕಳುಹಿಸಿದ ಗ್ರಾಮಸ್ಥರು
ಮಂಗಳೂರು ಮೇ 05: ಚುನಾವಣೆ ಸಂದರ್ಭದಲ್ಲಿಮಾತ್ರ ಗ್ರಾಮೀಣ ಪ್ರದೇಶಗಳನ್ನು ನೆನೆದು ಹಳ್ಳಿಗಳತ್ತ ಹೆಜ್ಜೆ ಹಾಕುವ ರಾಜಕಾರಣೆ ಗಳಿಗೆ ಹಳ್ಳಿಜನರು ತಕ್ಕ ಪಾಠ ಕಲಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಚುನಾವಣೆ ಸಂದರ್ಭದಲ್ಲಿ ಮತ ಕೇಳುವುದಕ್ಕೆ ಮಾತ್ರ ಹಳ್ಳಿಗೆ ಹೋಗುವ ಜನಪ್ರತಿನಿಧಿಗಳಿಗೆ ಚುನಾವಣೆಗೆ ದಿನಗಣನೆ ಆರಂಭ ವಾದಾಗಲೇ ಜನ ಪ್ರತೀಕಾರ ತೀರಿಸುತ್ತಾರೆ. ಇದಕ್ಕೆ ತಕ್ಕ ನಿದರ್ಶನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿ ನಡೆದಿರೋ ಘಟನೆ ಈಗ ಭಾರೀ ಚರ್ಚೆಗೆ ಗ್ರಾಸ ವಾಗಿದೆ.
ನಡ ಗ್ರಾಮದ ಸೂರ್ಯ ದೇವಸ್ಥಾನದ ಬಳಿಗೆ ಹಾಲಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರ ಚುನಾವಣಾ ಪ್ರಚಾರಕ್ಕಾಗಿ ಹೋಗಿದ್ದಾಗ ಸ್ಥಳೀಯ ಗ್ರಾಮಸ್ಥರು ಅಡ್ಡಹಾಕಿದ್ದಾರೆ. ನಾಲ್ಕು ವರ್ಷದಿಂದ ಇಲ್ಲಿನ ರಸ್ತೆ ರಿಪೇರಿಗಾಗಿ ಮನವಿ ಮಾಡುತ್ತಿದ್ದೇವೆ.

ನೀವು ಉದ್ದೇಶಪೂರ್ವಕ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದ್ದೀರಿ ಅಂತಾ ಶಾಸಕ ವಸಂತ ಬಂಗೇರ ಮತ್ತು ಜೊತೆಗಿದ್ದ ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕರು ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರು ಎಷ್ಟೇ ಮನವರಿಕೆ ಮಾಡಿದರೂ ಗ್ರಾಮಸ್ಥರು ಮಾತ್ರ ರಸ್ತೆಗೆ ಅಡ್ಡ ನಿಂತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಮತ ಕೇಳಲು ಮಾತ್ರ ಹಳ್ಳಿಗೆ ಬರ್ತೀರಿ, ಆಮೇಲೆ ತಿರುಗಿ ನೋಡುವುದಿಲ್ಲ ಅಂತಾ ಶಾಸಕರನ್ನೇ ದಬಾಯಿಸಿದ್ದಾರೆ. ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದ ಗ್ರಾಮಸ್ಥರನ್ನು ಶಾಸಕರು ಸಮಾಧಾನ ಹೇಳಿ ಹಿಂತಿರುಗಿದ್ದಾರೆ.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾಸಕರಾಗಿ ದರ್ಪ ಮೆರೆಯುವ ರಾಜಕಾರಣಿಗಳನ್ನು ಚುನಾವಣೆ ಸಂದರ್ಭದಲ್ಲಿ ಸಾಮಾನ್ಯ ಜನರು ಪ್ರಶ್ನೆ ಮಾಡುವಂತಾಗಿದ್ದು ಜಾಲತಾಣಗಳಲ್ಲಿ ಪ್ರಶಂಸೆಗೆ ಕಾರಣವಾಗಿದೆ.












Click it and Unblock the Notifications