ಮುರುಡೇಶ್ವರ: ರಕ್ಷಣೆ ಮಾಡಿದ ಲೈಫ್ ಗಾರ್ಡ್ ಮೇಲೆ ಹಲ್ಲೆ; ಮದ್ಯದ ಅಮಲಿನಲ್ಲಿ ಪ್ರವಾಸಿಗರ ರಂಪಾಟ
ಕಾರವಾರ, ಜನವರಿ, 16: ಕುಡಿದ ಮತ್ತಿನಲ್ಲಿ ಅಲೆಯ ಹೊಡತಕ್ಕೆ ಕೊಚ್ಚಿ ಹೋಗುತ್ತಿದ್ದವರನ್ನು ರಕ್ಷಣೆ ಮಾಡಿದ ಲೈಫ್ಗಾರ್ಡ್ಗಳ ಮೇಲೆ ಪ್ರವಾಸಿಗರು ಹಲ್ಲೆ ನಡೆಸಿದ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲತೀರದಲ್ಲಿ ನಡೆದಿದೆ.
ನೀಲಪ್ಪ ಬಾಲರೆಡ್ಡಿ ಮತ್ತು ಪ್ರಶಾಂತ ಹಳ್ಳಿಗಂಡಿ ರಕ್ಷಣೆಗೊಳಗಾಗಿ ಹಲ್ಲೆ ನಡೆಸಿದ ಪ್ರವಾಸಿಗರಾಗಿದ್ದಾರೆ. ಗದಗ ಜಿಲ್ಲೆಯಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಆಗಮಿಸಿದ್ದ ಪ್ರವಾಸಿಗರು ಕಡಲ ತೀರದಲ್ಲಿ ಅಪಾಯದ ಮಟ್ಟದಲ್ಲಿ ಈಜಾಡುತ್ತಿದ್ದರು. ಕಂಠಪೂರ್ತಿ ಕುಡಿದಿದ್ದ ಪರಿಣಾಮದಿಂದಾಗಿ ಅಲೆಗೆ ಕೊಚ್ಚಿ ಹೋಗುತ್ತಿದ್ದರು. ಆಗ ಲೈಫ್ ಗಾರ್ಡ್ ತೆರಳಿ ರಕ್ಷಣೆ ಮಾಡಿ ಅವರನ್ನು ಕರೆತಂದಿದ್ದರು ಎನ್ನಲಾಗಿದೆ. ಆದರೆ ತಾವು ಎಕ್ಸ್ಪರ್ಟ್ ಈಜುಪಟುಗಳಾಗಿದ್ದೇವೆ. ನಮ್ಮನ್ನು ಯಾಕೆ ಎಳೆದು ತಂದಿದ್ದೀರಿ? ಎಂದು ರಕ್ಷಣೆ ಮಾಡಿದವರೊಂದಿಗೆ ವಾಗ್ವಾದಕ್ಕಿಳಿದು ಕೊನೆಗೆ ಕುಡಿದ ಅಮಲಿನಲ್ಲಿ ಲೈಫ್ ಗಾರ್ಡ್ ಓರ್ವರ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಇದರಿಂದ ಲೈಫ್ ಗಾರ್ಡ್ಗ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಇಲ್ಲದೆ ಬೆರಡೆ ಗ್ರಾಮಸ್ಥರ ಪರದಾಟ: 5 ಕಿ.ಮೀ ಕಾಲ್ನಡಿಗೆಯಲ್ಲಿ ಶವ ಸಾಗಾಟ
ಇನ್ನು ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಅಲೆ ಸುಳಿಗೆ ಸಿಲುಕಿ ಕೊಚ್ಚಿ ಹೋಗುತಿದ್ದ ಅಪ್ಪ- ಮಗ ಇಬ್ಬರನ್ನು ಲೈಫ್ ಗಾರ್ಡ್ ರಕ್ಷಣೆ ಮಾಡಿದ್ದಾರೆ. ಧಾರವಾಡ ಮೂಲದ ಸೋಮಶೇಖರ್ (53), ಕೇಶವ್ (21) ರಕ್ಷಣೆಗೊಳಗಾದವರಾಗಿದ್ದಾರ. ಕುಟುಂಬದೊಂದಿಗೆ ಒಟ್ಟು ಎಂಟು ಜನರು ಪ್ರವಾಸಕ್ಕೆ ಬಂದಿದ್ದರು. ಆಳ ಇರುವ ಕಡೆ ಸಮುದ್ರದಲ್ಲಿ ಈಜಲು ತೆರಳಿ ಸುಳಿಗೆ ಕೊಚ್ಚಿ ಹೋಗುತ್ತಿದ್ದರು. ಈ ವೇಳೆ ಲೈಫ್ ಗಾರ್ಡ್ ತೆರಳಿ ಅಪ್ಪ-ಮಗ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಮಕ್ಕಳನ್ನ ರಕ್ಷಿಸಿದ ಲೈಫ್ ಗಾರ್ಡ್
ಪ್ರವಾಸಕ್ಕೆ ಬಂದು ಸಮುದ್ರದಲ್ಲಿ ಈಜಾಡುತ್ತಿದ್ದಾಗ ಅಲೆ ರಬಸಕ್ಕೆ ಕೊಚ್ಚಿ ಹೋಗುತ್ತಿದ್ದ ಮೂವರು ಮಕ್ಕಳನ್ನು ಲೈಫ್ ಗಾರ್ಡ್ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ತೆರಳಿ ರಕ್ಷಣೆ ಮಾಡಿರುವ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದಿದೆ. ಅಲೆಗೆ ಸಿಲುಕಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಮಾರುತಿ (20), ಚಂದನಾ (16), ಮಧುಸೂದನ್ (11) ಎನ್ನುವ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ನೆರವಿಗೆ ಧಾವಿಸಿದ ಲೈಫ್ ಗಾರ್ಡ್
ಕುಟುಂಬ ಸಮೇತರಾಗಿ ಗೋಕರ್ಣಕ್ಕೆ ಪ್ರವಾಸಕ್ಕೆ ಆಗಮಿಸಿದ್ದವರು ಸಮುದ್ರದಲ್ಲಿ ಈಜಾಡಲು ತೆರಳಿದ್ದರು. ಈ ವೇಳೆ ಮಹಿಳೆ ಸೇರಿ ಮೂರು ಮಕ್ಕಳು ಸುಳಿಗೆ ಸಿಲುಕಿ ನೀರು ಪಾಲಾಗುವ ಹಂತದಲ್ಲಿದ್ದರು. ಇದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಮೋಹನ್ ಅಂಬಿಗ, ಶಿವಪ್ರಸಾದ ಅಂಬಿಗ, ಬೀಚ್ ಸುಪ್ರವೈಸರ್ ರವಿ ನಾಯ್ಕ್, ಪ್ರವಾಸಿ ಮಿತ್ರ ರಘುವೀರ ನಾಯ್ಕ್ ಹಾಗೂ ಗೋಕರ್ಣ ಓಂ ಬೀಚ್ ಟೂರಿಸ್ಟ್ ಬೋಟ್ ಅಸೋಸಿಯೇಷನ್ ಸಿಬ್ಬಂದಿಗಳಾದ ಅಶೋಕ್ ಹೊಸ್ಕಟ್ಟ, ದೀಪಕ್ ಗೌಡ, ಶಶಿಕುಮಾರ್ ಬಿಜಾಪುರ, ಕಮಲಾಕರ ಹೊಸಕಟ್ಟ, ಮಹೇಶ್ ಹೊಸಕಟ್ಟ, ಸಂದೇಶ್ ಗಾಬಿತ್, ಚಿದಾನಂದ ಲಕ್ಕುಮನೆ ತಕ್ಷಣ ಸಹಾಯಕ್ಕೆ ತೆರಳಿ ರಕ್ಷಣೆ ಮಾಡಿದ್ದಾರೆ.
ಭಟ್ಕಳದಲ್ಲಿ ಬಾಂಬ್ ಸ್ಪೋಟ ಮಾಡುವುದಾಗಿ ಬೆದರಿಕೆ: ಆರೋಪಿಯನ್ನ ಬಂಧಿಸಿದ ಚೆನ್ನೈ ಪೊಲೀಸರು
ಕ್ಯಾರೆ ಅನ್ನದ ಪ್ರವಾಸಿಗರು
ಇನ್ನು ಜಿಲ್ಲೆಯ ಪ್ರಮುಖ ಕಡಲತೀರಗಳಲ್ಲಿ ಪ್ರವಾಸಿಗರಿಗೆ ಅಪಾಯಕಾರಿ ಸ್ಥಳಗಳಲ್ಲಿ ನೀರಿಗೆ ಇಳಿಯದಂತೆ ಮಾಹಿತಿ ನೀಡಲು ಮತ್ತು ತೊಂದರೆಗೆ ಸಿಲುಕಿಕೊಂಡವರ ರಕ್ಷಣೆಗೆ ಲೈಫ್ ಗಾರ್ಡ್ ನೇಮಕ ಮಾಡಲಾಗಿದೆ. ಆದರೆ ಗೋಕರ್ಣ, ಮುರುಡೇಶ್ವರ, ಕಾರವಾರ ಸೇರಿದಂತೆ ಬಹುತೇಕ ಕಡೆ ಪ್ರವಾಸಿಗರಿಗೆ ಅಪಾಯಕಾರಿ ಪ್ರದೇಶಕ್ಕೆ ತೆರಳದಂತೆ ಸೂಚಿಸುತ್ತಿದ್ದಾರೆ. ಆದರೆ ಪ್ರವಾಸಿಗರು ತಮ್ಮ ರಕ್ಷಣೆಗೆ ಬಂದಂತಹ ಲೈಫ್ ಗಾರ್ಡ್ಗಳೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ.
ಪ್ರವಾಸಿಗರಿಗೆ ಲೈಫ್ ಗಾರ್ಡ್ ಕಿವಿಮಾತು
ಅಲ್ಲದೆ ಎಷ್ಟೇ ಹೇಳಿದರೂ ಕೂಡ ವಾಹನಗಳನ್ನು ಬೀಚ್ಗೆ ಇಳಿಸುತ್ತಿದ್ದಾರೆ. ಇದರಿಂದ ಅದೆಷ್ಟೋ ವಾಹನಗಳು ಸಿಲುಕಿಕೊಂಡು ಪರದಾಡಿದ ಘಟನೆಗಳು ಕೂಡ ನಡೆದಿವೆ. ಅಲ್ಲದೆ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದು, ಅಪಾಯ ತಂದೊಡ್ಡಿಕೊಳ್ಳುತ್ತಿದ್ದಾರೆ. ಪ್ರವಾಸಿಗರು ನೀರಿನಲ್ಲಿ ಇಳಿದು ಆಟವಾಡಲು ನಮ್ಮ ಅಭ್ಯಂತರವಿಲ್ಲ. ಆದರೆ ನಾವು ಅಪಾಯ ಇದೆ ಎಂದಾಗಲೂ ಕೂಡ ಅಲ್ಲಿಗೆ ತೆರಳುತ್ತಾರೆ. ಇದರಿಂದ ಅಪಾಯಕ್ಕೆ ಸಿಲುಕುತ್ತಿದ್ದಾರೆ ಎಂದು ಮುರುಡೇಶ್ವರದ ಲೈಫ್ ಗಾರ್ಡ್ ಶೇಖರ್ ಹೇಳಿದ್ದಾರೆ.
ಒಟ್ಟಾರೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಕಡಲ ತೀರಗಳಲ್ಲಿ ಪ್ರವಾಸಿಗರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಮತ್ತು ಅವರ ರಕ್ಷಣೆಗೆ ಲೈಫ್ ಗಾರ್ಡ್ ನೇಮಕ ಮಾಡಲಾಗಿದೆ. ಇದರ ಪ್ರಯೋಜನವನ್ನು ಸರಿಯಾದ ರೀತಿಯಲ್ಲಿ ಪ್ರವಾಸಿಗರು ಪ್ರಯೋಜನ ಪಡೆದುಕೊಳ್ಳಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.