ಮಂಗಳೂರಿನಲ್ಲಿ ಮತಾಂಧರ ಮತ್ತೊಂದು ಗೋಡೆ ಬರಹ: ಸರ್ಕಾರಕ್ಕೆ ತಲೆನೋವು
ಮಂಗಳೂರು, ನವೆಂಬರ್ 29: ಕಳೆದ ಒಂದು ವಾರದಿಂದ ಮಂಗಳೂರಿನಲ್ಲಿ ಕಿಡಿಗೇಡಿಗಳ ಗೋಡೆ ಬರಹ ಸ್ಥಳೀಯ ಪೊಲೀಸರಿಗೆ ಮಾತ್ರವಲ್ಲದೆ, ರಾಜ್ಯ ಬಿಜೆಪಿ ಸರ್ಕಾರಕ್ಕೂ ಸಾಕಷ್ಟು ತಲೆನೋವು ತಂದಿದೆ.
ಮತಾಂಧರ ಗೋಡೆ ಬರಹ ಬಗ್ಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ಬೆನ್ನಲ್ಲೇ, ಮಂಗಳೂರಿನಲ್ಲಿ ಮತ್ತೊಂದು ಕಡೆ ಬೆದರಿಕೆ ಗೋಡೆ ಬರಹ ಪತ್ತೆಯಾಗಿದೆ.
ಮಂಗಳೂರು; ಲಷ್ಕರ್ ಪರ ಬರಹ, ಆರೋಪಿಗಳಿಗಾಗಿ ಹುಡುಕಾಟ
ಮಂಗಳೂರು ನ್ಯಾಯಾಲಯದ ಆವರಣದಲ್ಲಿ ಮತಾಂಧರ ಮತ್ತೊಂದು ಗೋಡೆ ಬರಹ ಕಾಣಿಸಿಕೊಂಡಿದೆ. ಕೋರ್ಟ್ ಆವರಣದ ಜನರೇಟರ್ ರೂಂ ಗೋಡೆಯ ಮೇಲೆ "Gustak E Rasool ek hi saza Sar tan say juda " ಅಂದರೆ "ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡಿಸುವುದು" ಎಂಬರ್ಥದ ಬರಹವನ್ನು ಕಿಡಿಗೇಡಿಗಳು ಬರೆದಿದ್ದಾರೆ.
ಇತ್ತೀಚಿಗಿನ ಬಿಜೈ ಅಪಾರ್ಟ್ಮೆಂಟ್ ಆವರಣದಲ್ಲಿ ಉಗ್ರರ ಪರ ಬರಹದ ಬೆನ್ನಲ್ಲೆ ಮತ್ತೊಂದು ಕಿಡಿಗೇಡಿ ಕೃತ್ಯ ಎಸಗಲಾಗಿದ್ದು, ಈ ಸಂಬಂಧ ಮಂಗಳೂರಿನ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಶನಿವಾರ ಸಂಜೆ ಬೆಳಕಿಗೆ ಬಂದಿರುವ ಈ ಗೋಡೆ ಬರಹ ಇದಾಗಿದ್ದು, ಬಿಜೈ ಹಾಗೂ ಕೋರ್ಟ್ ಅವರಣದ ಗೋಡೆ ಬರಹಕ್ಕೂ ಸಾಮ್ಯತೆ ಇದೆ. ಎರಡು ಕೃತ್ಯ ಒಂದೇ ತಂಡ ಎಸಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬೈಕ್ ನಲ್ಲಿ ಬಂದು ಸ್ಪ್ರೇ ಪೇಂಟ್ ಮೂಲಕ ಗೋಡೆ ಬರಹ ಬರೆದು ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ. ಶಂಕಿತರ ವಿಚಾರಣೆ ನಡೆಸುತ್ತಿರುವುದರ ಜೊತೆಗೆ ಪೊಲೀಸ್ ಗಸ್ತನ್ನು ಹೆಚ್ಚಿಸಲಾಗಿದೆ.