ವಲಸೆ ಕಾರ್ಮಿಕರ ಶಿಫ್ಟ್: ಬಿಜೆಪಿ Vs ಕಾಂಗ್ರೆಸ್, ಜಿದ್ದಾಜಿದ್ದಿಯಲ್ಲಿ ಮೀಸೆ ತಿರುವಿದವರಾರು?
ವಲಸೆ ಕಾರ್ಮಿಕರನ್ನು ರಾಜಧಾನಿಯಿಂದ ಶಿಫ್ಟ್ ಮಾಡುವ ವಿಚಾರದಲ್ಲಿ, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆದ ರಾಜಕೀಯ ಮೇಲಾಟ, ರಾಜ್ಯದಲ್ಲಿ ಭಾರೀ ಸಂಚಲನವನ್ನು ಮೂಡಿಸಿತ್ತು.
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಾದ ನಂತರ, ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಹಲವು ಬದಲಾವಣೆಗಳನ್ನು ಮತ್ತು ಪಕ್ಷದ ಹೋರಾಟದಲ್ಲಾಗುತ್ತಿರುವ ತೀವ್ರತೆಯನ್ನೂ ಕಾಣಬಹುದಾಗಿದೆ.
ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸುವ ವಿಚಾರದಲ್ಲಿ, ಯಡಿಯೂರಪ್ಪನವರ ಸರಕಾರದ ಕೆಲವು ಸಚಿವರ ಉದಾಸೀನತೆಯಿಂದ, ಬೆಂಗಳೂರು ಕೇಂದ್ರ ಬಸ್ ನಿಲ್ದಾಣ ಗೊಂದಲದ ಗೂಡಾಗಿತ್ತು. ಮತ್ತು, ಈ ವಿದ್ಯಮಾನ ರಾಷ್ಟ್ರೀಯ ವಾಹಿನಿಗಳಿಗೂ ರಸಕವಳ ನೀಡಿದಂತಾಗಿತ್ತು.
ಈ ವೇಳೆ, ಆಖಾಡಕ್ಕಿಳಿದ ಡಿ.ಕೆ.ಶಿವಕುಮಾರ್, ಪರಿಸ್ಥಿತಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ, ಸರಕಾರವನ್ನು ಗಿರಿಗಿಟ್ಲೆ ರೀತಿಯಲ್ಲಿ ತಿರುಗಾಡಿಸಲು ಆರಂಭಿಸಿದ್ದೇ ತಡ, ವರಿಷ್ಠರಿಂದ ಯಡಿಯೂರಪ್ಪನವರಿಗೆ ಕರೆ ಬಂತು ಎಂದು ಹೇಳಲಾಗುತ್ತಿದೆ. ತಡಮಾಡದ ಬಿಎಸ್ವೈ, ಪರಿಸ್ಥಿತಿಯನ್ನು ತನ್ನ ಕಂಟ್ರೋಲ್ ಗೆ ತೆಗೆದುಕೊಂಡರು.

ಮೊದಲು ಬಸ್ ದರ ಏರಿಸಿ, ನಂತರ ಇಳಿಸಿದ ಬಿಎಸ್ವೈ
ಮೊದಲು ಬಸ್ ದರ ಏರಿಸಿ, ನಂತರ ಇಳಿಸಿ, ಅದೆಲ್ಲಾ ಆದ ನಂತರ, ಮೂರು ದಿನಗಳ ವರೆಗೆ ಉಚಿತ ಬಸ್ ಪ್ರಯಾಣ ಎಂದು ಯಡಿಯೂರಪ್ಪನವರು ಘೋಷಿಸಿದರೂ, ಅದೆಲ್ಲವೂ ನಮ್ಮ ಹೋರಾಟದ ಫಲ ಎಂದು ಕೆಪಿಸಿಸಿ ಮುಖಂಡರು, ರಾಜ್ಯದ ಜನತೆಗೆ ಒಂದು ಹಂತಕ್ಕೆ ತಲುಪಿಸುವಲ್ಲಿ ಯಶಸ್ವಿಯಂತೂ ಆದರು.

ಆರೋಗ್ಯ ಎಮೆರ್ಜೆನ್ಸಿಯ ವೇಳೆ, ಯಾರಾದರೂ ರಾಜಕೀಯ ಮಾಡುತ್ತಾರಾ
ಇಂತಹ ಆರೋಗ್ಯ ಎಮೆರ್ಜೆನ್ಸಿಯ ವೇಳೆ, ಯಾರಾದರೂ ರಾಜಕೀಯ ಮಾಡುತ್ತಾರಾ ಎಂದು ಹೇಳುತ್ತಾ ಬರುತ್ತಿದ್ದ ಕಾಂಗ್ರೆಸ್ ಮುಖಂಡರು, ಯಾವಾಗ ಒಂದು ಕೋಟಿ ರೂಪಾಯಿಯ ಚೆಕ್ ಅನ್ನು ಕೆಎಸ್ಆರ್ ಟಿಸಿಗೆ ನೀಡಲು ಮುಂದಾದರೋ, ಆಗಲೇ, ಕಾಂಗ್ರೆಸ್ಸಿನ ಹೋರಾಟದ ಸದುದ್ದೇಶ/ದುರುದ್ದೇಶದ ಸುತ್ತ ಚರ್ಚೆಗಳು ಆರಂಭವಾದವು.

ಕೋಟಿ ಚೆಕ್
ಒಂದು ಕೋಟಿ ಚೆಕ್ ಅನ್ನು ಬಿಎಸ್ವೈ ಸರಕಾರ ತೆಗೆದುಕೊಂಡಿದ್ದರೆ, ರಾಜ್ಯ ಕಾಂಗ್ರೆಸ್ಸಿನ ಹೋರಾಟಕ್ಕೆ ಇನ್ನಷ್ಟು ಬಲ ಸಿಗುತ್ತಿತ್ತು. ಆದರೆ, ಸರಕಾರದ ಪಾಲಿಗೆ ಸಮಯೋಜಿತ ಹೆಜ್ಜೆಯಿಟ್ಟ ಸಿಎಂ ಯಡಿಯೂರಪ್ಪ, ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಚೆಕ್ ಸ್ವೀಕರಿಸದೇ, ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆ ಮನವಿ ಮಾಡುವಂತೆ ಸೂಚಿಸಿದರು.

ಬಿಎಸ್ವೈ ಜಾಣ ನಡೆ, ಡ್ಯಾಮೇಜ್ ಕಂಟ್ರೋಲ್
ಹಾಗಾಗಿ, ಬಿಎಸ್ವೈ ಈ ಜಾಣ ನಡೆಯಿಂದ ಕಾಂಗ್ರೆಸ್ ಮುಖಂಡರಿಗೆ ನಿರಾಶೆಯಾಯಿತು. ಮಂಗಳವಾರ (ಮೇ 5) ಬಿಲ್ಡರ್ಸ್ ಗಳನ್ನು ಕರೆದು ಬಿಎಸ್ವೈ ಮಾತುಕತೆ ನಡೆಸಿದ್ದಾರೆ. ವಲಸೆ ಕಾರ್ಮಿಕರಿಗೆ ಬೆಂಗಳೂರು ಬಿಟ್ಟು ಹೋಗದಂತೆ ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ, ಸಂಭಾವ್ಯ ಭಾರೀ ಮುಜುಗರದಿಂದ ಯಡಿಯೂರಪ್ಪ ತಮ್ಮ ಸರಕಾರವನ್ನು ಬಚಾವ್ ಮಾಡಿದ್ದರೂ, ಒಂದು ಹಂತಕ್ಕೆ ಕಾಂಗ್ರೆಸ್ ಈ ವಿದ್ಯಮಾನದಲ್ಲಿ ಮೇಲುಗೈ ಸಾಧಿಸಿದಂತೂ ಹೌದು ..












Click it and Unblock the Notifications