ಮಂಡ್ಯದಲ್ಲಿ ಮಾರುಕಟ್ಟೆಗೆ ಬಂದ ಪರಿಸರ ಸ್ನೇಹಿ ಬೆಲ್ಲದ ಗಣಪ
ಮಂಡ್ಯ, ಆಗಸ್ಟ್ 30: ಮಂಡ್ಯ ಬೆಲ್ಲಕ್ಕೆ ಇಂಡಿಯಾದಲ್ಲೇ ಹೆಸರು. ಆದೇ ರೀತಿ ಬೆಲ್ಲದ ಗಣಪತಿ ಮೂರ್ತಿಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಮಂಡ್ಯ ಬೆಲ್ಲಕ್ಕೆ ಮತ್ತಷ್ಟು ಬೆಲೆ ಬರುವಂತೆ ಮಾಡುವುದರ ಜೊತೆಗೆ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪ್ರೇರೇಪಿಸುವಂತಹ ವಿನೂತನ ಪ್ರಯೋಗಕ್ಕೆ ವಿಕಸನ ಸಂಸ್ಥೆ ನಾಂದಿ ಹಾಡಿದೆ.
ವೈದಿಕ ಧರ್ಮದ ಆಚರಣೆಗಳಲ್ಲಿ ಬೆಲ್ಲ ಮಹತ್ವವನ್ನು ಪಡೆದುಕೊಂಡಿದೆ. ದೇವರಿಗೆ ಬೆಲ್ಲದ ಅಚ್ಚುಗಳನ್ನಿಟ್ಟು ಪೂಜಿಸುವುದು, ಬೆಲ್ಲದಿಂದ ಆರತಿ ಬೆಳಗುವುದು ಹಿಂದಿನಿಂದಲೂ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬಂದಿದೆ. ಮಂಡ್ಯ ಕೀರ್ತಿ ಕಳಸದಂತಿರುವ ಬೆಲ್ಲದಿಂದ ಗಣಪತಿಯನ್ನು ತಯಾರಿಸಿ ಗಣೇಶ ಚತುರ್ಥಿ ಆಚರಣೆಗೆ ಹೊಸತನವನ್ನು ತುಂಬುವ ಪ್ರಯತ್ನ ಸಂಸ್ಥೆಯದ್ದಾಗಿದೆ.
ಗಣೇಶ ಹಬ್ಬ: ಜೆಪಿ ನಗರದ ಸತ್ಯ ಗಣಪತಿ ದೇಗುಲದಲ್ಲಿ ಹೂ,ಹಣ್ಣಿನ ಅಲಂಕಾರ
ಸುಮಾರು ಅರ್ಧ ಅಡಿಯಿಂದ ಎರಡು ಅಡಿ ಎತ್ತರದವರೆಗಿನ ಗೌರಿ-ಗಣೇಶ ಮೂರ್ತಿಗಳನ್ನು ತಯಾರಿಸಿರುವ ವಿಕಸನ ಸಂಸ್ಥೆ ದೇಶದಲ್ಲೇ ಮೊದಲ ಬಾರಿಗೆ ಇಂತಹದೊಂದು ಹೊಸತನದ ಆಚರಣೆಯನ್ನು ಜನರಿಗೆ ಪರಿಚಯಿಸಿದೆ. ಈ ಮಾದರಿಯ ಮುನ್ನೂರು ಮೂರ್ತಿಗಳನ್ನು ತಯಾರಿಸಿ ಮಾರಾಟಕ್ಕೆ ಇಟ್ಟಿದೆ. 200 ರಿಂದ 600 ರು.ವರೆಗೆ ಬೆಲ್ಲದ ಗೌರಿ ಮತ್ತು ಗಣೇಶ ವಿಗ್ರಹವನ್ನು ಮಾರಾಟ ಮಾಡಲಾಯಿತು.
ಮಾರುಕಟ್ಟೆ ಸೃಷ್ಟಿಗೆ ಯತ್ನ
ಮಂಡ್ಯ ಬೆಲ್ಲಕ್ಕೆ ಹೆಸರುವಾಸಿಯಾಗಿದ್ದರೂ ಗುಣಮಟ್ಟವನ್ನು ಕಾಪಾಡಿಕೊಂಡಿಲ್ಲ. ಮಂಡ್ಯ ಬೆಲ್ಲ ಎಲ್ಲೆಡೆ ತಿರಸ್ಕೃತಗೊಳ್ಳುತ್ತಿದೆ. ಕೊಳ್ಳುವವರೂ ಮುಂದೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೆಲ್ಲಕ್ಕೆ ಕಳೆದುಹೋಗಿರುವ ಗತವೈಭವವನ್ನು ಮರುಸೃಷ್ಟಿಸುವ ಪ್ರಯತ್ನ ನಡೆಸಲಾಗುತ್ತಿದೆ. ರಾಸಾಯನಿಕ ಮುಕ್ತವಾಗಿ ಬೆಲ್ಲ ತಯಾರಿಸಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ, ಗಣೇಶ ಚತುರ್ಥಿಗಳಂದು ವಿಗ್ರಹಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಆರ್ಥಿಕ ಪ್ರಗತಿ ಸಾಸುವ ಕಲೆಯನ್ನು ಪರಿಚಯಿಸಿಕೊಟ್ಟಂತಾಗಿದೆ.
ಉತ್ತಮ ಪ್ರತಿಕ್ರಿಯೆ
ನಗರದ ವಿಕಸನ ಸಂಸ್ಥೆಯವರು ಬೆಲ್ಲದಿಂದ ತಯಾರಿಸಿರುವ ಗೌರಿ-ಗಣೇಶ ವಿಗ್ರಹಗಳಿಗೆ ಸಾರ್ವಜನಿಕರು-ಅಧಿಕಾರಿಗಳು ಫಿದಾ ಆಗಿದ್ದಾರೆ. ಯಾರೂ ಮಾಡಲಾಗದ ಆಲೋಚನೆಯನ್ನು ವಿಕಸನ ಸಂಸ್ಥೆಯವರು ಮಾಡಿರುವುದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಸಚಿವರು-ಶಾಸಕರಿಗೆ ಉಡುಗೊರೆ
ವಿಕಸನ ಸಂಸ್ಥೆ ತಯಾರಿಸಿದ ಬೆಲ್ಲದ ಗೌರಿ-ಗಣೇಶ ವಿಗ್ರಹಗಳನ್ನು ಜಿಲ್ಲಾಡಳಿತ ಖರೀದಿಸಿ ಸಚಿವರು, ಶಾಸಕರಿಗೆ ಗೌರಿ-ಗಣೇಶ ಹಬ್ಬದ ನೆನಪಿನ ಕಾಣಿಕೆಯಾಗಿ ನೀಡಿದ್ದು ವಿಶೇಷವಾಗಿತ್ತು.