ಡಿಸೆಂಬರ್ ನಂತರ ಮಂಡೂರಲ್ಲಿ ಕಸ ಹಾಕಲ್ಲ
ಬೆಂಗಳೂರು, ಅ. 8: ಕಸದ ಸಮಸ್ಯೆಯಿಂದ ಬೇಸತ್ತಿದ್ದ ಮಂಡೂರಿನ ಜನರಿಗೆ ಸಿಎಂ ಕೊಂಚ ರಿಲೀಫ್ ನೀಡುವ ಯತ್ನ ಮಾಡಿದ್ದಾರೆ. ಡಿಸೆಂಬರ್ನಿಂದ ನಿಮ್ಮ ಊರಿಗೆ ಕಸ ಹಾಕಲ್ಲ ಎಂದು ಮುಖ್ಯಮಂತ್ರಿ ಅಭಯ ನೀಡಿದ್ದಾರೆ.
ನಗರದ ತ್ಯಾಜ್ಯ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು ಡಿಸೆಂಬರ್ನಿಂದ ಮಂಡೂರಿನಲ್ಲಿ ಕಸ ವಿಲೇವಾರಿ ಮಾಡುವುದನ್ನು ಸಂಪೂರ್ಣ ನಿಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.[ಮಂಡೂರಿನಲ್ಲಿ ಸಿಎಂ: ಶಿಳ್ಳೆ ಹೊಡೆಯೋಕೆ ಅಣ್ಣಾವ್ರ ಸಿನಿಮಾನ]
ನಗರದಲ್ಲಿ ನಿತ್ಯ ಉತ್ಪಾದನೆಯಾಗುವ 4 ಸಾವಿರ ಟನ್ ಕಸದ ಪೈಕಿ 1,200 ಟನ್ನಷ್ಟು ಕಸ 150 ಟ್ರಕ್ಗಳಲ್ಲಿ ಪ್ರತಿದಿನ ಮಂಡೂರಿಗೆ ಸಾಗಿಸಲಾಗುತ್ತಿತ್ತು. ಆದರೆ ಇದೀಗ ತ್ಯಾಜ್ಯ ವಿಲೇವಾರಿಗೆ ಬೇರೆ ಮಾರ್ಗ ತೆಗೆದುಕೊಳ್ಳಲಾಗುತ್ತಿದೆ ಎಂದು ಗೃಹ ಕಚೇರಿ 'ಕೃಷ್ಣಾ'ದಲ್ಲಿ ಕರೆದಿದ್ದ ಅಧಿಕಾರಿಗಳು ಮತ್ತು ಸಚಿವರ ಸಭೆಯ ನಂತರ ತಿಳಿಸಿದರು.
ಎಂಎಸ್ಜಿಪಿ ಘಟಕದಲ್ಲಿ ನಿತ್ಯ 500 ರಿಂದ 750 ಟನ್, ಬಯೋಮಿಥನೇಶನ್ ಘಟಕದಲ್ಲಿ ನಿತ್ಯ 50 ಟನ್ ಮತ್ತು ನೋಬೆಲ್ ಎಕ್ಸ್ಚೆಂಜ್ ಕಂಪನಿ ಘಟಕದಲ್ಲಿ 50 ಟನ್ ಕಸ ಸಂಸ್ಕರಣೆ ಮಾಡಲಾಗುವುದು. ಈ ಮೂರು ಘಟಕಗಳು ಕಾರ್ಯಾರಂಭ ಮಾಡಲು ಸಿದ್ಧವಾಗಿವೆ. ಮುಚ್ಚಲಾಗಿದ್ದ ಮಾವಳ್ಳಿಪುರ ಘಟಕವನ್ನು ಮತ್ತೆ ಆರಂಭಿಸಿ ಅಲ್ಲಿ 300 ಟನ್ ಕಸ ಸಂಸ್ಕರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಇದಲ್ಲದೇ ಮಂಡೂರಿನಲ್ಲಿ ವಿಲೇವಾರಿ ಮಾಡಿರುವ ಕಸವನ್ನು ಮುಂದಿನ ಎರಡು ವರ್ಷದಲ್ಲಿ ಸಂಪೂರ್ಣ ಸಂಸ್ಕರಣೆ ಮಾಡಲಾಗುವುದು. ಸಂಸ್ಕರಣಾ ಘಟಕಕ್ಕೆ ಕಸ ಸಾಗಿಸುವ ಮುನ್ನ ಒಣ ಮತ್ತು ಹಸಿ ಕಸಗಳನ್ನು ಪ್ರತ್ಯೇಕವಾಗಿ ಬೇರ್ಪಡಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.[ಮೇ. 31ರ ನಂತರ ಕಸ ಸುರಿಯಲು ಜಾಗವಿಲ್ಲ!]
ಕಲ್ಲು ಕ್ವಾರಿ ಜಾಗಕ್ಕೆ ಕಸ: ನಗರದ ಸುತ್ತ 230 ಎಕರೆ ಪ್ರದೇಶದಲ್ಲಿ ದೊಡ್ಡ ದೊಡ್ಡ ಕಲ್ಲು ಕ್ವಾರಿಗಳಿವೆ. ಅಕ್ರಮವಾಗಿ ನಡೆಯುತ್ತಿರುವ ಈ ಎಲ್ಲ ಘಟಕಗಳನ್ನು ಮುಚ್ಚಿಸಿ ಈ ಜಾಗದಲ್ಲಿ ಕಸ ಹಾಕಲಾಗುವುದು ಅಲ್ಲದೇ ನಗರದ ಸುತ್ತ ಆರು ಕಡೆ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಮೇಯರ್ ಶಾಂತಕುಮಾರಿ ಮತ್ತು ಹಿರಿಯ ಅಧಿಕಾರಿಗಳುನ ಹಾಜರಿದ್ದರು.