ಯೋಗಿ ತವರುಕ್ಷೇತ್ರದಲ್ಲಿ ರವಿಕಿಶನ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ
ಲಕ್ನೋ, ಏಪ್ರಿಲ್ 25: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತವರು ಕ್ಷೇತ್ರ ಗೋರಖ್ ಪುರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಇಂದು ಘೋಷಿಸಿದೆ. ಬಹುನಿರೀಕ್ಷಿತ ವಾರಣಾಸಿ ಕ್ಷೇತ್ರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಉತ್ತರಪ್ರದೇಶ ಪೂರ್ವದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆ ಸುಳ್ಳಾಗಿದೆ. ಕಳೆದ ಬಾರಿ ಸೋಲು ಕಂಡಿದ್ದ ಅಭ್ಯರ್ಥಿ ಅಜಯ್ ರಾಯ್ ಅವರಿಗೆ ಮತ್ತೆ ಕಾಂಗ್ರೆಸ್ ಮಣೆ ಹಾಕಿದೆ. ಇದೇ ವೇಳೆ ಗೋರಖ್ ಪುರ್ ನಿಂದ ಸ್ಪರ್ಧಿಸಲು ಮಧುಸೂದನ್ ತಿವಾರಿ ಅವರಿಗೆ ಟಿಕೆಟ್ ನೀಡಲಾಗಿದೆ.
ಭೋಜಪುರಿ ಚಿತ್ರರಂಗದ ಜನಪ್ರಿಯ ನಟ ರವಿಕಿಶನ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದು, ತಿವಾರಿ ವಿರುದ್ಧ ಸೆಣಸಲಿದ್ದಾರೆ. ರವಿ ಕಿಶನ್ ಅವರು ಹಿಂದಿ, ತಮಿಳು, ತೆಲುಗು , ಕನ್ನಡ ಸೇರಿ ಇತರೆ ಭಾಷೆಗಳಲ್ಲಿ ನಟಿಸಿದ್ದಾರೆ.
ಉತ್ತರ ಪ್ರದೇಶ: ಗೋರಖ್ಪುರ ಲೋಕಸಭಾ ಕ್ಷೇತ್ರ ಪರಿಚಯ
ಗೋರಖ್ಪುರದ ಹಾಲಿ ಸಂಸದರಾಗಿರುವ ಪ್ರವೀಣ್ ಅವರಿಗೆ ಸಂತಕಬೀರ ನಗರದಿಂದ ಬಿಜೆಪಿ ಟಿಕೆಟ್ ನೀಡಿದೆ.ಗೋರಖ್ಪುರ ಸಂತ ಕಬೀರನಗರ ಹಾಗೂ ಉತ್ತರಪ್ರದೇಶದ ಕೆಲ ಕ್ಷೇತ್ರಗಳಲ್ಲಿ ನಿಷಾದ್ ಸಮುದಾಯ ತೀವ್ರ ಪ್ರಭಾವ ಹೊಂದಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಜಾನ್ ಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ರವಿ ಕಿಶನ್ ಗೆ ಕೇವಲ 4% ಮತಗಳನ್ನು ಪಡೆದಿದ್ದರು. ನಂತರ ಬಿಜೆಪಿ ಸೇರಿ, ಮೋದಿ ಪರ ಪ್ರಚಾರ ಕೈಗೊಂಡು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಏಪ್ರಿಲ್ 11ರಿಂದ ಮೇ 19ರ ತನಕ ಏಳು ಹಂತಗಳಲ್ಲಿ ಉತ್ತರಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರಬರಲಿದೆ.