ಕರ್ನಾಟಕ ಅಸೆಂಬ್ಲಿ ಚುನಾವಣೆ: ನಾಗಾ ಸಾಧುಗಳು ನುಡಿದ ಇನ್ನೊಂದು ಭವಿಷ್ಯ!
Recommended Video
ಸಂಕ್ರಾಂತಿ, ಯುಗಾದಿ, ದಸರಾಗೆ.. ಹೀಗೆ.. ಕೋಡಿಮಠದ ಶ್ರೀಗಳು ಅವಾಗಾವಾಗ ಭವಿಷ್ಯ ನುಡಿಯುವ ಪದ್ದತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ಇವರ ಭವಿಷ್ಯದ ಬಗ್ಗೆ ಭಾರೀ ಚರ್ಚೆ ನಡೆಯುವುದನ್ನೂ ಕೇಳಿದ್ದೇವೆ.
ಆದರೆ, ಇತ್ತೀಚಿನ ದಿನಗಳಲ್ಲಿ ಅಪರೂಪ ಎನ್ನುವಂತೆ ಶಿವನ ಆರಾಧಕರಾಗಿರುವ ನಾಗಸಾಧುಗಳು ಮುಂದಿನ ಆಗುಹೋಗುಗಳ ಬಗ್ಗೆ ಭವಿಷ್ಯ ನುಡಿಯಲಾರಂಭಿಸಿರುವುದು ವಿಶೇಷ. ಕಳೆದ ಒಂದು ತಿಂಗಳಲ್ಲಿ ನಾಗಸಾಧುಗಳು, ಕರ್ನಾಟಕ ಮುಂದಿನ ಚುನಾವಣಾ ಫಲಿತಾಂಶದ ಬಗ್ಗೆ ಮೂರು ಭವಿಷ್ಯ ನುಡಿದಿದ್ದಾರೆ.
ಕರ್ನಾಟಕ ಚುನಾವಣೆ: ಕೇದಾರನಾಥ್ ನಿಂದ ನಾಗಸಾಧು ನುಡಿದ ಭವಿಷ್ಯ
ಒಂದು, ಯಡಿಯೂರಪ್ಪನವರ ಮನೆಗೆ ಭೇಟಿ ನೀಡಿ ಭವಿಷ್ಯ ನುಡಿದಿದ್ದು, ಇನ್ನೊಂದು ಹರಿದ್ವಾರದಿಂದ ಎಚ್ ಡಿ ಕುಮಾರಸ್ವಾಮಿಯ ಆಪ್ತರಿಗೆ ದೂರವಾಣಿ ಮೂಲಕ ಭವಿಷ್ಯ ನುಡಿದಿದ್ದು. ಆದರೆ, ನಾಗಸಾಧುಗಳು ನುಡಿದ ಈ ಎರಡು ಭವಿಷ್ಯ, ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.
ಈಗ ಚಿತ್ರದುರ್ಗ ಜಿಲ್ಲೆ, ಭರಮಸಾಗರದ ಮನೆಯೊಂದಕ್ಕೆ ಅಕಸ್ಮಾತ್ ಭೇಟಿ ನೀಡಿರುವ ನಾಗಸಾಧುಗಳು ಇನ್ನೊಂದು ಭವಿಷ್ಯವನ್ನು ನುಡಿದಿದ್ದಾರೆ. ಈ ಎಲ್ಲಾ ಭವಿಷ್ಯಗಳಲ್ಲಿ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು, ಅಥವಾ ಇದೆಲ್ಲಾ 'ಬುಲ್ಶಿಟ್' ಅನ್ನಬೇಕೋ ಅದು ಓದುಗರ ವಿವೇಚನೆಗೆ ಬಿಟ್ಟ ವಿಚಾರ.
ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲು ದೇಶ ಸಂಚರಿಸುವ ನಾಗಸಾಧುಗಳ ತಂಡವೊಂದು, ಹರಿದ್ವಾರದಿಂದ ರಾಮೇಶ್ವರಕ್ಕೆ ತೆರಳುವ ವೇಳೆ, ಭರಮಸಾಗರದ ಬಿಜೆಪಿ ಕಾರ್ಯಕರ್ತರ ಮನೆಯೊಂದಕ್ಕೆ ಅಕಸ್ಮತ್ತಾಗಿ ಭೇಟಿ ನೀಡಿ, ನೀರು ಮತ್ತು ಹಾಲು ಸೇವಿಸಿ ತೆರಳಿದ್ದಾರೆ. ಮುಂದೆ ಓದಿ..
ಯಡಿಯೂರಪ್ಪನವರ ನಿವಾಸಕ್ಕೆ ಭೇಟಿ ನೀಡಿದ್ದ 18 ನಾಗಸಾಧುಗಳು
ಅಕ್ಟೋಬರ್ ತಿಂಗಳ ಆದಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ನಿವಾಸಕ್ಕೆ ಭೇಟಿ ನೀಡಿದ್ದ ಹದಿನೆಂಟು ನಾಗಸಾಧುಗಳು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನು ಆಶೀರ್ವದಿಸಿ ಹೋಗಿದ್ದರು. ಮತ್ತೆ ನೀವು ಮುಖ್ಯಮಂತ್ರಿಯಾಗುತ್ತೀರಿ, ಬಿಜೆಪಿಗೆ ಕರ್ನಾಟಕದಲ್ಲಿ ಉಜ್ವಲ ಭವಿಷ್ಯಯಿದೆ ಎಂದು ಹೇಳಿದ್ದರು.
ಕೈ ಮುಷ್ಟಿಕಟ್ಟಿ, ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು
ಇದಾದ ನಂತರ, ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿನ ಖಾಸಗಿ ಕಾರ್ಯಕ್ರಮವೊಂದಕ್ಕೆ ಕೇದಾರನಾಥ್ ನಿಂದ ಆಗಮಿಸಿದ್ದ ನಾಗಸಾಧುಗಳನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ಜೊತೆಯಾಗಿ ಹೋಗಿ ಭೇಟಿ ಮಾಡಿ, ಆಶೀರ್ವಾದ ಪಡೆದುಕೊಂಡಿದ್ದರು. ಕೈ ಮುಷ್ಟಿಕಟ್ಟಿ, ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು ಎಂದು ಒಗಟಿನ ರೂಪದಲ್ಲಿ ನಾಗಸಾಧು ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ದೂರವಾಣಿ ಮೂಲಕ ಭವಿಷ್ಯ ನುಡಿದಿದ್ದರು.
ಬಿಜೆಪಿ ಕಾರ್ಯಕರ್ತ ಕಿರಣ್ ಎನ್ನುವವರ ಮನೆಗೆ ಅಚಾನಕ್ ಭೇಟಿ
ಎರಡು ದಿನದ ಹಿಂದೆ ಚಿತ್ರದುರ್ಗ ಜಿಲ್ಲೆ, ಭರಮಸಾಗರದ ಬಿಜೆಪಿ ಕಾರ್ಯಕರ್ತ ಕಿರಣ್ ಎನ್ನುವವರ ಮನೆಗೆ ಅಚಾನಕ್ ಆಗಿ ನಾಲ್ಕು ಜನ ನಾಗಸಾಧುಗಳು ಆಗಮಿಸಿದ್ದರು. ದೇಶ ಸಂಚಾರ ಮಾಡುತ್ತಾ ಈ ಸಾಧುಗಳು ಹರಿದ್ವಾರದಿಂದ ರಾಮೇಶ್ವರಕ್ಕೆ ತೆರಳುವ ಮಾರ್ಗಮಧ್ಯೆ ಕಿರಣ್ ಅನ್ನುವವರ ಮನೆಗೆ ಬಂದಿದ್ದಾರೆ.
2018ರ ಚುನಾವಣೆಯಲ್ಲಿ ಬಿಜೆಪಿ ನಿಚ್ಚಳ ಬಹುಮತ
2018ರ ಚುನಾವಣೆಯಲ್ಲಿ ಬಿಜೆಪಿ ನಿಚ್ಚಳ ಬಹುಮತಗಳಿಸಲಿದೆ. ಹಿಂದುತ್ವದ ಅಲೆಯುಳ್ಳ ಪಕ್ಷ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಲಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದು ಖಚಿತ ಎನ್ನುವ ಭವಿಷ್ಯವನ್ನು ಈ ಸಾಧುಗಳು ನುಡಿದಿದ್ದಾರೆ.
ನೀರು, ಹಾಲು ಸೇವಿಸಿ ಅಲ್ಲಿಂದ ರಾಮೇಶ್ವರದ ಕಡೆಗೆ ಪ್ರಯಾಣ
ಆಹ್ವಾನವಿಲ್ಲದೇ ಮನೆಗೆ ಆಗಮಿಸಿದ ಸಾಧುಗಳನ್ನು ಕಂಡು ಸಂತೋಷಗೊಂಡ ಬಿಜೆಪಿ ಕಾರ್ಯಕರ್ತ, ಭಕ್ತಿಯಿಂದ ಅವರನ್ನು ಗೌರವಿಸಿದ್ದಾರೆ. ಮನೆಯಲ್ಲಿ ಸ್ವಲ್ಪಹೊತ್ತು ಮಾತ್ರ ಇದ್ದ ಸಾಧುಗಳು ನೀರು, ಹಾಲು ಸೇವಿಸಿ ಅಲ್ಲಿಂದ ರಾಮೇಶ್ವರದ ಕಡೆಗೆ ಪ್ರಯಾಣಿಸಿದ್ದಾರೆ.