ಹಫ್ತಾಕ್ಕೆ ಬೇಡಿಕೆ ಆರೋಪದಲ್ಲಿ ಶ್ರೀರಾಮ ಸೇನಾ ಉಪಾಧ್ಯಕ್ಷನ ಬಂಧನ; ಮುತಾಲಿಕ್ ಹೇಳೋದೇನು?
ಕಾರವಾರ, ಫೆಬ್ರವರಿ 6: ಭಟ್ಕಳ ತಾಲ್ಲೂಕಿನ ಮುರುಡೇಶ್ವರದ ನೇತ್ರಾಣಿ ಸ್ಕೂಬಾ ಡೈವಿಂಗ್ ಮಾಲೀಕ ಗಣೇಶ ಹರಿಕಾಂತ ಅವರ ಬಳಿ ಹಫ್ತಾ ಕೇಳಿ, ಕೊಡದಿದ್ದಲ್ಲಿ ಜೀವ ಬೆದರಿಕೆ ಹಾಕಿದ್ದ ಆರೋಪದ ಮೇರೆಗೆ ಪೊಲೀಸರು ಶ್ರೀರಾಮ ಸೇನೆಯ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕರನ್ನು ಬಂಧಿಸಿದ್ದಾರೆ.
'ಜ.2ರಂದು ಮುರುಡೇಶ್ವರದ ಸಮುದ್ರ ತೀರದಲ್ಲಿರುವುದನ್ನು ಗಮನಿಸಿದ ಆರೋಪಿಯು ನೇರವಾಗಿ ಬಂದು ಅವಾಚ್ಯ ಶಬ್ದದಿಂದ ಬೈಯ್ದು ನಿಂದಿಸಿದ್ದ. ಸ್ಕೂಬಾ ಡೈವಿಂಗ್ ಹಾಗೂ ಉತ್ತರ ಕನ್ನಡ ಸಿರಿ ಉತ್ಪನ್ನಗಳ ಮಳಿಗೆಯನ್ನು ನಡೆಸಬೇಕಾದರೆ ತಿಂಗಳಿಗೆ ಹಫ್ತಾ ನೀಡಬೇಕೆಂದು ಬೆದರಿಕೆಯೊಡ್ಡಿದ್ದ'.
ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೇ ವಂಚನೆ!
ಒಂದು ವೇಳೆ ಹಣ ನೀಡದಿದ್ದಲ್ಲಿ ಅಂಗಡಿ ಹಾಗೂ ಸ್ಕೂಬಾ ಡೈವಿಂಗ್ ಮುಚ್ಚಿಸುವುದಾಗಿ ಬೆದರಿಸಿ, ಜಿಲ್ಲಾಧಿಕಾರಿಗೆ, ಪೊಲೀಸ್ ಇಲಾಖೆಗೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿ ಮುಚ್ಚಿಸುತ್ತೇನೆ ಎಂದು ಹೇಳಿದ್ದ' ಎಂದು ಗಣೇಶ ಹರಿಕಾಂತ ದೂರಿದ್ದಾರೆ.
'ಸ್ಕೂಬಾ ಡೈವಿಂಗ್ಗೆ ತರಬೇತಿ ನೀಡುವ ತರಬೇತುದಾರರಿಗೂ ಜೀವ ಬೆದರಿಕೆ ಹಾಕಿದ ಕಾರಣ ಅವರು ಸಹ ಕೆಲಸಕ್ಕೆ ಬರುತ್ತಿಲ್ಲ. ಮುರುಡೇಶ್ವರಕ್ಕೆ ಬರುವ ಪ್ರವಾಸಿಗರಿಗೆ ಸ್ಕೂಬಾ ಡೈವಿಂಗ್ ಬಗ್ಗೆ ತಪ್ಪು ಮಾಹಿತಿ ನೀಡಿ ಪ್ರವಾಸಿಗರು ಸ್ಕೂಬಾ ಡೈವಿಂಗ್ಗೆ ಬಾರದಂತೆ ಮಾಡಿ ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ' ಎಂದು ಗಣೇಶ ಹರಿಕಾಂತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪಿಎಸ್ಐ ಸಿ.ಆರ್.ಪುಟ್ಟಸ್ವಾಮಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಆರೋಪಿಯನ್ನು ಬಂಧಿಸಿ, ಕಾರವಾರದ ಕಾರಾಗೃಹಕ್ಕೆ ರವಾನಿಸಿದ್ದಾರೆ.
ಈ ಬಗ್ಗೆ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ""ಗಣೇಶ ಹರಿಕಾಂತ ಕೆಲವೊಂದು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಜಯಂತ್ ನಾಯ್ಕ ದಾಖಲೆ ಕಲೆ ಹಾಕಿದ್ದರು. ಈ ಬಗ್ಗೆ ದೂರು ಸಹ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಯಂತ್ ಅವರನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಗಣೇಶ್ ನೀಡಿದ್ದಕ್ಕೆ ಜಯಂತ್ ಅವರನ್ನು ಬಂಧಿಸಿದ್ದಾರೆ'' ಎಂದಿದ್ದಾರೆ.
""ವ್ಯವಸ್ಥಿತವಾಗಿ ಜಯಂತರನ್ನು ಹತ್ತಿಕ್ಕುವ ಕೆಲಸವಾಗಿದೆ. ಶೀಘ್ರದಲ್ಲೇ ಭಟ್ಕಳಕ್ಕೆ ಬರಲಿದ್ದು, ಗಣೇಶ ಹರಿಕಾಂತ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಅವರನ್ನು ಬಂಧಿಸುವಂತೆ ಒತ್ತಾಯಿಸಲಿದ್ದೇವೆ. ನಮ್ಮ ಬಳಿ ದಾಖಲೆ ಇದ್ದು, ಪೊಲೀಸರು ಗಣೇಶ ಅವರ ಬಳಿ ಹಣ ಪಡೆದು ಜಯಂತರನ್ನು ಬಂಧಿಸಿದ್ದಾರೆ'' ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.