ಲೋಡ್ ಶೆಡ್ಡಿಂಗ್ : ವರ್ಷಾರಂಭದಲ್ಲಿ ಸರಕಾರದ ಮಹತ್ವದ ತೀರ್ಮಾನ
ಬೆಂಗಳೂರು ಜ 2: ಹೊಸ ವರ್ಷದ ಮೊದಲ ದಿನವೇ ಸರಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ರಾಜ್ಯದ ಎಲ್ಲಾ ನಗರ ಪ್ರದೇಶಗಳಲ್ಲಿ ಜಾರಿಯಲ್ಲಿದ್ದ ಲೋಡ್ ಶೆಡ್ಡಿಂಗ್ ರದ್ದು ಮಾಡಲು ಸರಕಾರ ನಿರ್ಧರಿಸಿದೆ.
ಅಲ್ಲದೇ, ರೈತರ ಪಂಪ್ ಸೆಟ್ ಗಳಿಗೆ ದಿನ ನಿತ್ಯ ಆರರಿಂದ ಏಳು ಗಂಟೆಗಳ ತ್ರಿಫೇಸ್ ವಿದ್ಯುತ್ ಪೂರೈಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಇಂಧನ ಸಚಿವ ಡಿ ಕೆ ಶಿವಕುಮಾರ್ ಶುಕ್ರವಾರ (ಜ 1) ಹೇಳಿದ್ದಾರೆ. (ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 50 ರೂ ಹೆಚ್ಚಳ)
ಇದು ರಾಜ್ಯದ ರೈತರಿಗೆ ಹೊಸ ವರ್ಷದ ಕೊಡುಗೆ, ಇನ್ನು ಮುಂದೆ ರಾಜ್ಯದ ರೈತರು ವಿದ್ಯುತ್ ಸಮಸ್ಯೆಯ ಬಗ್ಗೆ ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಡಿ ಕೆ ಶಿವಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಈ ಹಿಂದೆ ಬೇಸಿಗೆಯಲ್ಲಿ ವಿದ್ಯುತ್ ಅವಶ್ಯಕತೆ ಹೆಚ್ಚಿದ್ದರಿಂದ ವಿದ್ಯುತ್ ಉತ್ಪಾದಿಸದೆ ನೀರನ್ನು ಡ್ಯಾಂಗಳಲ್ಲಿ ಶೇಖರಿಸಿಕೊಳ್ಳಲಾಗುತ್ತಿತ್ತು.
ರಾಜ್ಯದಲ್ಲಿ ದಿನವೊಂದಕ್ಕೆ 9800 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿದ್ದು, 8400 ಮೆ.ವ್ಯಾ ಲಭ್ಯವಿದ್ದಿದ್ದರಿಂದ 1400 ಮೆ.ವ್ಯಾಟ್ ಕೊರತೆ ಉಂಟಾಗಿತ್ತು. ಹೀಗಾಗಿ, ರಾಜ್ಯದಲ್ಲಿ ಬೇರೆ ದಾರಿಯಿಲ್ಲದೇ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿತ್ತು.
ರಾಜ್ಯಕ್ಕೆ ಜನವರಿ ಒಂದರಿಂದ ದಾಮೋದರ ಕಣಿವೆಯಿಂದ 168 ಮೆ.ವ್ಯಾಟ್ ದೊರೆಯುತ್ತಿದೆ. ಜನವರಿ ಅಂತ್ಯದೊಳಗೆ ಬಳ್ಳಾರಿಯ ಮೂರು ಥರ್ಮಲ್ ಘಟಕಗಳಿಂದ, ತಲಾ ಒಂದು ಘಟಕದಿಂದ 700 ಮೆ.ವ್ಯಾ ವಿದ್ಯುತ್ ಗ್ರಿಡ್ಗೆ ಸೇರ್ಪಡೆಗೊಳ್ಳಲಿದೆ.
ಹಾಗೂ ತಮಿಳುನಾಡಿನ ಕೂಡನಕುಳಂನಿಂದ ಜನವರಿ ಹದಿನೈದರಿಂದ 221 ಮೆ.ವ್ಯಾಟ್ ರಾಜ್ಯಕ್ಕೆ ಪೂರೈಕೆಯಾಗಲಿದೆ. ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಹುತೇಕ ಜಲಾಶಯಗಳು ಶೇ.50ರಷ್ಟು ಮಾತ್ರ ಭರ್ತಿಯಾಗಿದ್ದವು. (ಜನವರಿ 2016ರಿಂದ ಲೋಡ್ ಶೆಡ್ಡಿಂಗ್ ಇಲ್ಲ)
ಇನ್ನು ಮುಂದೆ ಜನವರಿ 1ರಿಂದ ದಿನ ನಿತ್ಯ1000 ಮೆ.ವ್ಯಾಟ್ ವಿದ್ಯುತ್ ಹೆಚ್ಚುವರಿಯಾಗಿ ಉತ್ಪಾದನೆ ಮಾಡಲಾಗುತ್ತದೆ.
ರಾಜ್ಯದ ರೈತರ ಪಂಪ್ ಸೆಟ್ ಗಳಿಗೆ 6ರಿಂದ 7 ಗಂಟೆಗಳ ವಿದ್ಯುತ್ ಪೂರೈಸಲಾಗುವುದು ಮತ್ತು ನಗರ ವ್ಯಾಪ್ತಿಯಲ್ಲಿ ಲೋಡ್ ಶೆಡ್ಡಿಂಗ್ ರದ್ದು ಮಾಡಲು ಆದೇಶ ನೀಡಲಾಗಿದೆ ಎಂದು ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.