ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ದೇವೇಗೌಡ ಕಣ್ಣೀರು
ಬೆಂಗಳೂರು, ಜೂನ್ 05: ಜೆಡಿಎಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ದೇವೇಗೌಡ ಅವರು ಕಣ್ಣೀರು ಹಾಕಿದರು ಎನ್ನಲಾಗಿದೆ.
ಎಚ್.ವಿಶ್ವನಾಥ್ ಅವರ ರಾಜೀನಾಮೆ ಪತ್ರದ ವಿಚಾರ ಮಾತನಾಡುತ್ತಾ, ನಿಮ್ಮ ರಾಜೀನಾಮೆ ಪತ್ರ ಪ್ರಬುದ್ಧವಾಗಿದೆ, ಎಲ್ಲವೂ ಸತ್ಯವನ್ನೇ ಹೇಳಿದ್ದೀರಿ, ಆದರೆ ಇಂತಹಾ ಕ್ಲಿಷ್ಟಕರ ಸಮಯದಲ್ಲಿ ನಿಮ್ಮಂತವರೇ ಪಕ್ಷ ಬಿಟ್ಟು ಹೋದರೆ ಹೇಗೆ ಎಂದು ದೇವೇಗೌಡ ಅವರು ವಿಶ್ವನಾಥ್ ಅವರಿಗೆ ಹೇಳಿದ್ದಾರೆ.
ಪಕ್ಷ ಸಾಗಿಬಂದ ಮತ್ತು ಅದನ್ನು ಕಟ್ಟಿದ ಕಷ್ಟದ ದಿನಗಳನ್ನು ನೆನೆದು ಈ ಸಮಯದಲ್ಲಿ ಭಾವುಕರಾದ ದೇವೇಗೌಡ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ಆದರೆ ದೇವೇಗೌಡ ಅವರ ಕಣ್ಣೀರಿಗೆ ಕರಗದ ವಿಶ್ವನಾಥ್ ಅವರು, ತಾವು ಈಗಾಗಲೇ ರಾಜೀನಾಮೆ ಪತ್ರ ನೀಡಿದ್ದೇನೆ, ಅದನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಅವರು ವಿಶ್ವನಾಥ್ ಅವರು ರಾಜೀನಾಮೆ ವಾಪಸ್ ಪಡೆಯಬೇಕೆಂದು ಮನವಿ ಮಾಡಿದ್ದಾರೆ.

ಯಾರೂ ಆತಂಕ ಪಡಬೇಕಿಲ್ಲ: ದೇವೇಗೌಡ
ಜೆಡಿಎಸ್ ಪಕ್ಷವನ್ನು ಪುನರ್ ಸಂಘಟಿಸಿ ಗಟ್ಟಿಗೊಳಿಸುತ್ತೇನೆ ಯಾರೂ ಆತಂಕ ಪಡಬೇಕಿಲ್ಲವೆಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪಕ್ಷದ ಶಾಸಕರಿಗೆ, ಸಚಿವರಿಗೆ ಧೈರ್ಯ ತುಂಬಿದ್ದಾರೆ.

'ಪಕ್ಷ ಸೋಲು ಕಂಡಾಗ ನಾನು ಮತ್ತೆ ಸಂಘಟಿಸಿದ್ದೇನೆ'
ನಿನ್ನೆ ಕುಮಾರಸ್ವಾಮಿ ಅವರ ಜೆ.ಪಿ.ನಗರ ನಿವಾಸದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ಸೋಲು ಕಂಡಾಗೆಲ್ಲವೂ ನಾನು ಪಕ್ಷವನ್ನು ಗಟ್ಟಿಗೊಳಿಸಿದ್ದೇನೆ, ಈ ಲೋಕಸಭೆ ಸೋಲಿನಿಂದ ಯಾರೂ ಎದೆಗುಂದಬಾರದು ಎಂದು ದೇವೇಗೌಡರು ಹೇಳಿದರು.

ಮೈತ್ರಿ ಸರ್ಕಾರ ಉಳಿಸಿಕೊಳ್ಳಿ: ದೇವೇಗೌಡ
ಸೋಲಿನಿಂದ ಕಂಗೆಡದೆ ಮೈತ್ರಿ ಸರ್ಕಾರದಲ್ಲಿ ನಂಬಿಕೆ ಇಟ್ಟು, ಸರ್ಕಾರವನ್ನು ಉಳಿಸಿಕೊಳ್ಳುವತ್ತ ಎಲ್ಲರೂ ಕಾರ್ಯಪ್ರವೃತ್ತರಾಗಬೇಕೆಂದು ದೇವೇಗೌಡ ಅವರು ಇದೇ ಸಮಯದಲ್ಲಿ ಜೆಡಿಎಸ್ ಶಾಸಕರಿಗೆ ಸೂಚನೆ ನೀಡಿದ್ದಾರೆ.

'ನಿಮ್ಮ ಕೆಲಸ ಮಾಡಿ, ಪಕ್ಷ ಸಂಘಟನೆ ನನಗೆ ಬಿಡಿ'
ಜೆಡಿಎಸ್ ಶಾಸಕರೂ ಎಲ್ಲರೂ ತಮ್ಮ-ತಮ್ಮ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಮಾತ್ರವೇ ಗಮನ ಕೊಡಿ, ಆಪರೇಷನ್ ಕಮಲದ ಭೀತಿ ಯಾರಿಗೂ ಬೇಡ, ನಾನು ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದು ದೇವೇಗೌಡ ಅವರು ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡಿದ್ದಾರೆ.











Click it and Unblock the Notifications