32 ವರ್ಷ ನೀವು ಕೊಟ್ಟ ಫೀ ವಾಪಸ್ ಮಾಡ್ತೀನಿ: ನಾರಿಮನ್
ನವದೆಹಲಿ, ಅಕ್ಟೋಬರ್ 6: ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣವನ್ನು ಸುಪ್ರೀಂ ಕೋರ್ಟ್ ಕಡಿತಗೊಳಿಸಿದ್ದರಿಂದ ಕರ್ನಾಟಕ ಸಂತುಷ್ಟವಾಗಿದೆ. ಹೆಚ್ಚಿನ ನೀರನ್ನು ಹರಿಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಮನದಟ್ಟು ಮಾಡಿಸುವಲ್ಲಿ ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ಅವರು ಯಶಸ್ವಿಯೂ ಆದರು.
ಆದರೆ, ನಾರಿಮನ್ ರನ್ನು ಹಿಂದಿನಿಂದಲೂ ನೋಡುತ್ತಾ ಬಂದಿರುವವರು ಹೇಳುವ ಪ್ರಕಾರ, ಕೊನೆ ದಿನದ ವಿಚಾರಣೆ ವೇಳೆ ಅವರು ಕೋಪಗೊಂಡಿದ್ದ ಪರಿಯನ್ನು ಹಿಂದೆಂದೂ ಕಂಡಿರಲಿಲ್ಲವಂತೆ. ನೀರಿನ ಬಿಡುಗಡೆ ಪ್ರಮಾಣ ನಿರ್ಧರಿಸುವುದಕ್ಕೆ ಲೆಕ್ಕಾಚಾರವಷ್ಟೇ ಸಾಕಾಗುವುದಿಲ್ಲ. ವಾಸ್ತವವನ್ನು ತಿಳಿದುಕೊಳ್ಳಿ ಎಂದು ಕೋಪದಿಂದ ನಾರಿಮನ್ ಕೋರ್ಟ್ ನಲ್ಲಿ ಹೇಳಿದ್ದರು.[ಮೈಲಾರ್ಡ್ ನನ್ನನ್ನು ಮುಜುಗರಕ್ಕೀಡು ಮಾಡಬೇಡಿ : ನಾರಿಮನ್]
ಇದಕ್ಕೂ ಮುನ್ನ ಕರ್ನಾಟಕದ ಪರವಾಗಿ ವಾದ ಮಾಡುವಂತೆ ನಾರಿಮನ್ ರನ್ನು ಒಪ್ಪಿಸುವುದರೊಳಗೆ ಸಾಕುಸಾಕಾಗಿತ್ತು. ಸುಪ್ರೀಂ ಕೋರ್ಟ್ ಆದೇಶ ಹೊರಬಂದ ನಂತರ ಜನಪ್ರತಿನಿಧಿಗಳು, ರಾಜಕಾರಣಿಗಳು ನಾರಿಮನ್ ಬಗ್ಗೆ ಮಾತನಾಡಿದ ರೀತಿಗೆ ಅವರಿಗೆ ವಿಪರೀತ ಬೇಸರವಾಗಿತ್ತು.

ಒಂದು ವೇಳೆ ನಾರಿಮನ್ ವಾದಿಸಲು ಸಾಧ್ಯವೇ ಇಲ್ಲ ಎಂದು ಪಟ್ಟು ಹಿಡಿದರೆ ಯಾವುದಕ್ಕೂ ಇರಲಿ ಎಂದು ಮತ್ತೊಬ್ಬ ವಕೀಲರನ್ನು ಸಂಪರ್ಕಿಸಿತ್ತು. ವಿಧಾನಸಭೆ ವಿಶೇಷ ಅಧಿವೇಶನದ ವೇಳೆ ಶಾಸಕರು ಆಡಿದ ಮಾತುಗಳು ನಾರಿಮನ್ ರನ್ನು ತೀವ್ರವಾಗಿ ಕೆರಳಿಸಿತ್ತು. ಕರ್ನಾಟಕದ ಕಾನೂನು ತಜ್ಞರ ತಂಡ ಅವರನ್ನು ಭೇಟಿ ಮಾಡಿದಾಗ ಅದನ್ನು ಹೇಳಿಕೊಂಡಿದ್ದರು.[ಫಾಲಿ ನಾರಿಮನ್ ಬದಲಿಗೆ ಕಪಿಲ್ ಸಿಬಾಲ್ ರಿಂದ ವಾದ!]
ಅವರಿಗೆ ನನ್ನ ಮನೆ ಗೇಟ್ ಒಳಗೆ ಕೂಡ ಬರೋದು ಬೇಡ ಅಂತ ಹೇಳಿ ಎಂದಿದ್ದರು ನಾರಿಮನ್. ಕೊನೆಗೆ ಹಿರಿಯ ವಕೀಲರನ್ನು ಸಮಾಧಾನಪಡಿಸುವ ಜವಾಬ್ದಾರಿ ನೀರಾವರಿ ಸಚಿವ ಎಂ.ಬಿ.ಪಾಟೀಲರ ಹೆಗಲಿಗೆ ಬಿತ್ತು. ದೆಹಲಿಗೆ ದೌಡಾಯಿಸಿದ ಪಾಟೀಲರಿಗೆ ಗರಂ ಆಗಿದ್ದ ನಾರಿಮನ್ ರಿಂದ ಮತ್ತೆ ಅದೇ ರೀತಿ ಉತ್ತರ ಸಿಕ್ಕಿತು.
'ನಿಮಗೆ ನನ್ನ ಮನೆ ಬಾಗಿಲು ಮುಚ್ಚಾಗಿದೆ. ಬೇಕಾದರೆ ಒಂದು ಕಪ್ ಟೀ ಕುಡಿಯೋಕೆ ಬನ್ನಿ. ವಾದ ಮಾಡುವಂತೆ ಮಾತ್ರ ಕೇಳಬೇಡಿ. ಒಳ್ಳೆ ವಕೀಲರನ್ನು ಹುಡುಕಿಕೊಳ್ಳಿ. ನಾನು ಸಾಮಾನ್ಯವಾಗಿ ಪಡೆಯುವುದಕ್ಕಿಂತ ಮೂರನೇ ಒಂದು ಭಾಗದಷ್ಟು ಕೋರ್ಟ್ ಫೀ ತೆಗೆದುಕೊಂಡಿದ್ದೀನಿ. ಕಳೆದ ಮೂವತ್ತೆರಡು ವರ್ಷದಲ್ಲಿ ನಿವೇನೋ ಫೀ ಕೊಟ್ಟಿದ್ದೀರೋ ಎಲ್ಲ ವಾಪಸ್ ಕೊಟ್ಬಿಡ್ತೀನಿ. ನನ್ನ ಗೌರವ ಬಹಳ ಮುಖ್ಯ' ಎಂದು ಕಿಡಿಕಿಡಿಯಾಗಿದ್ದಾರೆ.['ಕಾನೂನು ತಂತ್ರಗಾರಿಕೆಯಲ್ಲಿ ದಾರಿ ತಪ್ಪಿತು ರಾಜ್ಯ ಸರ್ಕಾರ']
ಆಗ ಕ್ಷಮೆ ಕೇಳಿದ ಸಚಿವ ಪಾಟೀಲ್, ನಾವು ಯಾವ ವಕೀಲರನ್ನಾದರೂ ತೆಗೆದುಹಾಕ್ತೀವಿ. ಅದರೆ ನಾರಿಮನ್ ರನ್ನಲ್ಲ. ನೀವಿಲ್ಲದೆ ಇದರಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದಿದ್ದಾರೆ.












Click it and Unblock the Notifications