ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಣ್ಣೀರು ನಿಮ್ಮನ್ನು ಸುಮ್ಮನೆ ಬಿಡಲ್ಲ!
ಹಾನಗಲ್, ಅ. 18: "ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು ಈಗ ಯಾವ ನದಿ, ಯಾವ ಡ್ಯಾಂ, ಯಾವ ಸಮುದ್ರಕ್ಕೆ ಎಸೆದಿದ್ದೀರಿ" ಎಂದು ಬಿಜೆಪಿ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಕಟ್ಟಿ ಕೆಆರ್ಎಸ್ ಡ್ಯಾಂಗೆ ಎಸೆದಿದ್ದಾರೆ ಎಂದು ಹಾನಗಲ್ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ್ ಸೇರಿದಂತೆ ಬಿಜೆಪಿ ಮುಖಂಡರು ಟೀಕೆ ಮಾಡಿದ್ದರು. ಅವರಿಗೆ ಹಾನಗಲ್ನಲ್ಲಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಮರು ಪ್ರಶ್ನೆ ಮಾಡಿದ್ದಾರೆ.
"ದಕ್ಷಿಣ ಭಾರತದಲ್ಲಿ ಬಿಜೆಪಿ ಸರಕಾರದ ಹೆಬ್ಬಾಗಿಲು ತೆರೆದಿದ್ದೇ ಯಡಿಯೂರಪ್ಪನವರು ಎಂದು ಹೇಳುತ್ತಿದ್ದ ಬಿಜೆಪಿಯವರು ಅವರನ್ನು ಈಗೇಕೆ ಹೀನಾಯವಾಗಿ ನಡೆಸಿಕೊಂಡರು? ಅವರನ್ಯಾಕೆ ಮೂಲೆಗುಂಪು ಮಾಡಿದರು? ಅವರು ಕಣ್ಣೀರು ಹಾಕಿಕೊಂಡು ಮನೆಗೆ ಹೋಗುವಂತೆ ಮಾಡಿದರು? ಎಂದು ಹಾನಗಲ್ ತಾಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಡಿಕೆಶಿ ಪ್ರಶ್ನಿಸಿದರು.

ಯಡಿಯೂರಪ್ಪ ಕಣ್ಣೀರು ನಿಮ್ಮನ್ನು ಸುಮ್ಮನೆ ಬಿಡಲ್ಲ!
"ಯಡಿಯೂರಪ್ಪ ಅವರ ಕಣ್ಣೀರು ಬಿಜೆಪಿಯವರನ್ನು ಸುಮ್ಮನೆ ಬಿಡುವುದಿಲ್ಲ. ಈ ಸರಕಾರ ಅವರ ಕಣ್ಣೀರಿನಲ್ಲೇ ಕೊಚ್ಚಿಕೊಂಡು ಹೋಗುತ್ತದೆ" ಎಂದು ಶಿವಕುಮಾರ್ ಹೇಳಿದರು.
"ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳು ನಾಡಿಗೆ ಒಂದು ಶಾಪ. ಕರ್ನಾಟಕದವರೇ ಕೇಂದ್ರದಲ್ಲಿ ಕಲ್ಲಿದ್ದಲು ಮಂತ್ರಿ. ಆದರೆ ಇಲ್ಲಿ ಕಲ್ಲಿದ್ದಲ ಕೊರತೆ ಇದೆ. ಕರ್ನಾಟಕದವರೇ ಕೇಂದ್ರದಲ್ಲಿ ಗೊಬ್ಬರದ ಮಂತ್ರಿ. ಆದರೆ ಕರ್ನಾಟಕದಲ್ಲಿ ಗೊಬ್ಬರದ ಕೊರತೆ ಇದೆ. ಜತೆಗೆ ಬೆಲೆಯೂ ಹೆಚ್ಚಳವಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಹೋದ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರು. ಆದರೆ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲಾಗಲಿ, ಆರ್ಥಿಕ ಅನುದಾನವಾಗಲಿ, ನೆರೆ ಪರಿಹಾರವಾಗಲಿ ಬರಲಿಲ್ಲ. ಇದು ನಮ್ಮ ರಾಜ್ಯದ ಹಣೆಬರಹ' ಎಂದರು.

ಬೊಮ್ಮಾಯಿ ಲೇವಡಿ ಮಾಡಿದ ಡಿಕೆಶಿ!
"ಸಿಎಂ ಬಸವರಾಜ ಬೊಮ್ಮಾಯಿ ಅವರು ವೀರಾವೇಶದಿಂದ ಮಾತಾಡಿದ್ದಾರೆ. ಕ್ಷೇತ್ರದಲ್ಲಾಗಿರೋ ಅಭಿವೃದ್ಧಿ ಕೆಲಸ ನೋಡಿ ಎಂದು ಸವಾಲು ಹಾಕಿದ್ದಾರೆ. ನೋಡೋಣ ಎಂದು ಈಗ ನಿಮ್ಮೂರಿಗೆ ಕಾರಿಳಿದು ನಡೆದುಕೊಂಡೇ ಬಂದೆ. ರೋಡ್ ಕಣಿವೆ ಇದ್ದಂತಿದೆ. ಅದಕ್ಕೆ ನೀವೇ ಸಾಕ್ಷಿ. ಇದೇನಾ ಅಭಿವೃದ್ಧಿ ಕೆಲಸ ಅಂದ್ರೆ?"
ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ರೂ, ಹಿಂದಿನ ಸಿಎಂ ಯಡಿಯೂರಪ್ಪನವರು 1800 ಕೋಟಿ ರುಪಾಯಿ ಕೊರೋನಾ ಪ್ಯಾಕೇಜ್ ಪ್ರಕಟಿಸಿದ್ದರು. ನಿಮ್ಮ ಖಾತೆಗೇನಾದರೂ ಪರಿಹಾರದ ಹಣ ಬಂತಾ? ಸತ್ತವರ ಕುಟುಂಬಗಳಿಗೇನಾದರೂ ಪರಿಹಾರ ಬಂತಾ? ರೈತರಿಗೆ ಬೆಳೆ ಹಾನಿ ಹಣ ಬಂತಾ? ಹೆಕ್ಟೇರಿಗೆ 10 ಸಾವಿರ ರೂ ಪರಿಹಾರ ಘೋಷಣೆ ಮಾಡಿದ್ದರು. ಅಂದರೆ ಗುಂಟೆಗೆ 100 ರುಪಾಯಿ. ಇದಕ್ಕೆ ಯಾರಾದರೂ ಆನ್ಲೈನ್ನಲ್ಲಿ ಅರ್ಜಿ ಹಾಕ್ತಾರಾ? ಎಂಜಿನಿಯರಿಂಗ್ ಪದವೀಧರ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಬೇಕು" ಎಂದು ಡಿಕೆಶಿ ಲೇವಡಿ ಮಾಡಿದರು.

ಉದಾಸಿ ಅವರದ್ದು ಬಹಳ ಸಜ್ಜನ ವ್ಯಕ್ತಿತ್ವ
ದೇವರು ಸಿ.ಎಂ. ಉದಾಸಿ ಅವರನ್ನು ಬೇಗನೆ ಕರೆಸಿಕೊಂಡಿದ್ದಾನೆ. ನಾನು ಅವರನ್ನು ತಕ್ಕಮಟ್ಟಿಗೆ ಬಲ್ಲೆ. ಅವರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದೆ. ಬಹಳ ಸಜ್ಜನ ವ್ಯಕ್ತಿತ್ವ ಅವರದು. ಅವರ ಮೇಲೆ ದೂಷಣೆ ಮಾಡಲು ನಾನಿಲ್ಲಿಗೆ ಬಂದಿಲ್ಲ. ಅವರ ವಿರುದ್ಧ ನಮ್ಮ ಶ್ರೀನಿವಾಸ ಮಾನೆ ಅವರು ಸೋತಿದ್ದರೂ ಸಹ ಆಗಾಗ್ಗೆ ಅವರ ಆರೋಗ್ಯ ವಿಚಾರಿಸುತ್ತಿದ್ದೆ.
ಉದಾಸಿ ಅವರೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು. ನಮ್ಮ ಉದಾಸಿಯವರ ಮನಸಿಗೆ ಇದ್ದ ನೋವೇನೆಂದರೆ, ಅಷ್ಟು ಹಿರಿಯ ನಾಯಕರಾದರೂ ತಮ್ಮನ್ನು ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಂತ್ರಿ ಮಾಡಲಿಲ್ಲವಲ್ಲಾ ಅಂತಾ. ಅವರನ್ನೇಕೆ ಮಂತ್ರಿ ಮಾಡಲಿಲ್ಲ ಎಂದು ಬೊಮ್ಮಾಯಿ ಅವರನ್ನು ಕೇಳಲು ಬಯಸುತ್ತೇನೆ. ಇದೇ ಕೊರಗಿನಲ್ಲಿ ಉದಾಸಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ ಎಂಬುದು ನನ್ನ ಭಾವನೆ. ವ್ಯಕ್ತಿ ಸತ್ತಮೇಲೆ ಅವರನ್ನು ಹೊಗಳುವುದಲ್ಲ, ಆತ ಬದುಕಿದ್ದಾಗ ನೀವು ಅವರನ್ನು ಯಾವ ರೀತಿ ಗೌರವಿಸಿದಿರಿ ಎಂಬುದು ಮುಖ್ಯ ಎಂದು ಬಿಜೆಪಿ ನಾಯಕರನ್ನು ಡಿಕೆಶಿ ತರಾಟೆಗೆ ತೆಗೆದುಕೊಂಡರು.
Recommended Video

ಯಾರಿಗೆ ಬಂತು ಅಚ್ಛೇ ದಿನ?
ಬಿಜೆಪಿ ಸರ್ಕಾರ ಏನಾದರೂ ಸಾಧನೆ ಮಾಡಿದೆಯಾ? ಬಡವರಿಗೆ, ರೈತರಿಗೆ ಸಹಾಯ ಮಾಡಲು ಆಗಲಿಲ್ಲ. ಉದ್ಯೋಗ ನೀಡಲಿಲ್ಲ. ಆದರೂ ಅಚ್ಛೇದಿನ್ ಬಂತು ಅಂತಾರೆ? ಯಾರಿಗೆ ಬಂತು ಅಚ್ಛೇ ದಿನ? ನಿಮಗೇನಾದರೂ ಅಚ್ಛೇದಿನ ಬಂತಾ? ನಿಮ್ಮ ಖಾತೆಗೆ ಹಣ ಬಂತಾ? ಖಾತೆಗೆ ಹಣ ಹಾಕುತ್ತೇವೆ ಎಂದರಲ್ಲ ಎಲ್ಲಿ ಅಂತಾ ಬೊಮ್ಮಾಯಿ ಅವರನ್ನು ಕೇಳಬೇಕು. ಈ ರೀತಿ ಕೇಳಲು ಇದೇ 30ರಂದು ನಿಮಗೆ ಅವಕಾಶ, ಅಧಿಕಾರ ಕೊಟ್ಟಿದ್ದಾರೆ. ಈ ಚುನಾವಣೆಯನ್ನು ಇಡೀ ರಾಷ್ಟ್ರ ನೋಡುತ್ತಿದೆ. ಇತ್ತೀಚೆಗೆ ನಡೆದ ಮಸ್ಕಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 31 ಸಾವಿರ ಮತಗಳ ಅಂತರದಲ್ಲಿ ಗೆದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.












Click it and Unblock the Notifications