ಕೊರೊನಾ ಭಯದ ನಡುವೆಯೂ ಅಯೋಧ್ಯೆಯಲ್ಲಿ ರಾಮನವಮಿ ಮೇಳಕ್ಕೆ ಅನುಮತಿ
ಅಯೋಧ್ಯೆ,ಮಾರ್ಚ್ 19: ದೇಶಾದ್ಯಂತ ಕೊರೊನಾ ಸೋಂಕು ಆವರಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ನಡುವೆಯೂ ಅಯೋಧ್ಯೆ ರಾಮನವಮಿ ಮೇಳಕ್ಕೆ ಯೋಗಿ ಆದಿತ್ಯನಾಥ್ ಒಪ್ಪಿಗೆ ನೀಡಿದ್ದಾರೆ.
ತಜ್ಞರ ಅಭಿಪ್ರಾಯ ಧಿಕ್ಕರಿಸಿ ಅಯೋಧ್ಯೆಯಲ್ಲಿ ಬೃಹತ್ ರಾಮನವಮಿ ಧಾರ್ಮಿಕ ಮೇಳ ನಡೆಸಲು ಅನುಮತಿ ನೀಡಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ.
ಕೊರೊನಾ ಸೋಂಕು ಹರಡುವ ಸಾಧ್ಯತೆಯ ಕಾರಣ ಬೃಹತ್ ಕಾರ್ಯಕ್ರಮವನ್ನು ರದ್ದುಪಡಿಸುವಂತೆ ಅಯೋಧ್ಯೆಯ ಮುಖ್ಯ ವೈದ್ಯಾಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದ್ದರು.
ರಾಮನವಮಿ ಮೇಳವು ಮಾರ್ಚ್ 25ರಿಂದ ಮಂದಿನ ಏಪ್ರಿಲ್ 2ರವರೆಗೆ ನಡೆಯಲಿದ್ದು,ಲಕ್ಷಾಂತರ ಮಂದಿ ಭಕ್ತರು ಸೇರುವ ನಿರೀಕ್ಷೆಯಿದೆ.
ಕೊರೊನಾ ಆತಂಕ; ದೇಶವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ
ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಬೃಹತ್ ಸಭೆ, ಉತ್ಸವ ರದ್ದುಪಡಿಸಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದರೂ ಆದಿತ್ಯನಾಥ್ ಸರಕಾರದ ಹಠದ ಕ್ರಮವು ಬಹಳ ಅಚ್ಚರಿ ತಂದಿದೆ.
ಆ ಸಮಾರಂಭಕ್ಕೆ ಆಗಮಿಸುವ ಭಾರೀ ಜನಸಂಖ್ಯೆಯನ್ನು ವೈದ್ಯಕೀಯ ತಪಾಸಣೆ ಗುರಿಪಡಿಸಲು ಬೇಕಾದ ಅಗತ್ಯ ಸಂಪನ್ಮೂಲ, ಸಿಬ್ಬಂದಿ ಇಲ್ಲ ಎಂದವರು ಹೇಳಿದ್ದರೂ ಸರ್ಕಾರ ಮಾತ್ರ ಹಠಕ್ಕೆ ಬಿದ್ದಿದೆ.
ಯಾವುದೇ ಕಾರ್ಯಕ್ರಮವಿರಲಿ 100ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಎಂದು ಆರೋಗ್ಯ ಇಲಾಖೆಯೂ ಕೂಡ ತಿಳಿಸಿದೆ. ಆದರೂ ಯೋಗಿ ಆದಿತ್ಯನಾಥ್ ಅವರು ಲಕ್ಷಾಂತರ ಮಂದಿ ಸೇರುವ ಕಾರ್ಯಕ್ರಮಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.