ಸಣ್ಣ ವ್ಯಾಪಾರಿಗಳಿಗೆ ಮೊಬೈಲ್ ಬ್ಯಾಂಕ್, ನ.22ರಂದು ಚಾಲನೆ
ಬೆಂಗಳೂರು, ನವೆಂಬರ್ 11 : ಬೀದಿ ಮತ್ತು ಸಣ್ಣ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ನೀಡಲು ಮೊಬೈಲ್ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತದೆ. ಈ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನವೆಂಬರ್ 22ರಂದು ಚಾಲನೆ ನೀಡಲಿದ್ದಾರೆ.
ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ನವೆಂಬರ್ 22ರಂದು ಮೊಬೈಲ್ ಬ್ಯಾಂಕ್ ಉದ್ಘಾಟನೆಯಾಗಲಿದ್ದು, 'ಬಡವರ ಬಂಧು' ಎಂಬ ಹೆಸರಿನಲ್ಲಿ ಸಣ್ಣ ವ್ಯಾಪಾರಿಗಳಿಗೆ 10000 ರೂ. ಬಡ್ಡಿ ರಹಿತ ಸಾಲ ಸಿಗಲಿದೆ.
ಸಾಲವನ್ನು ಪಡೆದ ಫಲಾನುಭವಿಗಳು ದಿನಕ್ಕೆ 100 ರೂ. ಅಥವ ನೂರು ದಿನದಲ್ಲಿ ಸಂಪೂರ್ಣ ಹಣವನ್ನು ವಾಪಸ್ ಮಾಡಬಹುದು. ಸಣ್ಣ ವ್ಯಾಪಾರಿಗಳನ್ನು ಬಡ್ಡಿದಂಧೆ ನಡೆಸುವ ಜನರಿಂದ ಕಾಪಾಡಲು ಈ ಯೋಜನೆ ಜಾರಿಗೆ ತರಲಾಗುತ್ತಿದೆ.

ನವೆಂಬರ್ 22ರಂದು ಬೆಂಗಳೂರು ನಗರದಲ್ಲಿ 3 ಮೊಬೈಲ್ ಬ್ಯಾಂಕ್ಗಳನ್ನು ಆರಂಭ ಮಾಡಲಾಗುತ್ತದೆ. ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿಯೂ ಒಂದು ಮೊಬೈಲ್ ಯೂನಿಟ್ ಚಾಲನೆಗೊಳ್ಳಲಿದೆ. ಮೊದಲ ಹಂತದಲ್ಲಿ 53,000 ಫಲಾನುಭವಿಗಳನ್ನು ಗುರುತಿಸಲಾಗಿದೆ. ಬೆಂಗಳೂರಿನಲ್ಲಿಯೇ 5 ಸಾವಿರ ಫಲಾನುಭವಿಗಳಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರು 'ಕಾಯಕ' ಎಂಬ ಯೋಜನೆಯನ್ನು ಈ ತಿಂಗಳ ಅಂತ್ಯದಲ್ಲಿ ಆರಂಭಿಸಲಿದ್ದಾರೆ. ಸ್ವ-ಸಹಾಯ ಸಂಘಗಳು ಸ್ವಂತ ಉದ್ಯಮ ಆರಂಭಿಸಲು 10 ಲಕ್ಷದ ತನಕ ಸಾಲವನ್ನು ಯೋಜನೆಯಡಿ ನೀಡಲಾಗುತ್ತದೆ. ಇದರಲ್ಲಿ ಶೇ 50ರಷ್ಟು ಬಡ್ಡಿ ರಹಿತವಾಗಿರುತ್ತದೆ.











Click it and Unblock the Notifications