ಭಗವಾನ್ ಗಲಾಟೆ ಹುಟ್ಟು ಹಾಕಲು ರಾಮನ ಬಗ್ಗೆ ಮಾತನಾಡುತ್ತಾರೆ:ಜನಾರ್ಧನ ಪೂಜಾರಿ
Recommended Video

ಮಂಗಳೂರು, ಜನವರಿ 07:ಪ್ರೊ.ಭಗವಾನ್ ಶ್ರೀ ರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ದೊಡ್ಡ ದುರಂತ. ಶ್ರೀ ರಾಮ ಇದ್ದಾಗ ಭಗವಾನ್ ಇದ್ರಾ? ರಾಮ ಮಾಂಸ ತಿನ್ನುವುದು ಇವರು ನೋಡಿದ್ರ? ಇವರು ಹುಟ್ಟಿದ್ರ ? ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ಧನ ಪೂಜಾರಿ ಕಿಡಿಕಾರಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಗವಾನ್ ಅವರಿಗೆ ನಾಲಗೆ ಇದೆ ಅಂತ ಏನೇನೋ ಮಾತನಾಡುವುದಲ್ಲ. ಮಹಮ್ಮದ್ ಪೈಗಂಬರ್ ಮುಸ್ಲಿಮರ ದೇವರು. ಏಸು ಕ್ರಿಸ್ತರ ದೇವರು. ಹಾಗೆಯೇ ಶ್ರೀರಾಮ ನಮ್ಮ ದೇವರು.ರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದರ ಉದ್ದೇಶ ಗಲಾಟೆ ಹುಟ್ಟು ಹಾಕುವುದು ಅಷ್ಟೆ. ಇದರಿಂದ ಎಷ್ಟೋ ಕುಟುಂಬ ಹಾಳಾಯಿತು ಎಂದು ಅಭಿಪ್ರಾಯಪಟ್ಟರು.
ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಅವರು ಟಿಕೆಟ್ ಸಿಕ್ಕಿದರೆ ನಿಲ್ಲುತ್ತೇನೆ. ಇದಕ್ಕಾಗಿ ಪ್ರಯತ್ನಪಡುತ್ತಿದ್ದೇನೆ. ಅಷ್ಟೇ ಅಲ್ಲ, ಎಲ್ಲದಕ್ಕೂ ಕಾದು ನೋಡಿ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಗಾಗಿ ದೆಹಲಿಯವರೆಗೂ ಹೋಗುತ್ತೇನೆ ಎಂದು ಹೇಳಿದರು.

ಶಬರಿಮಲೆಗೆ ಮಹಿಳಾ ಪ್ರವೇಶ ವಿಚಾರವಾಗಿ ಮಾತನಾಡಿ, ಮಹಿಳೆಯರು ದೇವರ ಮಕ್ಕಳಲ್ಲವೇ? ಕೇರಳದ ಮುಖ್ಯಮಂತ್ರಿಗಳು ಒಳ್ಳೆಯ ಕಾರ್ಯ ಮಾಡಿದ್ದಾರೆ. ಈಗಾಗಲೇ ಮೂರು ಮಹಿಳೆಯರು ಪ್ರವೇಶಿಸಿದ್ದಾರೆ. ಇನ್ನು ಎಲ್ಲಾ ಮಹಿಳೆಯರ ಪ್ರವೇಶಕ್ಕೆ ವ್ಯವಸ್ಥೆ ಕಲ್ಪಿಸಲು ಮುಖ್ಯಮಂತ್ರಿ ಮುಂದಾಗಲಿ.
ಸ್ವಾಮಿ ಅಯ್ಯಪ್ಪ ಎಲ್ಲಿಯೂ ಮಹಿಳಾ ಪ್ರವೇಶದ ಬಗ್ಗೆ ಹೇಳಿಲ್ಲ. ಆದರೆ ಮಹಿಳೆಯರು ಪ್ರವೇಶಿಸಬಾರದೆಂದು ರಾಜಕೀಯ ಮಾಡುವವರು ಹೇಳುತ್ತಿದ್ದಾರೆ. ಇದರ ಬಗ್ಗೆ ಅಲ್ಲಿನ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಿ. ಯಾರು ಇದನ್ನು ವಿರೋಧಿಸುತ್ತಾರೋ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಿ. ಕಾಂಗ್ರೆಸ್ ಆಗಲಿ ಬಿಜೆಪಿ ಆಗಲಿ ವಿರೋಧ ಮಾಡುವುದು ತಪ್ಪೆಂದರು.












Click it and Unblock the Notifications