ಸಾಗರ ಕ್ಷೇತ್ರದ ಟಿಕೆಟ್ : ಮೌನ ಮುರಿದ ಹರತಾಳು ಹಾಲಪ್ಪ!
ಶಿವಮೊಗ್ಗ, ಮಾರ್ಚ್ 09 : 'ಟಿಕೆಟ್ ಯಾರಿಗೆ ನೀಡಬೇಕು? ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ. ಆದರೆ, ನನ್ನ ಬಗ್ಗೆ ರಾಜ್ಯಾಧ್ಯಕ್ಷರು ಒಲವು ತೋರಿದ್ದಾರೆ' ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಹರತಾಳು ಹಾಲಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹರತಾಳು ಹಾಲಪ್ಪ, ಸಾಗರ ಕ್ಷೇತ್ರದ ಟಿಕೆಟ್ ಹಂಚಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು. 'ಸಾಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧಿಸಬೇಕು? ಎಂದು ಹೈ ಕಮಾಂಡ್ ನಿರ್ಧಾರ ಮಾಡಲಿದೆ' ಎಂದರು.
ಸಾಗರ, ಸೊರಬ ಟಿಕೆಟ್ ಗೊಂದಲಕ್ಕೆ ತೆರೆ ಎಳೆದ ಯಡಿಯೂರಪ್ಪ!
'ನನ್ನ ಮತ್ತು ಬೇಳೂರು ನಡುವೆ ಸಂಬಂಧ ಯಾವಾಗ ಹಳಸಿತ್ತು?, ಯಾವಾಗ ಚೆನ್ನಾಗಿತ್ತು?' ಎಂದು ಪ್ರಶ್ನಿಸಿದ ಹಾಲಪ್ಪ ಅವರು, ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು.
'ನಾನು, ಬೇಳೂರು ಗೋಪಾಲಕೃಷ್ಣ, ಕುಮಾರ್ ಬಂಗಾರಪ್ಪ, ಆರಗ ಜ್ಞಾನೇಂದ್ರ ಅವರು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ' ಎಂದು ಹಾಲಪ್ಪ ಹೇಳಿದರು.
ಶಿವಮೊಗ್ಗ : ಮಾಜಿ ಶಾಸಕರ ಮುಖಾಮುಖಿ, ಮಾತಿಲ್ಲ..ನಗುವಿಲ್ಲ!
'ಸಾಗರ ಕ್ಷೇತ್ರದಲ್ಲಿ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಅಧಿಕೃತ ಘೋಷಣೆ ಅಷ್ಟೆ ಬಾಕಿ ಉಳಿದಿದೆ' ಎಂದು ಹತರಾಳು ಹಾಲಪ್ಪ ತಿಳಿಸಿದರು.
ಕೆಲವು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಮಾತನಾಡಿದ್ದ ಯಡಿಯೂರಪ್ಪ, 'ಸಾಗರದಿಂದ ಸ್ಪರ್ಧಿಸುವಂತೆ ಹರತಾಳು ಹಾಲಪ್ಪ ಅವರಿಗೆ ಸೂಚನೆ ನೀಡಿರುವುದು ಹೌದು. ಬೇಳೂರು ಗೋಪಾಲಕೃಷ್ಣ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇಬ್ಬರನ್ನು ಕರೆದು ಮಾತನಾಡುವೆ. ಬೇಳೂರು ಅವರಿಗೆ ಪಕ್ಷದಲ್ಲಿ ಬೇರೆ ಸ್ಥಾನಮಾನ ನೀಡಲಾಗುತ್ತದೆ' ಎಂದು ಹೇಳಿದ್ದರು.