ಚುನಾವಣೆಗೆ ನಿಲ್ಲಲು ಅಂಬರೀಶ್ ಷರತ್ತು, ಒಪ್ಪುತ್ತಾ ಕಾಂಗ್ರೆಸ್
ಬೆಂಗಳೂರು, ಏಪ್ರಿಲ್ 19: ಅಂಬರೀಶ್ರ ಅಸಡ್ಡೆ ರಾಜಕಾರಣ ಮುಂದುವರೆದಂತೆ ಕಾಣುತ್ತಿದೆ, ಟಿಕೆಟ್ ಘೋಷಣೆಯಾದರೂ ಟಿಕೆಟ್ ಪಡೆಯದೇ ಪ್ರಚಾರಕ್ಕಾಗಿ ಕ್ಷೇತ್ರಕ್ಕೂ ತೆರಳದೆ ರಚ್ಚೆ ಹಿಡಿದಂತೆ ವರ್ತಿಸುತ್ತಿದ್ದಾರೆ.
ತಾವು ನಾಮಪತ್ರ ಸಲ್ಲಿಸಬೇಕೆಂದರೆ ಕೆಲವು ಷರತ್ತುಗಳಿದ್ದು, ಅವುಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್ ಒಪ್ಪಿಕೊಂಡರೆ ಮಾತ್ರವೇ ಕ್ಷೇತ್ರಕ್ಕೆ ತೆರಳಿ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ಅಂಬರೀಶ್ ಪಟ್ಟು ಹಿಡಿದಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಅಂಬರೀಶ್ ಅವರನ್ನು ಮಂಡ್ಯ ಕ್ಷೇತ್ರಕ್ಕೆ ಕರೆದುಕೊಂಡು ಹೋಗಲು ನಿನ್ನೆಯೇ ಮಂಡ್ಯದಿಂದ ಮುಖಂಡರು ಬೆಂಗಳೂರಿನ ಅಂಬರೀಶ್ ನಿವಾಸಕ್ಕೆ ಆಗಮಿಸಿದ್ದಾರೆ ಆದರೆ ಅಂಬರೀಶ್ ಅವರು ಕ್ಷೇತ್ರಕ್ಕೆ ಬರಲು ಒಪ್ಪಿಲ್ಲ. ನಾಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ವೇಣುಗೋಪಾಲ್ ಅವರು ಅಂಬರೀಶ್ ಅವರನ್ನು ಭೇಟಿ ಆಗುತ್ತಿತ್ತು ಮಾತುಕತೆ ನಡೆಸಲಿದ್ದಾರೆ.

ಅಂಬರೀಶ್ ಷರತ್ತುಗಳು ಇಂತಿವೆ
* ಕೇವಲ ಶಾಸಕ ಮಾತ್ರ ಆಗಲು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಮಂತ್ರಿ ಮಾಡುವಂತೆ ಮಾತು ನೀಡಿದರೆ ಮಾತ್ರ ಚುನಾವಣೆಗೆ ಸ್ಪರ್ಧೆ.
* ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿಯೂ ಮಾಡಬೇಕು.
* ಮಂಡ್ಯ ಜಿಲ್ಲೆಯ ಚುನಾವಣೆ ಉಸ್ತುವಾರಿ ತನಗೇ ವಹಿಸಬೇಕು.
* ಮಂತ್ರಿ ಮಂಡಲದಲ್ಲಿ ಉನ್ನತ ಸ್ಥಾನವನ್ನೇ ನೀಡಬೇಕು.
* ರಮ್ಯಾಳನ್ನು ರಾಷ್ಟ್ರ ರಾಜಕಾರಣಕ್ಕೆ ಸೀಮಿತ ಮಾಡಬೇಕು.

ಅರ್ಜಿ ಸಹ ಹಾಕಿರಲಿಲ್ಲ
ಅಂಬರೀಶ್ ಅವರು ಟಿಕೆಟ್ಗಾಗಿ ಅರ್ಜಿ ಸಹ ಹಾಕಿರಲಿಲ್ಲ ಆದರೂ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಟಿಕೆಟ್ ಘೋಷಣೆ ಆಗಿದ್ದರೂ ಸಹ ಬಿ-ಫಾರಂ ತೆಗೆದುಕೊಳ್ಳಲು ಅಂಬರೀಶ್ ಬರಲಿಲ್ಲ ಕೊನೆಗೆ ಫಾರಂ ಅನ್ನು ಅಂಬರೀಶ್ ಮನೆಗೆ ತಲುಪಿಸಲಾಯಿತು.

ಚರ್ಚೆ ಬಳಿಕ ಕ್ಷೇತ್ರಕ್ಕೆ
ನಾಳೆ (ಏಪ್ರಿಲ್ 20) ರಂದು ಅಂಬರೀಶ್ ಅವರ ಬೆಂಗಳೂರು ನಿವಾಸಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ವೇಣುಗೋಪಾಲ್ ಭೇಟಿ ನೀಡುತ್ತಿದ್ದು ಚರ್ಚೆ ನಡೆಸಲಿದ್ದಾರೆ. ಅವರು ಅಂಬರೀಶ್ ಅವರ ಎಷ್ಟು ಷರತ್ತುಗಳಿಗೆ ಒಪ್ಪುತ್ತಾರೆ ಅಥವಾ ಯಾವ ಷರತ್ತೂ ಒಪ್ಪದೆ ಬಿ-ಫಾರಂ ರದ್ದು ಮಾಡಿ ಬೇರೆಯವರಿಗೆ ಟಿಕೆಟ್ ಕೊಡುತ್ತಾರಾ ಕಾದು ನೋಡಬೇಕು.

ಅಂಬರೀಶ್ ಅನ್ನು ಸೋಲಿಸಲು ಅಣಿಯಾಗಿರು ಗಣಿಗ ರವಿ
ಯುವಕ ಗಣಿಗ ರವಿ ಅವರು ಅಂಬರೀಶ್ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಘೋಷಣೆಯಾದ ದಿನ ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಚೇರಿಯನ್ನು ಗಣಿಗ ಅಭಿಮಾನಿಗಳು ಧ್ವಂಸ ಮಾಡಿದ್ದರು. ಅಂಬರೀಶ್ ವಿರುದ್ಧ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಗಣಿಗ ರವಿ ಅವರು ಘೋಷಿಸಿದ್ದು ಅಂಬರೀಶ್ ಅವರನ್ನು ಸೋಲಿಸುವ ಗುರಿ ಹೊಂದಿದ್ದೇನೆ ಎಂದಿದ್ದಾರೆ.

ಹೆಚ್ಚಿನ ಶ್ರಮ ಅಗತ್ಯ
ಕಳೆದ ಚುನಾವಣೆಯಂತೆ ಅಂಬರೀಶ್ಗೆ ಗೆಲುವು ಈ ಬಾರಿ ಸುಲಭವಲ್ಲ ಎನ್ನಲಾಗುತ್ತಿದೆ. ಹಾಗಾಗಿಯೇ ಅಂಬರೀಶ್ ಅವರು ಟಿಕೆಟ್ ನಿರಾಕರಣೆ, ಪ್ರಚಾರಕ್ಕೆ ಬಾರದಿರುವುದು ಇನ್ನಿತರೆ ಸ್ಟಂಟ್ಗಳನ್ನು ಮಾಡುತ್ತಿದ್ದಾರೆ ಎಂಬ ಮಾತುಗಳೂ ಮಂಡ್ಯದಲ್ಲಿ ಕೇಳಿ ಬರುತ್ತಿದೆ.












Click it and Unblock the Notifications