ಪಶ್ಚಿಮಬಂಗಾಳ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ: ಕೇಂದ್ರ ನಾಯಕರ ಹಸ್ತಕ್ಷೇಪ
ಕೋಲ್ಕತ್ತಾ, ಜೂ. 09: ಪಶ್ಚಿಮಬಂಗಾಳ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿದ್ದು ಈ ಹಿನ್ನೆಲೆ ಬಿಜೆಪಿ ತನ್ನ ಬಂಗಾಳ ಘಟಕವನ್ನು ರಕ್ಷಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ರಾಜ್ಯದ ಹಲವಾರು ಬಿಜೆಪಿ ನಾಯಕರು ಪಕ್ಷದ ವಿರುದ್ದ ಕಠಿಣ ಪ್ರಶ್ನೆಗಳು ಎತ್ತಿದ್ದು ಪಕ್ಷದ ಚುನಾವಣಾ ಸೋಲಿನ ನಂತರ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ರಾಜ್ಯ ಮುಖ್ಯಸ್ಥ ದಿಲೀಪ್ ಘೋಷ್ ಕೋಲ್ಕತ್ತಾದಲ್ಲಿ ನಡೆಸಿದ ರಾಜ್ಯ ಸಭೆಗೆ ಬಿಜೆಪಿ ಉಪಾಧ್ಯಕ್ಷ ಮುಕುಲ್ ರಾಯ್ ಗೈರಾಗಿದ್ದಾರೆ. ಮುಕುಲ್ ರಾಯ್ ಈ ವಿಚಾರದಲ್ಲಿ ಮೌನವಾಗಿದ್ದರೂ ಅವರ ಪುತ್ರ ಶುಬ್ರಾನ್ಷು, ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ಗೆ ಮರಳುವ ವಿಚಾರವನ್ನು ತಳ್ಳಿಹಾಕಿಲ್ಲ.
35 ಬಿಜೆಪಿ ಶಾಸಕರು ಮತ್ತೆ ಟಿಎಂಸಿಗೆ ಮರಳಲು ಉತ್ಸುಕರಾಗಿದ್ದಾರೆ. ನಮ್ಮ ನಾಯಕತ್ವದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತೃಣಮೂಲ ಹೇಳಿಕೊಂಡಿದೆ. ಇನ್ನು ಈ ಎಲ್ಲಾ ಘರ್ ವಾಪಾಸಿ ವಿಚಾರಗಳ ಮಧ್ಯೆ, ತೃಣಮೂಲದಿಂದ ಬಿಜೆಪಿಗೆ ಸೇರ್ಪಡೆಯಾಗಿರುವ ಸುವೇಂದು ಅಧಿಕಾರಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ದೆಹಲಿಯಲ್ಲಿ ಭೇಟಿಯಾದರು.

ರಾಜ್ಯ ಚುನಾವಣೆಯ ಸಮಯದಲ್ಲಿ ಮತ್ತು ನಂತರದ ಪಕ್ಷದ ಕಾರ್ಯತಂತ್ರವನ್ನು ಬಂಗಾಳ ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ. 2019 ರಲ್ಲಿ ಬಂಗಾಳದ 42 ಲೋಕಸಭಾ ಸ್ಥಾನಗಳಲ್ಲಿ 18 ಸ್ಥಾನಗಳನ್ನು ನೀಡಿದ ಸ್ಥಳೀಯ ನಾಯಕತ್ವವನ್ನು ಅವಲಂಬಿಸುವ ಬದಲು ಬಿಜೆಪಿ ಹೊರಗಿನಿಂದ ಪ್ರಚಾರಕರನ್ನು ರಾಜ್ಯ ಚುನಾವಣೆಗೆ ಕರೆತಂದಿದೆ ಎಂದು ಈ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಪಕ್ಷವೇ ಮಮತಾ ಬ್ಯಾನರ್ಜಿಗೆ ಸಹಾಯ ಮಾಡಿದೆ ಎಂದು ಕೂಡಾ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.
ಆಡಳಿತ ಪಕ್ಷವು ವ್ಯವಸ್ಥೆ ಮಾಡಿದ್ದ ಖಾಸಗಿ ಜೆಟ್ನಲ್ಲಿ ನಾಟಕೀಯವಾಗಿ ದೆಹಲಿಗೆ ಹಾರಾಟ ನಡೆಸಿದ ನಂತರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ ತೃಣಮೂಲದ ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ ಟಿಎಂಸಿಗೆ ಮರಳುವ ಸಾಧ್ಯತೆಯ ಪಟ್ಟಿಯಲ್ಲಿ ಇದ್ದಾರೆ. ಮತ್ತೊಬ್ಬ ಮಾಜಿ ತೃಣಮೂಲ ನಾಯಕ ಸಬಿಯಾಸಾಚಿ ಸ್ಥಳೀಯ ಚಾನೆಲ್ನಲ್ಲಿ ಮಾತನಾಡಿ, "ಅಭಿಯಾನವನ್ನು ನಡೆಸಲು ಬಂಗಾಳಿ ಮಾತನಾಡಲು ಸಾಧ್ಯವಾಗದ ನಾಯಕರನ್ನು ಹೊಂದುವುದು ತಪ್ಪಾಗಿದೆ" ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications