ಉತ್ತರಕನ್ನಡ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ಕುಮಟಾದಲ್ಲಿ ಸ್ಥಳ ಪರಿಶೀಲನೆ
ಕಾರವಾರ, ಸೆಪ್ಟೆಂಬರ್ 20: ಉತ್ತರಕನ್ನಡದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸಂಬಂಧ ಆರೋಗ್ಯ ಸಚಿವ ಡಾ. ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದ ಶಾಸಕರ ನಿಯೋಗದೊಂದಿಗೆ ಸಭೆ ನಡೆಸಿದ ಬೆನ್ನಲ್ಲೆ ಜಿಲ್ಲೆಯ ಮಧ್ಯಭಾಗವಾಗಿರುವ ಕುಮಟಾದ ವಿವಿಧೆಡೆ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದ್ದು ಆಸ್ಪತ್ರೆ ಕನಸು ನನಸಾಗುವ ಹೆಬ್ಬಯಕೆ ಮೂಡುವಂತಾಗಿದೆ.
ಉತ್ತರ ಕನ್ನಡ ಜಿಲ್ಲಾ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವ ಸಂಬಂಧ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬೆಂಗಳೂರಿನ ನಿವಾಸದಲ್ಲಿ ಮಂಗಳವಾರ ಮಹತ್ವದ ಸಭೆ ನಡೆಸಲಾಯಿತು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸಂಬಂಧ ಸೂಕ್ತ ಜಾಗದೊಂದಿಗೆ ಸಕಾರಾತ್ಮಕ ತೀರ್ಮಾನ ಕೈಗೊಳ್ಳುವುದಾಗಿ ಆರೋಗ್ಯ ಸಚಿವರು ಭರವಸೆ ನೀಡಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸರಕಾರದಿಂದ ತಾತ್ವಿಕ ಒಪ್ಪಿಗೆ
ಇನ್ನೂ ವಿಸ್ತಾರವಾದ ಜಿಲ್ಲೆಯ ಮಧ್ಯಭಾಗವಾಗಿರುವ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕೆಂಬ ಎಲ್ಲರ ಸಲಹೆಯಂತೆ ಇದೇ ಪ್ರದೇಶದಲ್ಲಿ ನಿರ್ಮಾಣಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಅಧಿವೇಶನ ಮುಗಿದ ಬಳಿಕ ಪ್ರಸ್ತಾಪಿತ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸುತ್ತೇನೆ. ಈಗಾಗಲೇ ಮುಖ್ಯಮಂತ್ರಿ ಕೂಡ ಸಮ್ಮತಿ ಸೂಚಿಸಿದ ಹಿನ್ನಲ್ಲೆಯಲ್ಲಿ ಉತ್ತರಕನ್ನಡದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಆಗಲಿದೆ ಎಂದು ಸುಧಾಕರ್ ಭರವಸೆ ನೀಡಿದ್ದಾರೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಸ್ಳಳ ಪರಿಶೀಲನೆ
ಇನ್ನು ಆರೋಗ್ಯ ಸಚಿವರ ಹೇಳಿಕೆ ಬೆನ್ನಲ್ಲೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕುಮಟಾದಲ್ಲಿ ಖಾಸಗಿ ವೈದ್ಯರ ಸಹಭಾಗಿತ್ವದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಸಂಬಂಧ ಕೆ.ಎಸ್.ಹೆಗಡೆ ವೈದ್ಯಕೀಯ ಮಹಾ ವಿದ್ಯಾಲಯದ ಉಪ ಮುಖ್ಯಸ್ಥ ಡಾ.ಜಯಪ್ರಕಾಶ ಶೆಟ್ಟಿ ಹಾಗೂ ಇಂಜಿನಿಯರ್ ಆನಂದ ಅವರೊಂದಿಗೆ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಖಾಲಿಯಿರುವ ಜಾಗಗಳಾದ ಮಿರ್ಜಾನ್, ರೈಲ್ವೆ ನಿಲ್ದಾಣ, ಕೊಂಕಣ ಎಜ್ಯುಕೇಶನ್ ಸಮೀಪದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುಡ್ಡ ಕೊರೆದು ರಸ್ತೆ ಕಾಮಗಾರಿ: ಕಾರವಾರದ ನಿವಾಸಿಗಳಲ್ಲಿ ಆತಂಕ
ಕುಮಟಾ ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿ
ಸ್ಥಳ ಪರಿಶೀಲನೆ ಬಳಿಕ ಕುಮಟಾ ಸಹಾಯಕ ಆಯುಕ್ತರ ಕಛೇರಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಡಾ.ಜಯಪ್ರಕಾಶ ಶೆಟ್ಟಿ ಅವರು ಜಿಲ್ಲಾಧಿಕಾರಿಗಳ ಮುಂದೆ ಎರಡು ಪ್ರಸ್ತಾವನೆಯನ್ನು ಇಟ್ಟಿದ್ದು, ಮೊದಲನೆಯದಾಗಿ 100 ಹಾಸಿಗೆಯುಳ್ಳ ಕುಮಟಾ ಸಾರ್ವಜನಿಕ ಆಸ್ಪತ್ರೆಯನ್ನು 300 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಿ, ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ 600 ಹಾಸಿಗೆಗಳಿಗೆ ಮೇಲ್ದರ್ಜೆಗೆ ಏರಿಸಿದಲ್ಲಿ ಕೆ.ಎಸ್.ಹೆಗಡೆ ವೈದ್ಯಕೀಯ ಮಹಾ ವಿದ್ಯಾಲಯವನ್ನು ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳೊಂದಿಗೆ ಸ್ಥಾಪಿಸುವ ಬಗ್ಗೆ ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರತ್ಯೇಕವಾಗಿ ಸ್ಥಾಪಿಸುವ ಬಗ್ಗೆ ತಿಳಿಸಿದರು.
ಬಳಿಕ ಜಿಲ್ಲಾಡಳಿತ ಅಭಿಪ್ರಾಯವನ್ನು ತಿಳಿಸಿದ್ದಲ್ಲಿ ತಮ್ಮ ಸಂಸ್ಥೆಯ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ ತಿರ್ಮಾನ ಕೈಗೊಳ್ಳುವುದಾಗಿ ತಿಳಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ವರದಿ ಸಲ್ಲಿಸಲಿರುವ ಜಿಲ್ಲಾಡಳಿತ
ಇನ್ನು ಖಾಸಗಿ ಆಸ್ಪತ್ರೆಯವರ ಸಹಭಾಗಿತ್ವದಲ್ಲಿ ಜಾಗದ ಪರಿಶೀಲನೆ ನಡೆಸಿ ಚರ್ಚೆ ನಡೆಸಿರುವ ಎಲ್ಲಾ ವರದಿಯನ್ನು ಸರಕಾರಕ್ಕೆ ಜಿಲ್ಲಾಡಳಿತ ಸಲ್ಲಿಸಲಿದೆ. ಅಲ್ಲದೆ ಆಯ್ದ ಸ್ಥಳಗಳಲ್ಲಿ ಎಲ್ಲಿ ಸೂಕ್ತ ಎಂಬುದರ ಬಗ್ಗೆಯೂ ವಿಸ್ತಾರವಾದ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕಾರವಾರದ ಮೆಡಿಕಲ್ ಕಾಲೇಜು ಉನ್ನತೀಕರಿಸುವ ಭರವಸೆ
ಜಿಲ್ಲೆಯ ಸೂಕ್ತ ಸ್ಥಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದರ ಜೊತೆಗೆ ಕಾರವಾರದ ಮೆಡಿಕಲ್ ಕಾಲೇಜು ಉನ್ನತ ದರ್ಜೆಗೇರಿಸಿ ಅದರಲ್ಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇರಬೇಕಾದ ಎಲ್ಲ ಅಗತ್ಯ ಸೌಲಭ್ಯ ಕಲ್ಪಿಸಲು ಸರಕಾರ ಸಮ್ಮಿತಿಸಿದೆ. ಇದರಿಂದ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.
ಕಾರವಾರದಲ್ಲಿ ಮೆಡಿಕಲ್ ಕಾಲೇಜು ಇದ್ದು, ಇಲ್ಲಿ 160 ಕೋಟಿ ರೂ. ವೆಚ್ಚದಲ್ಲಿ 450 ಹಾಸಿಗೆ ಸಾಮರ್ಥ್ಯ ಇರುವ ಕಟ್ಟಡ ನಿರ್ಮಾಣ ಕಾರ್ಯ ವರ್ಷದ ಹಿಂದೆ ಆರಂಭಗೊಂಡಿದೆ. ಇದರಲ್ಲಿ ಎರಡು ಮಹಡಿಗಳನ್ನು ಹೆಚ್ಚುವರಿಯಾಗಿ ನಿರ್ಮಿಸಲಾಗುವುದು. ಜತೆಗೆ ನರರೋಗ ಚಿಕಿತ್ಸಾ ವಿಭಾಗ, ಕ್ಯಾನ್ಸರ್ ಚಿಕಿತ್ಸಾ ವಿಭಾಗ, ಎಂಆರ್ ಐ ಯಂತ್ರ, ಹೀಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿರಬೇಕಾದ ಎಲ್ಲ ಚಿಕಿತ್ಸಾ ವಿಭಾಗ, ತಜ್ಞ ವೈದ್ಯರು, ಅಗತ್ಯ ಉಪಕರಣಗಳನ್ನು ಕಲ್ಪಿಸಲಾಗುವುದು ಎಂದು ಆರೋಗ್ಯ ಸಚಿವರಾದ ಸುಧಾಕರ್ ಅವರು ಭರವಸೆ ನೀಡಿದ್ದಾರೆ ಎಂದರು.