ಬಳ್ಳಾರಿ: ಜೆಡಿಯು ಅಭ್ಯರ್ಥಿ ಟಪಾಲ್ ಗಣೇಶ್ ಸಂದರ್ಶನ
ಬಳ್ಳಾರಿ ಜಿಲ್ಲೆ, ಬಳ್ಳಾರಿ ಅಂದರೆ ಸಾಕು, ಕಬ್ಬಿಣದ ಅದಿರು ಗಣಿಗಾರಿಕೆ, ಅಕ್ರಮ ಗಣಿಗಾರಿಕೆ, 'ರೆಡ್ಡಿಗಳ ರಿಪಬ್ಲಿಕ್ ಆಫ್ ಬಳ್ಳಾರಿ, ಹಲ್ಲೆಗಳು, ಗಣಿಗಾರಿಕೆಯ ವಂಚನೆಗಳು - ಹೀಗೇ ಲೆಕ್ಕವಿಲ್ಲದಷ್ಟು ಘಟನೆಗಳು ಕಣ್ಣಮುಂದೆ ಸಾಲು ಸಾಲಾಗಿ ರಥೋತ್ಸವದಂತೆ ಸಾಗುತ್ತವೆ.
'ರಿಪಬ್ಲಿಕ್ ಆಫ್ ಬಳ್ಳಾರಿ'ಗೆ ಫುಲ್ಸ್ಟಾಫ್ ಹಾಕಲು ಸಿದ್ಧವಾಗಿ, ಒಮ್ಮೆ ನಡೆದ ಮಾರಣಾಂತಿಕ ಹಲ್ಲೆಯಿಂದ ಪ್ರಾಣಾಪಾಯದಿಂದ ಪಾರಾಗಿ, ಹೋರಾಟದ ಕಿಚ್ಚನ್ನು ಮುಂದುವರೆಸಿಕೊಂಡು ಬಂದಿದ್ದಾರೆ ಟಪಾಲ್ ಗಣೇಶ್.
ಗಾಲಿ ಜನಾರ್ದನರೆಡ್ಡಿ, ಗಾಲಿ ಸೋಮಶೇಖರರೆಡ್ಡಿ, ಬಿ. ಶ್ರೀರಾಮುಲು ಸೇರಿದಂತೆ ಅನೇಕ ಗಣಿ ಉದ್ಯಮಿಗಳ, ಅಕ್ರಮ ಗಣಿ ದಂಧೆಕೋರರ ಸ್ವಪ್ನದಲ್ಲೂ ವಿಲನ್! ಅವರೀಗ, ಸಕ್ರಿಯ ರಾಜಕಾರಣಕ್ಕೆ ಪದಾರ್ಪಣೆ ಮಾಡಿ, ಜೆಡಿ(ಯು) ಅಭ್ಯರ್ಥಿಯಾಗಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.
ಕಳೆದ ಒಂದು ದಶಕದಲ್ಲಿ ಜಿಲ್ಲೆಯಲ್ಲಿ ಜರುಗಿದ ಅನಿಯಂತ್ರಿತ, ಅಕ್ರಮ ಗಣಿಗಾರಿಕೆಯಿಂದ ಕರ್ನಾಟಕ-ಆಂಧ್ರಪ್ರದೇಶದ ಗಡಿಯ ಸಮೀಪ ಇರುವ ತಮ್ಮ ಟಪಾಲ್ ನಾರಾಯಣ (ಟಿಎನ್ಆರ್) ಗಣಿ ಪ್ರದೇಶವನ್ನು ಕಳೆದುಕೊಂಡಿರುವ ಟಪಾಲ್ ಗಣೇಶ್, ಒಂದರ್ಥದಲ್ಲಿ ಛಲಬಿಡದ ತ್ರಿವಿಕ್ರಮನಂತೆ. ಈ ಹಿನ್ನಲೆಯಲ್ಲಿ ಒನ್ ಇಂಡಿಯಾ ಕನ್ನಡದ ಜೊತೆ ಆಡಿದ ಮಾತುಗಳು ಹೀಗಿವೆ...

ಎಲೆಕ್ಷನ್ ಪಾಲಿಟಿಕ್ಸ್ ಬೇಕಿತ್ತೇ?
ಕಳೆದ ಎರಡು ವಿಧಾನಸಭಾ, ಲೋಕಸಭಾ ಚುನಾವಣೆಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜರುಗಿದ ಅಕ್ರಮ ಗಣಿಗಾರಿಕೆಯ ಹಣ ರಾಜ್ಯ, ರಾಷ್ಟ್ರೀಯ ಪಕ್ಷಗಳನ್ನು ಭ್ರಷ್ಟಗೊಳಿಸಿದೆ. ಹೊರ ಪ್ರದೇಶಗಳಲ್ಲಿ ಬಳ್ಳಾರಿ ಅಂದರೆ ಸಾಕು, ಅಕ್ರಮ ಗಣಿಗಾರಿಕೆಯ ಹಣ ಎಂದು ಜನರು ಸಾಮಾನ್ಯರನ್ನೂ ವಕ್ರವಾಗಿ ಕಾಣುತ್ತಾರೆ. ಅಷ್ಟೇ ಅಲ್ಲ, ವಿಭಿನ್ನವಾಗಿ ಕಾಣುತ್ತಾರೆ.
ಅಕ್ರಮ ಗಣಿಗಾರಿಕೆಯ ಹಣ ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡಿ, ಹೊಸ ಸಂವಿಧಾನ ರೂಪುಗೊಳ್ಳುವ ಹಂತ ತಲುಪಿತ್ತು. ಈ ಜಿಲ್ಲೆಯಲ್ಲಿ ಹಣವಿಲ್ಲದೇ, ಭ್ರಷ್ಟಾಚಾರ ರಹಿತವಾಗಿ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ. ಬಳ್ಳಾರಿಗೆ ಅಂಟಿದ ಗಣಿ ಕಳಂಕವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ನನ್ನದೊಂದು ಪ್ರಯತ್ನ. ಹೋರಾಟದ ಹಿನ್ನಲೆಯ ನನಗೆ, ಸೋಲು - ಗೆಲುವುಗಳ ಲೆಕ್ಕಾಚಾರವಿಲ್ಲ. ಗೆಲ್ಲುವ ಆತ್ಮ ವಿಶ್ವಾಸವಿದೆ, ಹಾಗಂತ ಓವರ್ ಕಾನ್ಫಿಡೆನ್ಸ್ ಇಲ್ಲ.

ಸ್ಪರ್ಧೆಗೆ ಶಕ್ತಿ, ಸಂಪನ್ಮೂಲ, ಸಾಮರ್ಥ್ಯಗಳು?
ಜಿ. ಜನಾರ್ದನರೆಡ್ಡಿ, ಸಹೋದರರು ಮತ್ತು ಬಿ. ಶ್ರೀರಾಮುಲು ನಿರ್ದೇಶಕತ್ವದ ಓಬಳಾಪುರ ಮೈನಿಂಗ್ ಕಂಪನಿ, ನಮ್ಮ ಕುಟುಂಬದ ಟಿಎನ್ಆರ್ ಗಣಿ ಪ್ರದೇಶವನ್ನು ಧ್ವಂಸಗೊಳಿಸಿ, ಅಕ್ರಮ ಗಣಿಗಾರಿಕೆ ನಡೆಸಿ, ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಸುಪಾರಿ ಕಿಲ್ಲರ್ ಗಳನ್ನು ನಿಯೋಜಿಸಿತ್ತು. ಬಳ್ಳಾರಿ ಜಿಲ್ಲೆಯ ಗಡಿ ಭಾಗ ಆಂಧ್ರಪ್ರದೇಶಕ್ಕೆ ಒತ್ತುವರಿ ಆಯಿತು. ಈ ಕುರಿತು ನಾನು ಸುಪ್ರೀಂ ಕೋರ್ಟಿನಲ್ಲಿ ಹೋರಾಡಿದೆ.

ಗಾಲಿ ಜೈಲು ಸೇರುವಂತೆ ಮಾಡಿದ ಟಪಾಲ್
ಜಿ. ಜನಾರ್ದನರೆಡ್ಡಿ ಜೈಲು ಸೇರುವಲ್ಲಿ ನನ್ನ ಹೋರಾಟದ ಪಾಲೂ ಇದೆ. ಜನಾರ್ಧನ ರೆಡ್ಡಿ ಅಧಿಕಾರದ ಉತ್ತುಂಗದಲ್ಲಿದ್ದಾಗ ಅವರನ್ನು ತಡೆಯುವುದು ಇರಲಿ, ವಿರೋಧಿಸಲು ರಾಜ್ಯ - ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತಿದ್ದವು. ಆಗ, ಸಾಮಾನ್ಯನಾದ ನಾನು ಕೈಗೊಂಡ ಹೋರಾಟ, ಈಗಲೂ ನಡೆಸುತ್ತಿರುವ ವಿರೋಧಗಳೇ ನನ್ನ ಬಂಡವಾಳ.
ಜನರೇ ನನ್ನ ಶಕ್ತಿ ಮತ್ತು ನನ್ನ ಛಲವೇ ಸಾಮರ್ಥ್ಯ. ಮಾಧ್ಯಮಗಳು, ಜನಸಾಮಾನ್ಯರು ನೀಡುತ್ತಿರುವ ಬೆಂಬಲವೇ ನನಗೆ ಸ್ಫೂರ್ತಿ. ನನ್ನ ಹೋರಾಟಗಳು, ಜನಪ್ರಿಯತೆ, ಶುದ್ಧ ವ್ಯಕ್ತಿಗಳ ಸಂಪರ್ಕ ನನಗಿವೆ.

ಕುರುಡು ಕಾಂಚಾಣದ ಪ್ರಭಾವದಲ್ಲಿ ಮೂಲೆಗುಂಪಾಗುವುದಿಲ್ಲವೇ?
ನನ್ನಲ್ಲಿ ಹಣವಿಲ್ಲ. ನಿಜ. ಹಾಗಂತ ಹೋರಾಟಗಾರರು ಹುಟ್ಟಲೇಬಾರದು, ರಾಜಕೀಯಕ್ಕೆ ಬರಲೇಬಾರದು ಎಂದಿಲ್ಲ. ಶ್ರೀಮಂತರಿಗಷ್ಟೇ ಚುನಾವಣೆ ಮೀಸಲಾಗಿಲ್ಲ. ಕಾರ್ಮಿಕ ಮುಖಂಡ ಜಾರ್ಜ್ ಫರ್ನಾಂಡೀಸ್ ಅವರ ಗೆಲುವು ನಮ್ಮ ಕಣ್ಣಮುಂದಿದೆ.
ನಗೆ ದೊಡ್ಡ ಸಂಖ್ಯೆಯ ಬೆಂಬಲಿಗರೂ ಇಲ್ಲ. ನಾನು ಬೆಂಬಲಿಗರನ್ನು ಕಾಯ್ದಿಟ್ಟುಕೊಳ್ಳುವಷ್ಟು ದೊಡ್ಡ ಲೀಡರ್ರೂ ಅಲ್ಲ. ನನ್ನ ಇತಿ - ಮಿತಿಗಳು ನನಗೆ ಚೆನ್ನಾಗಿಯೇ ತಿಳಿದಿವೆ. ಬಳ್ಳಾರಿ ನಗರದಲ್ಲಿ ಮನೆ ಮನೆಗೆ ತೆರಳಿ ಮತ ಕೋರುವೆ.
ಜನರನ್ನು ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುವೆ. ಬಳ್ಳಾರಿಯ ಇತಿಹಾಸದಲ್ಲಿ ಶಾಸಕರಾಗಿದ್ದವರ ಬಂಡವಾಳವನ್ನು ಹೇಳಿ, ನನ್ನ ಆಯ್ಕೆಯ ಪೂರಕ ಅಂಶಗಳನ್ನು ಮನವರಿಕೆ ಮಾಡಿಕೊಡುವೆ. ಜನರಿಗೆ ಒಂದು ಉತ್ತಮ ಆಯ್ಕೆಗೆ ನನ್ನನ್ನೇ ಬೆಂಬಲಿಸಿ, ಮತ ಹಾಕಿ ಎಂದು ಕೇಳುವೆ. ಸಿಕ್ಕಷ್ಟು ಮತದಾರರು ನನ್ನವರು, ನನ್ನ ಬೆಂಬಲಿಸಿದರು.

ಸಿಎಂ ವಿರುದ್ಧ, ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತೀರಾ?
ಖಂಡಿತವಾಗಿಯೂ. ಚುನಾವಣಾ ಕಣಕ್ಕಿಳಿದ ಮೇಲೆ ಸಿಎಂ, ಬಿಜೆಪಿ ಎಲ್ಲಾ ಪ್ರತಿಸ್ಪರ್ಧಿಗಳೇ. ನನ್ನ ಗೆಲುವಿಗಾಗಿ ಮತ ಕೇಳುವಾಗ, ಪ್ರತಿಪಕ್ಷಗಳ ಅಕ್ರಮ, ಆರೋಪ ಎಲ್ಲವೂ ಸಹಜ.
ಕಳೆದ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕ --ಆಂಧ್ರದ ಗಡಿ ಸಮಸ್ಯೆ ಇತ್ಯರ್ಥಪಡಿಸಲು, ಕೋರ್ಟ್ ಕರ್ನಾಟಕ, ಆಂಧ್ರಪ್ರದೇಶ ರಾಜ್ಯ ಸರ್ಕಾರಗಳಿಗೆ ಗಡಿ ಸಮಸ್ಯೆ ಸಮೀಕ್ಷೆಯನ್ನು ಸರ್ವೇ ಆಫ್ ಇಂಡಿಯಾ ನೇತೃತ್ವದಲ್ಲಿ ಕೈಗೊಂಡು 12 ವಾರಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಆದರೆ, ಎರೆಡೂ ಸರ್ಕಾರಗಳು ಮೌನವಾಗಿವೆ.

ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿ
ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿ, ಅಧಿಕಾರಕ್ಕೆ ಬಂದಿರುವ ಸಿದ್ಧರಾಮಯ್ಯ ಅವರ ಹೋರಾಟಕ್ಕೆ ನನ್ನ ಹೋರಾಟ ಸಂಪನ್ಮೂಲವಾಗಿತ್ತು. ಹೋರಾಟದ ಕಿಚ್ಚನ್ನು ಹಚ್ಚಿತ್ತು. ಆದರೆ, ಸಿದ್ದರಾಮಯ್ಯ ಸಿಎಂ ಆದ ಮೇಲೆ ಗಣಿ ಅಕ್ರಮ, ಗಡಿ ನಿಗದಿ ಎಲ್ಲಾ ಮರತೇಬಿಟ್ಟರು. ಮುಖ್ಯಮಂತ್ರಿಯೇ ರಾಜ್ಯದ ಗಡಿ ನಿಗಧಿಗೆ ಆಸಕ್ತಿ ತೋರಿಸದೇ ಇದ್ದಲ್ಲಿ, ಸಾಮಾನ್ಯರ ಪಾಡೇನು? ಹಾಗೆಂದ ಮಾತ್ರಕ್ಕೆ ನನ್ನ ಹೋರಾಟ ಮುಂದುವರೆಯುತ್ತಲೇ ಇರುತ್ತದೆ.
ನುಡಿದಂತೆ ನಡೆದ ಸರ್ಕಾರ, ಮತ್ತೊಮ್ಮೆ ನಿಮ್ಮ ಆಶೀರ್ವಾದ ಎಂದು ಮತ ಕೇಳುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಗಡಿ ಸಮಸ್ಯೆ ಪರಿಹರಿಸಲು ಇನ್ನೂ 15-20 ದಿನಗಳ ಅವಕಾಶವಿದೆ. ಅಷ್ಟರೊಳಗಾಗಿ ಗಡಿ ಸಮೀಕ್ಷೆಗೆ ಆದೇಶಿಸಿದರೆ ಸೂಕ್ತ. ಇಲ್ಲವಾದಲ್ಲಿ ಸಿಎಂ ಸಿದ್ದರಾಮಯ್ಯ ಸುಳ್ಳು ಭರವಸೆಗಳ ಸರ್ಕಾರ ಎಂದು ಪ್ರಚಾರ ಮಾಡುವೆ.

ಗೆಲುವು ಖಚಿತವೇ?
ಖಂಡಿತಾ ಇಲ್ಲ. ನಾನೊಬ್ಬ ಆಶಾಜೀವಿ. ಸ್ಪರ್ಧಿಸಿದ ಮಾತ್ರಕ್ಕೆ ಗೆಲ್ಲಲೇಬೇಕು, ಗೆಲುವು ನನ್ನದಾಗಲೇಬೇಕು ಎನ್ನುವ ಖಚಿತತೆ ನನಗಿಲ್ಲ. ಆದರೆ, ನಾನೊಬ್ಬ ಹೋರಾಟಗಾರ. ನನ್ನೊಳಗಿನ ಶಕ್ತಿ ಸುಮ್ಮನಿರಲು ಬಿಡುತ್ತಿಲ್ಲ. ಸಮಾಜದ ಜಾಗೃತಿಗಾಗಿ ನನ್ನ ಸ್ಪರ್ಧೆ. ವೈಯಕ್ತಿಕವಾಗಿ ಹೇಳುವುದಾದಲ್ಲಿ ಇದೊಂದು ಪ್ರಯತ್ನ. ಭ್ರಷ್ಟಾಚಾರ ಆಡಳಿತಕ್ಕಾಗಿ ಮತ ನೀಡಿ ಎಂದು ಕೇಳುತ್ತೇನೆ. ಬೆಂಬಲಿಸಿದವರೂ ನನ್ನವರೇ, ಮತ ಹಾಕದವರೂ ನನ್ನವರೇ. ನಾನು ಬಳ್ಳಾರಿಯವ. ಬಳ್ಳಾರಿ ಮತ್ತು ಕರ್ನಾಟಕದ ಹಿತಕ್ಕಾಗಿ ಹೋರಾಟ ಮುಂದುವರೆಸುವೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications