ಪ್ರಧಾನಿ ಸೂಚಿಸಿದರೂ ಈಡೇರದ ಬೇಡಿಕೆ; ಸ್ವಂತ ಖರ್ಚಿನಲ್ಲಿ ಸೇತುವೆ ನಿರ್ಮಾಣ
ಮಂಗಳೂರು, ಜೂನ್ 7: ಮತ್ತೆ ಮಳೆಗಾಲ ಆರಂಭವಾಗಿದೆ. ನದಿ-ಹಳ್ಳಗಳು ತುಂಬಿ ಮೈದುಂಬಿ ಹರಿಯಲು ಆರಂಭವಾಗಿವೆ. ಇದರ ಜೊತೆಗೆ ಗ್ರಾಮೀಣ ಭಾಗಗಳ ಸಮಸ್ಯೆಗಳೂ ಮೈ ಕೊಡವಿ ನಿಂತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕುಗ್ರಾಮದ ಜನರ ಅಭಿವೃದ್ಧಿಯ ಆಶಾಭಾವ ಕಮರಿ ಹೋಗಿದ್ದು, ಜನಪ್ರತಿನಿಧಿಗಳ ಪೊಳ್ಳು ಭರವಸೆಗೆ ಕಾದು, ಬಸವಳಿದು ತಮ್ಮೂರಿನ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಿದ್ದಾರೆ.
ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹೊಳೆ ದಾಟಲು ಸೇತುವೆಗಾಗಿ ಪ್ರಧಾನಿಯಿಂದ ಹಿಡಿದು ಗ್ರಾಮ ಪಂಚಾಯತಿವರೆಗೆ ಗುತ್ತಿಗಾರಿನ ಮೊಗ್ರ ಎಂಬ ಊರಿನ ಜನ ಇದೀಗ ತಾವೇ ಹೊಳೆಗೆ ಕಬ್ಬಿಣದ ಸೇತುವೆ ನಿರ್ಮಿಸಲು ತೀರ್ಮಾನ ಮಾಡಿದ್ದಾರೆ.

ಮೊಗ್ರದ ಸರ್ಕಾರಿ ಶಾಲೆ- ಆರೋಗ್ಯ ಉಪಕೇಂದ್ರ- ಅಂಗನವಾಡಿ ಕೇಂದ್ರ ಸೇರಿದಂತೆ ಇತರ ಸಂಪರ್ಕಕ್ಕಾಗಿ ಏರಣಗುಡ್ಡೆ- ಕಮಿಲ ಭಾಗದ ಜನರು ಹಲವಾರು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದು, ಕೊನೆಗೂ ಹೊಳೆಗೆ ಸೇತುವೆಯಾಗದೆ, ಜನಪ್ರತಿನಿಧಿಗಳ ಬಗ್ಗೆ ಭ್ರಮಾನಿರಸಗೊಂಡಿದ್ದಾರೆ.
ಅನೇಕ ವರ್ಷದಿಂದಲೂ ಶಾಶ್ವತ ಸೇತುವೆಗಾಗಿ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದರೂ ಪ್ರಯೋಜನವಾಗಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಮಸ್ಯೆಯ ಕುರಿತು ಸಚಿತ್ರ ವರದಿ ಕಳುಹಿಸಿದರೂ ಕೇವಲ ರಾಜ್ಯ ಸರ್ಕಾರಕ್ಕೆ ಸೂಚನೆಯ ಉತ್ತರ ಬಂದಿದ್ದರ ಹೊರತುಪಡಿಸಿ ಯಾವುದೇ ಫಲ ಸಿಗಲಿಲ್ಲ. ಹೀಗಾಗಿ ಜನಪ್ರತಿನಿಧಿಗಳಿಂದ, ಸರ್ಕಾರದಿಂದ ಪರಿಹಾರವನ್ನು ಅಪೇಕ್ಷಿಸುವುದೇ ವ್ಯರ್ಥವೆಂದು ಭಾವಿಸಿ, ಊರಿನ ಜನರೇ ತಮ್ಮ ಸ್ವಂತ ಖರ್ಚಿನಿಂದ ಸೇತುವೆ ನಿರ್ಮಿಸಲು ಮುಂದಾಗಿದ್ದಾರೆ..

ತೂಗು ಸೇತುವೆಗಳ ಸರದಾರ ಸುಳ್ಯದ ಗಿರೀಶ್ ಭಾರಧ್ವಾಜ್ ಅವರ ಪುತ್ರ ಪತಂಜಲಿ ಭಾರಧ್ವಾಜ್ರ ಮಾರ್ಗದರ್ಶನದಲ್ಲಿ ದ್ವಿಚಕ್ರ ಓಡಾಡಲು ಸಾಧ್ಯವಾಗುವಂತಹ ಸುಮಾರು 80,000 ರೂಪಾಯಿ ವೆಚ್ಚದಲ್ಲಿ ಕಬ್ಬಿಣದ ಸೇತುವೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಸ್ಥಳೀಯರು ಮತ್ತು ಗ್ರಾಮ ಭಾರದ ಎಂಬ ತಂಡ ಈ ಯೋಜನೆ ರೂಪಿಸಿದ್ದು, ಈ ಮೂಲಕ ಕಣ್ಣು ಕಾಣದ, ಕಿವಿ ಕೇಳದ ತಮ್ಮೂರಿನ ಜನಪ್ರತಿನಿಧಿಗಳಿಗೆ ಸಡ್ಡು ಹೊಡೆಯಲು ತೀರ್ಮಾನಿಸಿದ್ದಾರೆ. ಕಳೆದ ಗ್ರಾಮ ಪಂಚಾಯತ್ ಚುನಾವಣಾ ಸಂದರ್ಭದಲ್ಲೂ ಸೇತುವೆಯ ಬೇಡಿಕೆಯನ್ನು ಆಗ್ರಹಿಸಿ ಗ್ರಾಮ ಭಾರತ ತಂಡ, ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ, ಭರ್ಜರಿ ಜಯಭೇರಿ ಬಾರಿಸಿ ತಮ್ಮ ಒತ್ತಾಯಕ್ಕೆ ಬಲ ತಂದಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications