Viral Video: ಐವರ ಬಲಿ ಪಡೆದ ಒಂದೇ ಒಂದು ಸೆಲ್ಫೀ
ಮಂಡ್ಯ, ಜೂನ್ 25: ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಸೆಲ್ಫೀ ಗೀಳಿಗೆ ಬಿದ್ದು ತಮ್ಮ ಪ್ರಣ ಕಳೆದುಕೊಂಡಿರುವ ಉದಾಹರಣೆಗಳಿವೆ. ಇದೀಗ ಮಂಡ್ಯ ಜಿಲ್ಲೆಗಳಲ್ಲಿ ಅಂತಹದ್ದದ್ದೇ ಘಟನೆ ನಡೆದಿದೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪ್ರವಾಸಿ ತಾಣಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಮತ್ತೊಂದು ಭೀಕರ ದುರಂತಕ್ಕೆ ಕಾರಣವಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ಮುತ್ತತ್ತಿಗೆ ಬುಧವಾರ (ಜೂನ್ 24) ಪ್ರವಾಸಕ್ಕೆ ಬಂದಿದ್ದ ಕುಟುಂಬವೊಂದರ ನಾಲ್ವರು ಮಹಿಳೆಯರು ಹಾಗೂ ಕಾರು ಚಾಲಕ ಕಾವೇರಿ ನದಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ನೀರು ಪಾಲಾದ ಐವರು
ಮೃತರನ್ನು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಜೆ.ಬ್ಯಾಡರಹಳ್ಳಿ ಗ್ರಾಮದ ಶ್ವೇತಾ (38), ಆಕೆಯ ಪುತ್ರಿ ಚೈತ್ರಾ (19), ಅತ್ತಿಗೆ ವಿಜಯಲಕ್ಷ್ಮಿ (52), ಅತ್ತಿಗೆಯ ಮಗಳು ಪ್ರಿಯಾಂಕಾ (28) ಹಾಗೂ ಬೆಂಗಳೂರು ಮೂಲದ ಕಾರು ಚಾಲಕ ಮಹೇಶ್ (38) ಎಂದು ಗುರುತಿಸಲಾಗಿದೆ.
ಐವರನ್ನ ಬಲಿ ತೆಗೆದುಕೊಂಡ ಸೆಲ್ಫೀ
ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಶ್ವೇತಾ ಅವರ ಕುಟುಂಬಸ್ಥರು ಬುಧವಾರ ಬೆಳಗ್ಗೆ ಬಾಡಿಗೆ ಕಾರಿನಲ್ಲಿ ಬೆಂಗಳೂರಿನಿಂದ ಹೊರಟಿದ್ದರು. ಇವರು ಮೊದಲು ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮಕ್ಕೆ ಬೀಗರ ಊಟದ ಕಾರ್ಯಕ್ರಮಕ್ಕಾಗಿ ಹೋಗಿದ್ದರು. ಅಲ್ಲಿಂದ ಸಂಜೆ 4 ಗಂಟೆಯ ಸುಮಾರಿಗೆ ಮುತ್ತತ್ತಿ ಪ್ರವಾಸಿ ತಾಣಕ್ಕೆ ಬಂದಿದ್ದರು. ಮುತ್ತತ್ತಿಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಇಡೀ ಕುಟುಂಬ ಕಾವೇರಿ ನದಿಯ ದಂಡೆಯ ಬಳಿ ತೆರಳಿತ್ತು.
ಒಬ್ಬರನ್ನು ರಕ್ಷಿಸಲು ಹೋಗಿ ಐವರು ನೀರುಪಾಲು
ನದಿಯ ನೀರಿನ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳುವ ವೇಳೆ ಈ ದುರಂತ ಸಂಭವಿಸಿದೆ. ಮೊದಲಿಗೆ ವಿಜಯಲಕ್ಷ್ಮಿ ಅವರು ಸೆಲ್ಫಿ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಕಾವೇರಿ ನದಿಯ ಅಪಾಯಕಾರಿ ಸುಳಿಗೆ ಸಿಲುಕಿದ್ದಾರೆ. ಅವರನ್ನು ರಕ್ಷಣೆ ಮಾಡಲು ಹೋದ ಕುಟುಂಬದ ಇತರ ಮೂವರು ಮಹಿಳೆಯರು ಹಾಗೂ ಕಾರು ಚಾಲಕ ಮಹೇಶ್ ಒಬ್ಬರನ್ನೊಬ್ಬರು ಹಿಡಿಯಲು ಹೋಗಿ ಎಲ್ಲರೂ ನೀರಿನಲ್ಲಿ ಮುಳುಗಿದ್ದಾರೆ.
ಪ್ರವಾಸಕ್ಕೆ ಬಂದಿದ್ದ ಒಟ್ಟು ಏಳು ಮಂದಿಯಲ್ಲಿ ಶ್ವೇತಾ ಅವರ ಪತಿ ರವಿ ಹಾಗೂ ಪ್ರಿಯಾಂಕಾ ಅವರ ಎರಡು ವರ್ಷದ ಮಗು ಮಾತ್ರ ದಡದಲ್ಲಿದ್ದಿದ್ದರಿಂದ ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ. ಕಣ್ಣೆದುರೇ ಇಡೀ ಕುಟುಂಬ ನೀರಿನಲ್ಲಿ ಮುಳುಗುವುದನ್ನು ಕಂಡು ರವಿ ಕಣ್ಣೀರಿಟ್ಟಿದ್ದಾರೆ.
ಸ್ಥಳೀಯ ನುರಿತ ಈಜುಗಾರರು ಮತ್ತು ಅಗ್ನಿಶಾಮಕ ಸಿಬ್ಬಂದಿಯ ಜಂಟಿ ಕಾರ್ಯಾಚರಣೆಯ ನೆರವಿನಿಂದ ಐವರ ಮೃತದೇಹಗಳನ್ನು ಸಂಜೆ ವೇಳೆಗೆ ನೀರಿನಿಂದ ಹೊರತೆಗೆಯಲಾಯಿತು. ವಿಷಯ ತಿಳಿಯುತ್ತಿದ್ದಂತೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ. ಶೋಭಾರಾಣಿ ಹಾಗೂ ಮಳವಳ್ಳಿ ಉಪವಿಭಾಗದ ಡಿವೈಎಸ್ಪಿ ಯಶವಂತ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭೀಕರ ಘಟನೆಗೆ ಸಂಬಂಧಿಸಿದಂತೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
💔 A heartbreaking tragedy at Muthathi, Karnataka.
— ಸನಾತನ (सनातन) (@sanatan_kannada) June 25, 2026
This video was captured just minutes before disaster struck on 24 June 2026.
What began as a family outing ended in unimaginable loss when Vijayamma (50), Shwetha (38), Priyanka (28), Chaitra (20), and Mahesh (driver) were… pic.twitter.com/U1J8FOyHHI
ಸಾಮಾನ್ಯವಾಗಿ ನದಿ ತೀರದಂತಹ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ನದಿಯಲ್ಲಿ ಇಳಿಯಬೇಡಿ, ಸುಳಿಗಳಿವೆ ಎಂದೆಲ್ಲಾ ಪ್ರವಾಸಿಗರಿಗೆ ಸೂಚನೆ ನೀಡುತ್ತಾರೆ. ಆದರೆ ಇದ್ಯಾವುದನ್ನ ಕ್ಯಾರೆ ಎನ್ನದೆ ಕೆಲವರು ನದಿಯಲ್ಲಿ ಈಜುವ ಹಾಗೂ ಅಪಾಯ ಸ್ಥಳಗಳಲ್ಲಿ ನಿಂತುಕೊಂಡು ಸೆಲ್ಪೀ ತೆಗದುಕೊಳ್ಳಲು ಮುಂದಾಗಿ ಕೊನೆಗೆ ತಮ್ಮ ಪ್ರಾಣಕ್ಕೆ ಕುತ್ತು ತಂಡುಕೊಂಡುಬಿಡುತ್ತಾರೆ. ಆದ್ದರಿಂದ ಇಂತಹ ಪ್ರದೇಶಗಳಿಗೆ ಹೋದಾಗ ಅಲ್ಲಿನ ಸೂಚನಾ ಫಲಕ ಅಥವಾ ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವುದು ಉತ್ತಮ.












Click it and Unblock the Notifications