Get Updates
Get notified of breaking news, exclusive insights, and must-see stories!

Middle East War: ಗಲ್ಫ್‌ ದೇಶಗಳಿಗೆ ರಫ್ತು ಸ್ಥಗಿತ; ರಾಜ್ಯದಲ್ಲೇ ಉಳಿದ ತರಕಾರಿ, ಮೊಟ್ಟೆ, ಹಾಲಿನ ಉತ್ಪನ್ನ- ರೈತರು ಕಂಗಾಲು

ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಯುದ್ಧ ಸಾರಿದ ಕೇವಲ ಮೂರು ದಿನಗಳಲ್ಲೇ ಅದರ ನೇರ ಹಾಗೂ ತೀವ್ರವಾದ ಪರಿಣಾಮ ಕರ್ನಾಟಕದ ಹೈನೋದ್ಯಮ, ಕುಕ್ಕುಟೋದ್ಯಮ ಹಾಗೂ ಕೃಷಿ ವಲಯದ ಮೇಲೆ ಬೀರಿದೆ. ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಈ ಯುದ್ಧದಿಂದಾಗಿ ವಿಮಾನಗಳ ಸಂಚಾರ ಹಾಗೂ ಹಡಗು ಮಾರ್ಗಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಇದರ ಪರಿಣಾಮವಾಗಿ, ಗಲ್ಫ್ ರಾಷ್ಟ್ರಗಳಿಗೆ ರಫ್ತಾಗಬೇಕಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಮೊಟ್ಟೆ, ಹಾಲಿನ ಉತ್ಪನ್ನಗಳು ಹಾಗೂ ತಾಜಾ ತರಕಾರಿಗಳು ರಾಜ್ಯದಲ್ಲೇ ಉಳಿಯುವಂತಾಗಿದ್ದು, ವ್ಯಾಪಾರಿಗಳು ಮತ್ತು ರೈತರು ತೀವ್ರ ಕಂಗಾಲಾಗಿದ್ದಾರೆ.

ಸಾಮಾನ್ಯವಾಗಿ ಕರ್ನಾಟಕದಲ್ಲಿ ಬೆಳೆಯಲಾಗುವ ಗುಣಮಟ್ಟದ ತರಕಾರಿ, ಹಣ್ಣು, ಹೂವು, ರೇಷ್ಮೆ, ಮಾಂಸ ಹಾಗೂ ಹಾಲಿನ ಉತ್ಪನ್ನಗಳಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳೇ ಅತಿ ದೊಡ್ಡ ಹಾಗೂ ಪ್ರಮುಖ ಮಾರುಕಟ್ಟೆಯಾಗಿವೆ. ಪ್ರತಿನಿತ್ಯ ದುಬೈ, ಮಸ್ಕತ್, ಕುವೈತ್, ಸೌದಿ ಅರೇಬಿಯಾ, ಕತಾರ್, ಬಹರೇನ್ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳಿಗೆ ಹಡಗು ಹಾಗೂ ಕಾರ್ಗೋ ವಿಮಾನಗಳ ಮೂಲಕ ಈ ಅಗತ್ಯ ವಸ್ತುಗಳನ್ನು ನಿರಂತರವಾಗಿ ರಫ್ತು ಮಾಡಲಾಗುತ್ತಿತ್ತು. ಆದರೆ, ಪ್ರಸ್ತುತ ಯುದ್ಧದ ವಾತಾವರಣದಿಂದಾಗಿ ಈ ಎಲ್ಲಾ ವಾಣಿಜ್ಯ ಸಂಪರ್ಕಗಳು ಕಡಿತಗೊಂಡಿವೆ.

Middle East War

ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು

ದಕ್ಷಿಣ ಭಾರತದ ಕುಕ್ಕುಟೋದ್ಯಮಕ್ಕೂ, ಮಧ್ಯಪ್ರಾಚ್ಯಕ್ಕೂ ದಶಕಗಳ ಅವಿನಾಭಾವ ಸಂಬಂಧವಿದೆ. ದಕ್ಷಿಣ ಭಾರತದಿಂದಲೇ ಬರೋಬ್ಬರಿ 80 ಲಕ್ಷ ಮೊಟ್ಟೆಗಳನ್ನು ತಮಿಳುನಾಡಿನ ನಾಮಕ್ಕಲ್‌ನಲ್ಲಿ ಟೆಸ್ಟಿಂಗ್ ಹಾಗೂ ಪ್ಯಾಕಿಂಗ್ ಮಾಡಿ, ತದನಂತರ ಕೊಚ್ಚಿನ್ ಬಂದರಿನಿಂದ ಹಡಗಿನ ಮೂಲಕ ಗಲ್ಫ್ ರಾಷ್ಟ್ರಗಳಿಗೆ ಸಾಗಿಸಲಾಗುತ್ತಿತ್ತು. ಮೈನಸ್ 4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಈ ಮೊಟ್ಟೆಗಳನ್ನು ಅತ್ಯಂತ ಸುರಕ್ಷಿತವಾಗಿ ಕಳುಹಿಸಿಕೊಡಲಾಗುತ್ತಿತ್ತು. ಈ 80 ಲಕ್ಷ ಮೊಟ್ಟೆಗಳ ಪೈಕಿ ಕರ್ನಾಟಕದ ಬಳ್ಳಾರಿ, ಮೈಸೂರು, ಮಂಡ್ಯ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಪಾಲು 15ರಿಂದ 20 ಲಕ್ಷದಷ್ಟಿರುತ್ತದೆ.

ಆದರೆ, ಫೆಬ್ರವರಿ 27ರಂದು ಕೊನೆಯದಾಗಿ ಮೊಟ್ಟೆಗಳನ್ನು ರಫ್ತು ಮಾಡಲಾಗಿದ್ದು, ಆ ಬಳಿಕ ದುಬೈ ವಿಮಾನ ನಿಲ್ದಾಣದ ಕಾರ್ಯಾಚರಣೆಯಲ್ಲಾದ ವ್ಯತ್ಯಯ ಹಾಗೂ ಹಡಗು ಮಾರ್ಗದ ಸಂಪರ್ಕ ಕಡಿತದಿಂದಾಗಿ ರಫ್ತು ಪ್ರಕ್ರಿಯೆ ಸಂಪೂರ್ಣ ನಿಂತುಹೋಗಿದೆ. "ಒಂದು ವೇಳೆ ಇದೇ ಪರಿಸ್ಥಿತಿ ಇನ್ನೂ ಕೇವಲ ಒಂದು ತಿಂಗಳ ಕಾಲ ಮುಂದುವರಿದರೆ ರಾಜ್ಯದ ಕುಕ್ಕುಟೋದ್ಯಮ ಬರೋಬ್ಬರಿ 200 ಕೋಟಿ ರೂ.ಗಳ ಬೃಹತ್ ನಷ್ಟವನ್ನು ಎದುರಿಸಬೇಕಾಗುತ್ತದೆ," ಎಂದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿಯ (ಎನ್‌ಇಸಿಸಿ) ವಲಯಾಧ್ಯಕ್ಷ ಸತೀಶ್ ಬಾಬು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ರಫ್ತು ನಿಂತಿರುವ ಕಾರಣ, ಇವೆಲ್ಲವೂ ಈಗ ಅನಿವಾರ್ಯವಾಗಿ ಸ್ಥಳೀಯ ಮಾರುಕಟ್ಟೆಗೆ ಹರಿದುಬರುತ್ತಿವೆ. ಸಗಟು ಮಾರುಕಟ್ಟೆಯಲ್ಲಿ 100 ಮೊಟ್ಟೆಗಳಿಗೆ 530 ರೂ. ಇದ್ದ ಬೆಲೆ, ಈಗ ಏಕಾಏಕಿ ಮೈಸೂರು ಮತ್ತು ಬೆಂಗಳೂರು ಮಾರುಕಟ್ಟೆಗಳಲ್ಲಿ 510 ರೂಪಾಯಿಗೆ ಇಳಿಕೆಯಾಗಿದೆ. ಇದರ ಜೊತೆಗೆ, ರಂಜಾನ್ ಮತ್ತು ಈಸ್ಟರ್ ಹಬ್ಬಗಳು ಮುಕ್ತಾಯ ಹಂತದಲ್ಲಿರುವುದರಿಂದ ಹಾಗೂ ಬೇಸಿಗೆ ರಜೆಯ ಕಾರಣದಿಂದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತಗೊಳ್ಳುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಮೊಟ್ಟೆಗೆ ಬೇಡಿಕೆ ಮತ್ತಷ್ಟು ಕುಸಿಯಲಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ರಫ್ತು ಕೂಡ ನಿಂತರೆ ನಾವು ಬದುಕುವುದು ಹೇಗೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ತರಕಾರಿ, ಹೈನೋದ್ಯಮಕ್ಕೂ ಆತಂಕ

ತರಕಾರಿ ಮತ್ತು ಹಣ್ಣುಗಳು ಬೇಗನೆ ಕೆಡುವಂತಹ ಸೂಕ್ಷ್ಮ ಪದಾರ್ಥಗಳಾಗಿವೆ. ಇವುಗಳನ್ನು ರಫ್ತು ಮಾಡದೆ ಹಾಗೆಯೇ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಹೆಚ್ಚು ದಿನಗಳ ಕಾಲ ದಾಸ್ತಾನು ಮಾಡಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಈ ಹೆಚ್ಚುವರಿ ಉತ್ಪನ್ನಗಳನ್ನು ತಕ್ಷಣವೇ ಮಾರಾಟ ಮಾಡಲು ದೊಡ್ಡ ಮಾರುಕಟ್ಟೆ ವ್ಯವಸ್ಥೆಯೂ ಇಲ್ಲ. "ಈ ಯುದ್ಧದ ಪರಿಣಾಮದಿಂದ ಕರ್ನಾಟಕದ ರೈತರಿಗೆ ತೀವ್ರ ಆರ್ಥಿಕ ಒತ್ತಡ ಎದುರಾಗಿದೆ. ಶೀಘ್ರದಲ್ಲೇ ರಫ್ತು ಪ್ರಾರಂಭವಾಗದಿದ್ದರೆ ತರಕಾರಿ ಬೆಳೆಗಾರರು ತೀವ್ರ ಹೊಡೆತ ಅನುಭವಿಸಬೇಕಾಗುತ್ತದೆ. ರಫ್ತು ಸಂಪೂರ್ಣ ನಿಂತಿರುವುದರಿಂದ ಬೆಲೆ ಕುಸಿತದ ಆತಂಕದಲ್ಲಿ ರೈತರಿದ್ದಾರೆ," ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಕೇವಲ ತರಕಾರಿ, ಮೊಟ್ಟೆ ಮಾತ್ರವಲ್ಲದೆ ಹಾಲಿನ ಉತ್ಪನ್ನಗಳಿಗೂ ಈ ಬಿಸಿ ತಟ್ಟಿದೆ. ಆರ್ಗ್ಯಾನಿಕ್ ಮಂಡ್ಯ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಎಸ್. ಸಿ. ಮಧು ಚಂದನ್ ಅವರ ಪ್ರಕಾರ, ಯುದ್ಧದ ಪರಿಣಾಮದಿಂದ ಅವರ ಸಂಸ್ಥೆಯ ಸುಮಾರು 2 ಸಾವಿರ ಬಾಟಲ್ ಸಾವಯವ ತುಪ್ಪ ದುಬೈನಲ್ಲಿಯೇ ಸಿಲುಕಿಕೊಂಡಿದೆ. ವಿಮಾನ ಯಾನ ರದ್ದಾಗಿರುವುದರಿಂದ ದುಬೈನಿಂದ ಅದನ್ನು ಲಂಡನ್‌ಗೆ ಕಳುಹಿಸುವುದು ಹೇಗೆ ಎಂಬ ದೊಡ್ಡ ಚಿಂತೆ ಅವರನ್ನು ಕಾಡುತ್ತಿದೆ. ಒಟ್ಟಾರೆಯಾಗಿ, ಜಾಗತಿಕ ಮಟ್ಟದ ಈ ಯುದ್ಧ ಸಂಘರ್ಷವು ರಾಜ್ಯದ ಮೂಲೆ ಮೂಲೆಯ ಕೃಷಿಕರ ಬದುಕಿನ ಮೇಲೆ ಕರಿನೆರಳು ಬಿದ್ದಿದೆ. ಶೀಘ್ರವಾಗಿ ಸರ್ಕಾರ ಪರ್ಯಾಯ ಮಾರುಕಟ್ಟೆ ಕಲ್ಪಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+