ಕೊಡಗಿನಲ್ಲಿ ಬತ್ತಿದ ಲಕ್ಷ್ಮಣತೀರ್ಥ ನದಿ: ಆತಂಕ ಶುರು
ಮಡಿಕೇರಿ, ಮಾರ್ಚ್ 17: ಕೊಡಗಿನಲ್ಲಿ ಹರಿಯುವ ನದಿಗಳಲ್ಲೊಂದಾದ ಲಕ್ಷ್ಮಣತೀರ್ಥ ನದಿ ಬೇಸಿಗೆಯ ಆರಂಭದಲ್ಲಿಯೇ ಬತ್ತಿ ಹೋಗಿದೆ. ಈಗಾಗಲೇ ನದಿಯಲ್ಲಿ ನೀರಿನ ಹರಿವು ನಿಂತಿದ್ದು, ಕೆಲವೆಡೆ ಹೊಂಡಗಳಲ್ಲಿ ಮಾತ್ರ ನೀರು ಕಾಣಿಸುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಬಾರಿ ಸಕಾಲದಲ್ಲಿ ಮಳೆ ಬಾರದ ಕಾರಣ ಕಾಫಿಗೆ ನೀರು ಹಾಯಿಸಲು ಹೆಚ್ಚಿನ ಬೆಳೆಗಾರರು ನದಿಗೆ ಮೋಟಾರ್ ಅಳವಡಿಸಿದ್ದರಿಂದ ಈ ರೀತಿಯಾಗಿದೆ. ಜತೆಗೆ ಮೊದಲಿನಂತೆ ಮಳೆ ಬಾರದಿರುವುದು ಮತ್ತು ಅಂತರ್ಜಲ ಕುಸಿತವೂ ನೀರು ಬತ್ತಿ ಹೋಗಲು ಕಾರಣವಾಗಿದೆ.
ಕಾವೇರಿ ನದಿಯಲ್ಲಿ ಕ್ಷೀಣಿಸುತ್ತಿದೆ ನೀರಿನ ಮಟ್ಟ
ದಕ್ಷಿಣ ಕೊಡಗಿನಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ವಾಡಿಕೆಯ ಮಳೆಯಾಗುತ್ತಿಲ್ಲ. ಇದಕ್ಕೆ ಎಗ್ಗಿಲ್ಲದೆ ನಡೆಯುತ್ತಿರುವ ಮರಳುಗಣಿಗಾರಿಕೆ, ಮರಹನನ, ಭತ್ತದ ಕೃಷಿಗೆ ತಿಲಾಂಜಲಿಯಿಟ್ಟಿರುವುದು ಹೀಗೆ ಹತ್ತಾರು ಕಾರಣಗಳನ್ನು ನೀಡಬಹುದಾಗಿದೆ. ಯುಗಾದಿ ವೇಳೆಗೆಲ್ಲ ಸಾಕಷ್ಟು ಮಳೆ ಬಂದು ಭೂಮಿ ತಂಪಾಗುತ್ತಿತ್ತು. ಆದರೆ ಬದಲಾದ ವಾತಾವರಣದಲ್ಲಿ ಅಲ್ಲಿ ಇಲ್ಲಿ ಎಂಬಂತೆ ಮಳೆಯಾಗುತ್ತಿದೆಯಾದರೂ ಎಲ್ಲಿಯೂ ಸಮರ್ಪಕವಾಗಿ ಮಳೆ ಸುರಿದಿರುವುದು ಕಂಡು ಬಂದಿಲ್ಲ. ಮೊದಲೆಲ್ಲ ಬೇಸಿಗೆಯಲ್ಲಿಯೂ ತಂಪಾದ ಹವೆಯಿತ್ತಾದರೂ ಈಗ ಹಾಗಿಲ್ಲ ಬಿಸಿಲು ನೆತ್ತಿಸುಡುತ್ತಿದೆ.
ಕಿಡಿಗೇಡಿಗಳು ಹಚ್ಚುತ್ತಿರುವ ಬೆಂಕಿ ಅರಣ್ಯವನ್ನು ನಾಶ ಮಾಡಿದೆ. ಕಳೆದ ಕೆಲವು ವರ್ಷಗಳ ಹಿಂದೆ ಬಿದಿರು ಹೂ ಬಂದು ನಾಶವಾಗಿರುವುದರಿಂದ ಕಾಡು ಪ್ರಾಣಿಗಳಿಗೆ ಮೇವಿಗೆ ಸಂಕಷ್ಟ ಬಂದಿದೆ. ಅರಣ್ಯದಲ್ಲಿದ್ದ ಕೆರೆಕಟ್ಟೆಗಳಲ್ಲಿ ನೀರು ಬತ್ತುತ್ತಿರುವುದರಿಂದ ಪ್ರಾಣಿಗಳು ನೀರು ಹುಡುಕಿಕೊಂಡು ಬೇರೆಡೆಗೆ ಹೋಗುವಂತಾಗಿದೆ. ಮೊದಲೆಲ್ಲ ನದಿಗಳ ದಂಡೆಯುದ್ದಕ್ಕೂ ಬಿದಿರಿನ ಮಳೆಗಳಿರುತ್ತಿದ್ದವು. ಇವುಗಳು ಅಂತರ್ಜಲವನ್ನು ಹಿಡಿದಿಡುತ್ತಿದ್ದವು. ಜತೆಗೆ ಪಕ್ಷಿಗಳಿಗೆ ಆಶ್ರಯತಾಣಗಳಾಗಿದ್ದವು. ಆದರೆ ಒಂದೆರಡು ದಶಕಗಳಲ್ಲಿ ಕೊಡಗಿನಲ್ಲಿದ್ದ ಬಿದಿರು ನಾಶವಾಗಿದೆ. ಈಗ ಬಿದಿರನ್ನು ಕಾಣುವುದೇ ಅಪರೂಪವಾಗಿದೆ.
ಜಿಲ್ಲೆಯ ಮೂಲಕ ಹಾದು ಹೋದ ಹೈಟೆನ್ಷನ್ ವಿದ್ಯುತ್ ತಂತಿಯಿಂದಾಗಿ ಬಹಳಷ್ಟು ಅರಣ್ಯ ನಾಶವಾಗಿದೆ. ಇದರಿಂದ ಈ ವ್ಯಾಪ್ತಿಯಲ್ಲಿ ಮಳೆ ಕಡಿಮೆಯಾಗಿದೆ. ನದಿಗಳು ತುಂಬಿ ಹರಿಯದೆ ಬಹಳಷ್ಟು ವರ್ಷಗಳೇ ಆಗಿ ಹೋಗಿವೆ. ನದಿಗಳಿಗೆ ನೀರು ಹರಿದು ಬರುವ ಮೂಲಗಳಾದ ತೋಡು, ತೊರೆಗಳೆಲ್ಲವೂ ಈಗಾಗಲೇ ಒಣಗಿ ಹೋಗಿವೆ. ಬಾವಿಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.
ಮಳೆ ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ಸುರಿಯದೆ ಹೋದರೆ ಇನ್ನಷ್ಟು ಸಂಕಷ್ಟವನ್ನು ಎದುರಿಸಬೇಕಾದ ಪರಿಸ್ಥಿತಿ ಜಿಲ್ಲೆಯ ಜನರದ್ದಾಗಿದೆ. ಕಾವೇರಿ ಉಗಮಸ್ಥಾನದಲ್ಲಿಯೇ ನೀರಿಗಾಗಿ ಪರದಾಡಬೇಕಾದ ದುಸ್ಥಿತಿ ಬಂದಿರುವುದು ನಿಜಕ್ಕೂ ದುಃಖದ ಸಂಗತಿಯಾಗಿದೆ.