ಹೈದರಾಬಾದ್ನಲ್ಲಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿಗೆ Z+ ಭದ್ರತೆ
ಹೈಜರಾಬಾದ್, ಸೆಪ್ಟೆಂಬರ್ 10: ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿದ ಹೆಚ್ ಡಿ ಕುಮಾರಸ್ವಾಮಿಗೆ ಪಕ್ಕದ ರಾಜ್ಯದಲ್ಲಿ ಝಡ್ ಪ್ಲಸ್ ಭದ್ರತೆಯನ್ನು ನೀಡುವುದಾಗಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.
ಇಲ್ಲಿ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗೆ ಪಕ್ಕದ ರಾಜ್ಯದ ಸರ್ಕಾರವು ಏಕೆ ಝಡ್ ಪ್ಲಸ್ ಸೆಕ್ಯೂರಿಟಿ ಕೊಡಬೇಕು ಎಂಬ ಕುತೂಹಲ ಮೂಡುವುದು ಸಹಜ. ಅದಕ್ಕೆ ಕಾರಣವೇ ಒಂದು ದಿನದ ಪ್ರವಾಸ. ಹೌದು ಹೈದರಾಬಾದ್ ಪ್ರವಾಸಕ್ಕೆ ತೆರಳುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ಇದೀಗ ಝಡ್ ಪ್ಲಸ್ ಸೆಕ್ಯೂರಿಟಿಯನ್ನು ನೀಡಲಾಗಿದೆ.
ಬೆಂಗಳೂರು 'ಜಲಕಂಟಕ' ನಿವಾರಣೆಗೆ ಕಾಂಗ್ರೆಸ್ ನಾಯಕರ ಟಿಪ್ಸ್!
ಕೇಂದ್ರದಲ್ಲಿ ಬಲಿಷ್ಠವಾಗಿರುವ ಬಿಜೆಪಿಗೆ ಸೆಡ್ಡು ಹೊಡೆಯುವುದಕ್ಕಾಗಿ ಪ್ರಾದೇಶಿಕ ಪಕ್ಷಗಳ ಒಕ್ಕೂಟವನ್ನು ರಚಿಸಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಪಕ್ಷಗಳ ಮುಖಂಡರು ಆಗಾಗ್ಗೆ ಭೇಟಿ ಮಾಡುತ್ತಿದ್ದಾರೆ. ಇಂಥದ್ದೇ ಭೇಟಿಗೆ ತೆರಳುತ್ತಿರುವ ಕುಮಾರಸ್ವಾಮಿಯವರಿಗೆ ಹೆಚ್ಚಿನ ಭದ್ರತೆ ನೀಡುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಹೈದರಾಬಾದ್ನಲ್ಲಿ ಕುಮಾರಸ್ವಾಮಿ ಪ್ರವಾಸದ ಯೋಜನೆ
ಸೆಪ್ಟೆಂಬರ್ 10ರ ಶನಿವಾರ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೈದರಾಬಾದ್ಗೆ ತೆರಳಲಿದ್ದು, ರಾತ್ರಿ 10.55ಕ್ಕೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ. ಮಧ್ಯರಾತ್ರಿ 12.15 ಗಂಟೆಗೆ ಹೋಟೆಲ್ ಐಟಿಸಿ ಗ್ರ್ಯಾಂಡ್ ಕಾಕತೀಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸೆಪ್ಟೆಂಬರ್ 11ರ ಮಧ್ಯಾಹ್ನ 12.30ಕ್ಕೆ ಹೈದರಾಬಾದ್ನಲ್ಲಿ ಇರುವ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ತೆರಳಲಿದ್ದಾರೆ. ಸಂಜೆ 4 ಗಂಟೆವರೆಗೂ ಮುಖ್ಯಮಂತ್ರಿಗಳೊಂದಿಗೆ ಹೆಚ್ ಡಿ ಕುಮಾರಸ್ವಾಮಿ ಚರ್ಚೆ ನಡೆಸಲಿದ್ದಾರೆ. ಅಲ್ಲಿಂದ ಸರಿಯಾಗಿ 6 ಗಂಟೆಗೆ ರಾಜೀವ್ ಗಾಂಧಿ ವಿಮಾನ ನಿಲ್ದಾಣಕ್ಕೆ ತೆರಳಲಿರುವ ಹೆಚ್ ಡಿಕೆ, ಸಂಜೆ 6.25 ವಿಮಾನದಲ್ಲಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
KCR-HDK ಭೇಟಿ ಕುತೂಹಲ ಕೆರಳಿಸಿದ್ದು ಏಕೆ?
ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಸಿಎಂ ಭೇಟಿಗೆ ತೆರಳುತ್ತಿರುವ HDK ಅವರಿಗೆ ಝಡ್ ಪ್ಲಸ್ ಭದ್ರತೆ ನೀಡಿರುವುದು ಮತ್ತಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಪ್ರಬಲವಾಗಿರುವ ರಾಜಕೀಯ ನಾಯಕರು ಒಟ್ಟುಗೂಡುತ್ತಿದ್ದಾರೆ. ಬಿಜೆಪಿಗೆ ಬಾಯ್ ಬಾಯ್ ಎಂದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್ ಜೆಡಿ ಜೊತೆಗೆ ಸೇರಿಕೊಂಡು ಹೊಸ ಸರ್ಕಾರ ರಚಿಸಿದ್ದು ಆಗಿದೆ. ಈ ಎಲ್ಲ ಬೆಳವಣಿಗೆಯ ಮಧ್ಯೆ ಅವರು ಜನತಾ ಪರಿವಾರದ ನಾಯಕರನ್ನು ಭೇಟಿ ಮಾಡುತ್ತಿರುವುದು ಎಲ್ಲರನ್ನೂ ಒಂದುಗೂಡಿಸುವುದಕ್ಕೆ ಮಾಡುತ್ತಿರುವ ಪ್ರಯತ್ನ ಅಂತಲೇ ಅಂದಾಜಿಸಲಾಗುತ್ತಿದೆ.
ಬಿಹಾರ ಮುಖ್ಯಮಂತ್ರಿಯಿಂದ ಜೆಡಿಎಸ್ ನಾಯಕರ ಭೇಟಿ
ನವದೆಹಲಿಯಲ್ಲಿ ಇತ್ತೀಚಿಗಷ್ಟೇ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ನಿವಾಸದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಮಾತುಕತೆ ನಡೆಸಲಾಗಿತ್ತು. ಜನತಾ ಪರಿವಾರ ಒಗ್ಗೂಡುವ ಬಗ್ಗೆ ಅಂದು ಚರ್ಚೆ ನಡೆದಿತ್ತು. ಕೆಲ ದಿನಗಳ ಹಿಂದೆ ಬಿಹಾರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ನಂತರ ಮತ್ತೆ ಈ ಚರ್ಚೆಗೆ ಚಾಲನೆ ಸಿಕ್ಕಿಂತೆ ಆಗಿದೆ. ಜಯಪ್ರಕಾಶ ನಾರಾಯಣ್ ಪ್ರಾರಂಭಿಸಿದ ಜನತಾ ಪರಿವಾರ ಮತ್ತೆ ಒಂದುಗೂಡಬೇಕಿದೆ. ದೇಶದಲ್ಲಿ ಬಲವಾದ ವಿಪಕ್ಷದ ಅವಶ್ಯಕತೆ ಇದೆ ಎಂದು ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದರು.
ಒಗ್ಗಟ್ಟಿನ ಮಂತ್ರ ಜಪಿಸಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲರೂ ಒಗ್ಗೂಡುವ ಅವಶ್ಯಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಇತ್ತೀಚಿಗೆ ದೇಶದ ಉದ್ದಗಲಕ್ಕೂ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಎಲ್ಲರ ಗಮನ ಸೆಳೆಯುತ್ತಿದೆ. ಜನತಾ ಪರಿವಾರ ಮತ್ತೆ ಒಂದಾಗಬೇಕೆಂಬ ಚರ್ಚೆಗಳು ನಡೆದಿವೆ. ನಿತೀಶ್ ಕುಮಾರ್ ಅವರು ಕೆಲ ಮಹತ್ವದ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಪ್ರಾಥಮಿಕ ಹಂತದ ಚರ್ಚೆಗಳಾಗಿವೆ ಎಂದಿದ್ದರು.
2018ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡಿದಾಗ ಸುಮಾರು 23 ರಾಜ್ಯಗಳ ಪ್ರಮುಖ ನಾಯಕರುಗಳು ಅದರಲ್ಲಿ ಭಾಗವಹಿಸಿದ್ದರು. ಹಲವು ರಾಜ್ಯದ ಮುಖ್ಯಮಂತ್ರಿಗಳು ಆ ಪ್ರಮಾಣದ ಸಮಾರಂಭದಲ್ಲಿ ಸೇರಿದ್ದ ಅವತ್ತಿನ ಸನ್ನಿವೇಶ, ಒಂದು ಪರ್ಯಾಯ ಶಕ್ತಿಯನ್ನು ಒಟ್ಟುಗೂಡಿಸಬೇಕೆಂಬ ಆಸೆ ಇತ್ತು. ಆದರೆ ಅದಕ್ಕೆ ಹಿನ್ನಡೆ ಆಯಿತು. ಬಿಹಾರದಲ್ಲಿ ಆಗಿರುವ ಬೆಳವಣಿಗೆಯಿಂದ ಯಾವ ರೀತಿ ಬದಲಾವಣೆ ಆಗುತ್ತದೆ ಎಂಬುದನ್ನು ಕಾದು ನೋಡೋಣ ಎಂದಿದ್ದರು.