ಆಫೀಸ್ ಮೀಟಿಂಗ್ಗೆ ಲೇಟ್, ಮೊದಲ ದಿನ ಶಾಲೆಗೆ ಹೋದ ಮಗುವಿನ ಜೊತೆಗಿರಿ ಎಂದು ರಜೆ ಕೊಟ್ಟ ಬಾಸ್
ಈಗ ಮೂರೂವರೆ ವರ್ಷದಲ್ಲಿಯೇ ಮಕ್ಕಳ ಸ್ಕೂಲಿಂಗ್ ಶುರುವಾಗಿ ಬಿಡುತ್ತದೆ. ಆ ಪುಟ್ಟ ಮಗುವನ್ನು ಶಾಲೆಗೆ ಕಳುಹಿಸುವ ಖುಷಿ ಒಂದು ಕಡೆಯಾದರೆ, ಹೊಸ ವಾತಾವರಣಕ್ಕೆ ಮಗು ಹೇಗೆ ಹೊಂದಿಕೊಳ್ಳುವುದೋ ಎನ್ನುವ ಆತಂಕ ಮತ್ತೊಂದು ಕಡೆ. ಅಲ್ಲಿಯವರೆಗೆ ತನ್ನದೇ ಸಾಮ್ರಾಜ್ಯ, ತಾನು ಏನು ಬೇಕಾದರೂ ಮಾಡಬಹುದು ಎನ್ನುವಂತಿದ್ದ ಆ ಮಗು ಸಣ್ಣದೊಂದು ಕಟ್ಟುಪಾಡಿಗೆ ಹೊಂದಿಕೊಳ್ಳಬೇಕಾಗುತ್ತದೆ. ಕೆಲವು ತಂದೆ ತಾಯಂದಿರು ಮಗುವಿನ ಶಾಲೆಯ ಮೊದಲ ದಿನ ತಮ್ಮ ಕೆಲಸಕ್ಕೆ ರಜೆ ಹಾಕಿ ಬಿಡುತ್ತಾರೆ. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಕೆಲವು ಕಂಪನಿಗಳಲ್ಲಿ ತುರ್ತು ಪರಿಸ್ಥಿತಿ ಇದ್ದಾಗಲೂ ರಜೆ ಕೊಡುವುದಕ್ಕೆ ಸಾವಿರ ಪ್ರಶ್ನೆಗಳನ್ನು ಹಾಕುವುದಿದೆ. ಅಂಥದರಲ್ಲಿ ಮಗುವಿನ ಶಾಲೆಯ ಮೊದಲ ದಿನ ಎನ್ನುವ ಕಾರಣಕ್ಕೆ ರಜೆ ನೀಡುವುದು ತಮಾಷೆಯೇ ಸರಿ.
ವೈರಲ್ ಆಯಿತು ವಿಡಿಯೋ:
ಆದರೆ ಕೆಲಸದ ಸ್ಥಳದಲ್ಲಿ ಉದ್ಯೋಗಿಗಳಿಗೆ ಸಿಗಬೇಕಾದ ಬೆಂಬಲ ಮತ್ತು ಸಹಾನುಭೂತಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಹೊಸದೊಂದು ಚರ್ಚೆ ಆರಂಭವಾಗಿದೆ. ವಿದೇಶಿ ಮ್ಯಾನೇಜರ್ ಒಬ್ಬರು ತಮ್ಮ ಸಹೋದ್ಯೋಗಿಗೆ ಮಗುವಿನ ಶಾಲೆಯ ಮೊದಲ ದಿನದಂದು ರಜೆ ತೆಗೆದುಕೊಳ್ಳಲು ಹೇಳಿದ್ದಾರೆ. ಈ ವಿಚಾರವನ್ನು ಸೌರಭ್ ವರ್ಮಾ ಎನ್ನುವವರು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಘಟನೆ ಹಿನ್ನೆಲೆ:
ಇನ್ಸ್ಟಾಗ್ರಾಮ್ನಲ್ಲಿ ಸೌರಭ್ ವರ್ಮಾ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ತಮ್ಮ ಮಗುವಿನ ಪ್ರಿಸ್ಕೂಲ್ನ ಮೊದಲ ದಿನ ಆಫೀಸ್ ಮೀಟಿಂಗ್ಗೆ ತಡವಾಗಿ ಬಂದಿರುವ ಬಗ್ಗೆ ಹೇಳಿದ್ದಾರೆ. ಮಗುವಿನ ಶಾಲೆಯ ಮೊದಲ ದಿನವಾದ ಕಾರಣ ಮೀಟಿಂಗ್ ಜಾಯಿನ್ ಆಗುವುದು ಲೇಟ್ ಆಯಿತು ಎಂದು ಸೌರಬ್ ವಿವರಿಸಿದ್ದಾರೆ.ಆಗ ಆಶ್ಚರ್ಯಚಕಿತರಾದ ಮ್ಯಾನೇಜರ್ ಇವತ್ತು ಮೀಟಿಂಗ್ ಬಿಡಿ ನೀವು ಕಚೇರಿ ಕೆಲಸಕ್ಕೆಯೇ ಜಾಯಿನ್ ಆಗಬಾರದಿತ್ತು. ನಿಮ್ಮ ಮಗುವಿನ ಶಾಲೆಯ ಮೊದಲ ದಿನವಾಗಿರುವುದರಿಂದ ಇವತ್ತು ದಿನವಿಡೀ ನೀವು ಮಗುವಿನ ಜೊತೆ ಇರುವುದು ಬಹಳ ಮುಖ್ಯ ಎಂದಿದ್ದಾರೆ. ಕೆಲಸಕ್ಕಿಂತ ನಿಮ್ಮ ಮಗುವಿನ ಭಾವನೆಗಳಿಗೆ ಆದ್ಯತೆ ನೀಡಿ ಎಂದು ಹೇಳಿದ್ದಾರೆ. ಮಗು ಹೊಸ ಪರಿಸರದಲ್ಲಿ ಆತಂಕಕ್ಕೊಳಗಾಗಬಹುದು, ಅಂತಹ ಸಮಯದಲ್ಲಿ ಪೋಷಕರಾಗಿ ನೀವು ಜೊತೆಗಿದ್ದರೆ ಮಗು ಧೈರ್ಯವಾಗಿರುತ್ತದೆ ಎಂದು ಹೇಳುವ ಮೂಲಕ ಸೌರಬ್ಗೆ ರಜೆ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಭಾರತೀಯ ಕಾರ್ಯಸ್ಥಳಗಳೊಂದಿಗೆ ಹೋಲಿಕೆ:
ಈ ಘಟನೆಯನ್ನು ವರ್ಮಾ ಭಾರತೀಯ ಕಾರ್ಯಸ್ಥಳಗಳ ಸಂಸ್ಕೃತಿಯೊಂದಿಗೆ ಹೋಲಿಸಿದ್ದಾರೆ. ಭಾರತದಲ್ಲಿ ಮ್ಯಾನೇಜರ್ ಪರಿಸ್ಥಿತಿಯನ್ನು ಈ ರೀತಿಯಲ್ಲಿ ಅರ್ಥೈಸಿಕೊಳ್ಳಲು ಖಂಡಿತಾ ಸಾಧ್ಯವಿಲ್ಲ, ಬದಲಿಗೆ ಮಗುವನ್ನು ಶಾಲೆಗೆ ಬಿಟಾಯಿತಲ್ಲ, ಇನ್ನು ಅಲ್ಲಿ ನಿಮಗೇನು ಕೆಲಸ, ತಕ್ಷಣ ಕೆಲಸಕ್ಕೆ ಹಾಜರಾಗಿ ಎಂದು ನಿರೀಕ್ಷಿಸಲಾಗುತ್ತದೆ. ಆದರೆ, ಇಂತಹ ಪ್ರಮುಖ ಜೀವನದ ಘಟನೆಗಳನ್ನು ಕೇವಲ ಕೆಲಸದ ಜವಾಬ್ದಾರಿಯ ಆಚೆಗೆ ನೋಡಬೇಕು. ಕೆಲವೊಂದು ಸಂದರ್ಭಗಳು ಕಚೇರಿ ಕೆಲಸಕ್ಕಿಂತ ಬಹಳ ಮುಖ್ಯವಾಗಿರುತ್ತದೆ. ಅದನ್ನು ಭಾರತೀಯ ಮ್ಯಾನೇಜರ್ಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಸಹಾನುಭೂತಿ ತೋರುವ ಸಂಸ್ಕೃತಿ ನಮ್ಮಲ್ಲಿ ಹೆಚ್ಚಾಗಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಮಾತು:
ಈ ವಿಡಿಯೋ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಭಾರೀ ಸಂಚಲನ ಮೂಡಿಸಿದೆ. ಅನೇಕರು ತಮ್ಮ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ:
ಸಹಾನುಭೂತಿಯ ಕೊರತೆ: ಮಗು ಆಸ್ಪತ್ರೆಯಲ್ಲಿದ್ದಾಗಲೂ ಕೆಲಸದ ಬಗ್ಗೆಯೇ ಒತ್ತಡ ಹೇರಿದ ಮ್ಯಾನೇಜರ್ಗಳ ಬಗ್ಗೆ ಒಬ್ಬ ಬಳಕೆದಾರರು ಅಳಲು ತೋಡಿಕೊಂಡಿದ್ದಾರೆ.
ವಿದೇಶಿ vs ಭಾರತೀಯ ಸಂಸ್ಕೃತಿ: ಅನೇಕರು ವಿದೇಶಿ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ಸಿಗುವ ನಮ್ಯತೆ ಮತ್ತು ಸಹಾನುಭೂತಿ ಭಾರತದಲ್ಲಿ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವರ್ಕ್-ಲೈಫ್ ಬ್ಯಾಲೆನ್ಸ್: ವೈಯಕ್ತಿಕ ಮೈಲಿಗಲ್ಲುಗಳು ಮತ್ತು ಕೌಟುಂಬಿಕ ಬದ್ಧತೆಗಳನ್ನು ಗುರುತಿಸುವ ಅವಶ್ಯಕತೆಯ ಬಗ್ಗೆ ಹೆಚ್ಚಿನ ಬಳಕೆದಾರರು ಧ್ವನಿ ಎತ್ತಿದ್ದಾರೆ.
ಈ ಚರ್ಚೆಯು ಕೆಲಸದ ಸ್ಥಳದಲ್ಲಿ ಉದ್ಯೋಗಿಗಳ ಯೋಗಕ್ಷೇಮ, ಮಾನಸಿಕ ಆರೋಗ್ಯ ಮತ್ತು ಕೌಟುಂಬಿಕ ಬದ್ಧತೆಗಳಿಗೆ ಸಿಗಬೇಕಾದ ಗೌರವದ ಕುರಿತು ಕಾರ್ಪೊರೇಟ್ ವಲಯದಲ್ಲಿ ಗಂಭೀರ ಮರುಚಿಂತನೆಗೆ ದಾರಿ ಮಾಡಿಕೊಟ್ಟಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications