ಕೋಲಾರ: ಕ್ರೈಸ್ತ ಧಾರ್ಮಿಕ ಪುಸ್ತಕಗಳಿಗೆ ಬೆಂಕಿ ಹಚ್ಚಿದ ಬಲಪಂಥೀಯ ಗುಂಪು
ಕೋಲಾರ, ಡಿಸೆಂಬರ್ 12: ಕರ್ನಾಟಕದಲ್ಲಿ ಕ್ರೈಸ್ತರ ಮೇಲಿನ ಕೋಮು ದಾಳಿಗಳು ಅಧಿಕವಾಗುತ್ತಿದೆ. ಚರ್ಚ್ನಿಂದ ಮತಾಂತರವಾಗಿದೆ ಎಂದು ಆರೋಪಿಸಿ ಬಲಪಂಥೀಯ ಗುಂಪುಗಳ ಕಾರ್ಯಕರ್ತರು ಕರ್ನಾಟಕದ ಕೋಲಾರದಲ್ಲಿ ಕ್ರೈಸ್ತರ ಧಾರ್ಮಿಕ ಪುಸ್ತಕಗಳಿಗೆ ಬೆಂಕಿ ಹಚ್ಚಿರುವ ಘಟನೆಯು ನಡೆದಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಬಂಧನಗಳು ನಡೆದಿಲ್ಲ.
''ಧಾರ್ಮಿಕ ಕಿರುಪುಸ್ತಕಗಳನ್ನು ಹಂಚದಂತೆ ಕ್ರೈಸ್ತ ಸಮುದಾಯಕ್ಕೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ಬಲಪಂಥೀಯ ಗುಂಪಿನ ಸದಸ್ಯರನ್ನು ಬಂಧಿಸಲಾಗಿಲ್ಲ," ಎಂದು ಪೊಲೀಸರು ತಿಳಿಸಿದ್ದಾರೆ. "ಮನೆಗೆ ತೆರಳಿ ಪ್ರಚಾರ ಮಾಡುವ ಮೂಲಕ ಯಾವುದೇ ಕೋಮು ಸಂಘರ್ಷವನ್ನು ಸೃಷ್ಟಿ ಮಾಡಬೇಡಿ ಎಂದು ನಾವು ಕ್ರೈಸ್ತ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದೇವೆ. ಬಲಪಂಥೀಯರು ಮತ್ತು ಕ್ರೈಸ್ತ ಸಮುದಾಯದವರು ಸೌಹಾರ್ದಯುತವಾಗಿ ವಿಷಯವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ," ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ,'' ಎನ್ಡಿ ಟಿವಿ ವರದಿ ಮಾಡಿದೆ.
ಮತಾಂತರ ನಿಷೇಧ ಕಾಯ್ದೆ; ಜನರಿಗೆ ಆತಂಕ ಬೇಡ ಎಂದ ಸಿಎಂ
ಧರ್ಮ ಪ್ರಚಾರ ಮಾಡುವ ನಿಟ್ಟಿನಲ್ಲಿ ಕ್ರೈಸ್ತ ಸಮುದಾಯದ ಪ್ರತಿನಿಧಿಗಳು ಮನೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆಯು ನಡೆದಿದೆ. ಬಲಪಂಥೀಯ ಗುಂಪುಗಳ ಕಾರ್ಯಕರ್ತರು ಕ್ರೈಸ್ತ ಸಮುದಾಯವನ್ನು ಪ್ರಶ್ನಿಸಿದ್ದು, ಬಳಿಕ ಈ ಧಾರ್ಮಿಕ ಪುಸ್ತಕವನ್ನು ಕಸಿದುಕೊಂಡು ಬೆಂಕಿ ಹಚ್ಚಿ ಸುಟ್ಟಿದ್ದಾರೆ.
ನಾವು ಧಾರ್ಮಿಕ ಪುಸ್ತಕವನ್ನು ಸುಟ್ಟು ಹಾಕಿದ್ದೇವೆ ಎಂದು ಒಪ್ಪಿಕೊಂಡ ಬಲಪಂಥೀಯ ಗುಂಪಿಗೆ ಸೇರಿದ ವ್ಯಕ್ತಿಯೊಬ್ಬರು. ನಾವು "ಹಿಂಸಾತ್ಮಕವಾಗಿ ವರ್ತಿಸಲಿಲ್ಲ" ಎಂದಿದದಾರೆ. "ನಾವು ಅವರಿಗೆ ಯಾವುದೇ ತೊಂದರೆಯನ್ನು ನೀಡಿಲ್ಲ ಅವರು ನಮ್ಮ ನೆರೆಹೊರೆಯಲ್ಲಿ ಪುಸ್ತಕಗಳನ್ನು ಹಂಚುತ್ತಿದ್ದರು. ಈ ಮೂಲಕ ಕ್ರೈಸ್ತ ಧರ್ಮದ ಪ್ರಚಾರವನ್ನು ಮಾಡುತ್ತಿದ್ದರು, ಅದಕ್ಕೆ ನಾವು ಅದನ್ನು ಸುಟ್ಟು ಹಾಕಿದೆವು," ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ 12 ತಿಂಗಳಲ್ಲಿ ಇದು 38ನೇ ದಾಳಿ ಪ್ರಕರಣ
ಕರ್ನಾಟಕದಲ್ಲಿ ಈ ರೀತಿಯಾಗಿ ಧಾರ್ಮಿಕ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದೆ. ಕಳೆದ 12 ತಿಂಗಳಲ್ಲಿ ಕರ್ನಾಟಕದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆದ 38ನೇ ದಾಳಿಯಾಗಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಬಲವಂತದ ಧಾರ್ಮಿಕ ಮತಾಂತರಗಳನ್ನು ನಿಷೇಧಿಸುವ ಮಸೂದೆಯನ್ನು ಜಾರಿ ಮಾಡಲು ಮುಂದಾದ ಬಳಿಕ ರಾಜ್ಯದಲ್ಲಿ ಇಂತಹ ದಾಳಿ ಪ್ರಕರಣಗಳು ಅಧಿಕವಾಗಿದೆ. ಯುನೈಟೆಡ್ ಕ್ರಿಶ್ಚಿಯನ್ಸ್ ಫೋರಮ್, ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಮತ್ತು ಯುನೈಟೆಡ್ ಅಗೇನ್ಸ್ಟ್ ಹೇಟ್ ದಾಖಲಿಸಿರುವ ಫ್ಯಾಕ್ಟ್ ಫೈಂಡಿಂಗ್ ವರದಿಯ ಪ್ರಕಾರ, ಈ ವರ್ಷದ ಜನವರಿಯಿಂದ ಸೆಪ್ಟೆಂಬರ್ ವರೆಗೆ, ಚರ್ಚ್ಗಳು ಮತ್ತು ಕ್ರೈಸ್ತ ಸಮುದಾಯವರ ಮೇಲೆ 32 ದಾಳಿಗಳು ನಡೆದಿವೆ. ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಆರು ದಾಳಿಗಳು ವರದಿಯಾಗಿವೆ.
ಬೆಳಗಾವಿ: ಚರ್ಚ್ಗೆ ನುಗ್ಗಿ, ತಲ್ವಾರ್ ತೋರಿಸಿ ಪಾದ್ರಿಗೆ ಬೆದರಿಕೆ
Recommended Video
ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಧಾರ್ಮಿಕ ಮತಾಂತರ ವಿರೋಧಿ ಮಸೂದೆಯನ್ನು ಚರ್ಚೆಗೆ ತರಲಾಗುವುದು ಮತ್ತು ಇದು ರಾಜ್ಯದಲ್ಲಿ ವ್ಯಾಪಕವಾಗಿರುವ ಬಲವಂತದ ಮತಾಂತರವನ್ನು ತಪ್ಪಿಸಲು ಉದ್ದೇಶವನ್ನು ಹೊಂದಿದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದರು. ಈ ಮಸೂದೆಯು ಪ್ರಚೋದನೆಗಳ ಮೂಲಕ ಧಾರ್ಮಿಕ ಮತಾಂತರಗಳನ್ನು ತಡೆಯಲು ಮಾತ್ರ ಎಂದು ಹೇಳಿರುವ ಬೊಮ್ಮಾಯಿ "ಬಹುತೇಕ ಜನರು ಇತರ ರಾಜ್ಯಗಳಲ್ಲಿ ಜಾರಿಗೊಳಿಸಲಾದ ಕಾನೂನುಗಳನ್ನು ಅಧ್ಯಯನ ಮಾಡಿದ ನಂತರ ರಾಜ್ಯದಲ್ಲಿ ಇದೇ ರೀತಿಯ ಕಾನೂನನ್ನು ತರಬೇಕೆಂದು ಬಯಸುತ್ತಾರೆ," ಎಂದು ಉತ್ತರ ಪ್ರದೇಶದ ಕಾನೂನನ್ನು ಉಲ್ಲೇಖಿಸಿ ಹೇಳಿದರು. "ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ. ಬಡವರು, ದೀನದಲಿತರು ಅದಕ್ಕೆ ಒಳಗಾಗಬಾರದು. ಅವರ ಮನೆತನ, ಕುಟುಂಬದಲ್ಲಿ ಬಹಳಷ್ಟು ತೊಂದರೆಯಾಗುವುದರಿಂದ ಮತಾಂತರ ನಿಷೇಧ ಕಾಯ್ದೆಯನ್ನು ತರುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಲಿದೆ," ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.