ಕುಮಾರ್ ಬಂಗಾರಪ್ಪ ಅಸಮಾಧಾನ ಶಮನ!
ಬೆಂಗಳೂರು, ಮಾ. 25 : ಶಿವಮೊಗ್ಗ ಕಾಂಗ್ರೆಸ್ ನಲ್ಲಿ ಉಂಟಾಗಿದ್ದ ಬಿಕ್ಕಟ್ಟು ಶಮನಗೊಂಡಿದೆ. ಬಂಡಾಯದ ಕಹಳೆ ಮೊಳಗಿಸುವ ಸೂಚನೆ ನೀಡಿದ್ದ ಕುಮಾರ್ ಬಂಗಾರಪ್ಪ ಅಸಮಾಧಾನ ತಣ್ಣಗಾಗಿದೆ. ಪಕ್ಷವನ್ನು ಬಿಡುವುದಿಲ್ಲ, ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ ಎಂದು ಅವರು ಘೋಷಿಸಿದ್ದಾರೆ.
ಮಂಗಳವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರ್ ಬಂಗಾರಪ್ಪ. ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ತಾವು ಸ್ಪರ್ಧಿಸುವುದಿಲ್ಲ ಮತ್ತು ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ ಎಂದು ಘೋಷಿಸಿದರು. ಕುಮಾರ್ ಬಂಗಾರಪ್ಪ ಮನವೊಲಿಸಲು ನಾಯಕರು ನಡೆಸಿದ ಪ್ರಯತ್ನ ಫಲ ನೀಡಿದ್ದು, ಅವರು ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ. [ಬಂಡಾಯದ ಕಹಳೆ ಊದಿದ ಕು.ಬಂಗಾರಪ್ಪ]

ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡು ಪಕ್ಷ ತೊರೆಯಬಾರದು ಎಂದು ಹಿರಿಯ ನಾಯಕರು ಮನವಿ ಮಾಡಿದ್ದಾರೆ. ಆದ್ದರಿಂದ, ಪಕ್ಷ ತೊರೆದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಿಲ್ಲ. ಕ್ಷೇತ್ರದ ಅಭ್ಯರ್ಥಿ ಮಂಜುನಾಥ್ ಭಂಡಾರಿ ಅವರಿಗೆ ಚುನಾವಣೆಯಲ್ಲಿ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]
ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಕುರಿತು ಸ್ನೇಹಿತರು, ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಅವರು ಇದು ಸೂಕ್ತ ನಿರ್ಧಾರವಲ್ಲ, ಪಕ್ಷಕ್ಕಾಗಿ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಹೇಳಿದ್ದಾರೆ. ಆದ್ದರಿಂದ ಕ್ಷೇತ್ರದ ಅಭ್ಯರ್ಥಿ ಮಂಜುನಾಥ್ ಭಂಡಾರಿ ಅವರಿಗೆ ಚುನಾವಣೆಯಲ್ಲಿ ಬೆಂಬಲ ನೀಡುತ್ತೇನೆ ಮತ್ತು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಕುಮಾರ್ ಬಂಗಾರಪ್ಪ ಹೇಳಿದರು. [ಭಂಡಾರಿ ಪ್ರಚಾರದ ಚಿತ್ರಗಳು]
ಜೆಡಿಎಸ್ ಮತ್ತು ಬಿಜೆಪಿ ಗೆಲುವಿಗೆ ಕಡಿವಾಣ ಹಾಕುವ ಅನಿವಾರ್ಯತೆಯನ್ನು ಕಾಂಗ್ರೆಸ್ ನಾಯಕರು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶ್ರಮಿಸುವುದಾಗಿ ಕುಮಾರ್ ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ತಾವು ಕಾಂಗ್ರೆಸ್ ತೊರೆಯುವ ನಿರ್ಧಾರ ಕೈಗೊಂಡರೆ ಅದು ಬಿಜೆಪಿ ಅಥವಾ ಜೆಡಿಎಸ್ ಗೆ ಲಾಭ ಮಾಡಿಕೊಡುವ ಸಾಧ್ಯತೆಗಳಿವೆ ಎಂದರು.
ಡಿಕೆಶಿ ಸಂಧಾನ ಯಶಸ್ವಿ : ಬಂಡಾಯದ ಕಹಳೆ ಊದಿದ್ದ ಕುಮಾರ್ ಬಂಗಾರಪ್ಪ ಅವರ ಜೊತೆ ಪಕ್ಷದ ಹಿರಿಯ ನಾಯಕರಾದ ಡಿಕೆ ಶಿವಕುಮಾರ್ ಮತ್ತು ಜನಾರ್ದನ ಪೂಜಾರಿ ಮಾತುಕತೆ ನಡೆಸಿ ಅವರ ಅಸಮಾಧಾನವನ್ನು ಶಮನಗೊಳಿಸಲು ಯಶಸ್ವಿಯಾಗಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ ಸ್ಥಾನಮಾನದ ಬಗ್ಗೆ ನಂತರದ ದಿನಗಳಲ್ಲಿ ಚರ್ಚೆ ನಡೆಸೋಣ ಎಂದು ನಾಯಕರು ಕುಮಾರ್ ಬಂಗಾರಪ್ಪ ಮನವೊಲಿಸಿದ್ದಾರೆ.
ಇದರಿಂದಾಗಿ ಬಿಜೆಪಿಯ ಬಿಎಸ್ ಯಡಿಯೂರಪ್ಪ, ಜೆಡಿಎಸ್ ಪಕ್ಷದ ಗೀತಾ ಶಿವರಾಜ್ ಕುಮಾರ್, ಕಾಂಗ್ರೆಸ್ ಪಕ್ಷದ ಮಂಜುನಾಥ ಭಂಡಾರಿ ಮತ್ತು ಆಮ್ ಆದ್ಮಿ ಪಕ್ಷದ ಶ್ರೀಧರ ಕಲ್ಲಹಳ್ಳ ಚುನಾವಣಾ ಕಣದಲ್ಲಿ ಉಳಿದಂತಾಗಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಾರ್ಚ್ 26ರ ಬುಧವಾರ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಕುಮಾರ್ ಬಂಗಾರಪ್ಪ ಹೇಳಿದ್ದರು.












Click it and Unblock the Notifications