ಚುಚ್ಚುಮದ್ದು ತೆಗೆದುಕೊಂಡ ಸ್ವಲ್ಪ ಹೊತ್ತಿನಲ್ಲೇ ಸಾವನ್ನಪ್ಪಿದ ಕಂದಮ್ಮ
ಮಡಿಕೇರಿ, ಡಿಸೆಂಬರ್ 20: ಜಿಲ್ಲೆಯ ಭಾಗಮಂಡಲದಲ್ಲಿ ಎರಡೂವರೆ ತಿಂಗಳ ಮಗುವೊಂದು ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದು, ಚುಚ್ಚುಮದ್ದಿನ ವ್ಯತಿರಿಕ್ತ ಪರಿಣಾಮದಿಂದ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಇಂದು ಬೆಳಿಗ್ಗೆ ಭಾಗಮಂಡಲ ಆಸ್ಪತ್ರೆಯಲ್ಲಿ ಎರಡೂವರೆ ತಿಂಗಳಿಗೆ ನೀಡಲಾಗುವ ಚುಚ್ಚುಮದ್ದನ್ನು ಮಗು ಮನ್ವಿತ್ ಗೆ ನೀಡಲಾಯಿತು. ಸ್ವಲ್ಪ ಹೊತ್ತಿನ ನಂತರ ಡ್ರಾಪ್ಸ್ ಹಾಕಲಾಯಿತು. ನಂತರ ಮನೆಗೆ ಕರೆದುಕೊಂಡು ಹೋದ ಸ್ವಲ್ಪ ಹೊತ್ತಿನಲ್ಲಿ ಮಗು ನಿಸ್ತೇಜವಾಯಿತೆಂದು ಪೋಷಕರು ತಿಳಿಸಿದ್ದಾರೆ.
ಮಲೇಷ್ಯಾದಲ್ಲಿ ಶವವಾಗಿ ಸಿಕ್ಕಿದ ಮೈಸೂರು ಯುವಕ; ಮೃತದೇಹಕ್ಕೆ ಕುಟುಂಬಸ್ಥರ ಪರದಾಟ
ಮಗುವನ್ನು ಮಲಗಿಸಿದಾಗ ಕಣ್ಣು ಮುಚ್ಚಿದ್ದು, ಕೈಕಾಲು ಅಲುಗಾಡುತ್ತಿರಲಿಲ್ಲ. ತಕ್ಷಣವೇ ಮಗುವನ್ನು ಭಾಗಮಂಡಲ ಸಮುದಾಯ ಕೇಂದ್ರಕ್ಕೆ ಕರೆ ತಂದಿದ್ದಾರೆ. ವೈದ್ಯರು ಮಗುವನ್ನು ಪರೀಕ್ಷಿಸಿ, ಆರೋಗ್ಯ ಸ್ಥಿರವಾಗಿದೆ, ಆದರೆ ತಕ್ಷಣವೇ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಿರಿ ಎಂದು ಸಲಹೆ ನೀಡಿದ್ದಾರೆ. ಜಿಲ್ಲಾಸ್ಪತ್ರೆಗೆ ಕರೆತಂದಾಗ ಮಗು ಒಂದು ಗಂಟೆ ಮೊದಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇಂದು ಭಾಗಮಂಡಲ ಆರೋಗ್ಯ ಕೇಂದ್ರದಲ್ಲಿ ಒಟ್ಟು 8 ಶಿಶುಗಳಿಗೆ ಚುಚ್ಚುಮದ್ದು ಮತ್ತು ಪೌಷ್ಠಿಕಾಂಶಯುಕ್ತ ದ್ರಾವಣ ನೀಡಲಾಗಿತ್ತು. 7 ಮಕ್ಕಳಿಗೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಆದರೆ ಮನ್ವಿತ್ ಎಂಬ ಮಗು ಮಾತ್ರ ಮೃತಪಟ್ಟಿದೆ. ಇದಕ್ಕೆ ಔಷಧಿಯ ಓವರ್ ಡೋಸ್ ಕಾರಣವಾಗಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ. ಮಗುವಿನ ಪೋಷಕರು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಿಥಿಗೆಂದು ಬಂದಿದ್ದ ಯೋಧನ ದುರ್ಮರಣ; 20 ಗಂಟೆ ನಂತರ ಸಿಕ್ಕಿತು ಮೃತದೇಹ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸುರಗೀಹಳ್ಳಿ ತಿಳಿಸಿದ್ದಾರೆ.