ಮಲ್ಯ ಟ್ವೀಟ್ ಸಮಜಾಯಿಷಿಗೆ ಸಿಬಿಐನಿಂದ ಗುದ್ದು
ನವದೆಹಲಿ, ಮಾರ್ಚ್ 12: ಉದ್ಯಮಿ ವಿಜಯ್ ಮಲ್ಯ ಅವರು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ನೀಡಿದ ಸಮಜಾಯಿಷಿಗೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಸರಿಯಾದ ಗುದ್ದು ನೀಡಿದೆ. 'ನೀವು ಏನೇ ಹೇಳುವುದಿದ್ದರೂ ನಮ್ಮ ಕಚೇರಿಗೆ ಬನ್ನಿ ಟ್ವೀಟ್ ಎಲ್ಲಾ ಲೆಕ್ಕಕ್ಕಿಲ್ಲ' ಎಂದು ತಿರುಗೇಟು ನೀಡಲಾಗಿದೆ.
ಸುಮಾರು 17ಕ್ಕೂ ಅಧಿಕ ಬ್ಯಾಂಕುಗಳಿಂದ ಮಲ್ಯ ಅವರು ಪಡೆದಿರುವ 9,000 ಕೋಟಿ ರು ಮೊತ್ತದ ಅಸಲು, ಬಡ್ಡಿ ಲೆಕ್ಕಾ ಚುಕ್ತಾ ಮಾಡುವ ಬಗೆ ಹೇಗೆ ಎಂಬುದನ್ನು ವಿವರಿಸಿದಲು ಮಾರ್ಚ್ 18ರ ತನಕ ಗಡುವು ನೀಡಲಾಗಿದೆ. ಜಾರಿ ನಿರ್ದೇಶನಾಲಯ ಈಗಾಗಲೇ ಮಲ್ಯರಿಗೆ ಸಮನ್ಸ್ ಜಾರಿಗೊಳಿಸಿದೆ.[ಸಂಥಿಂಗ್ ವಿತ್ ಶಾಮ್ ನಲ್ಲಿ ಮಲ್ಯ, ದರ್ಶನ್ ಬಗ್ಗೆ, ಕ್ಲಿಕ್ ಮಾಡಿ]

ಮಾರ್ಚ್ 02ರಂದು 12.54 PM ಗೆ ದೇಶ ತೊರೆದಿರುವ ಮಲ್ಯ ಅವರು ಸಾಲ ವಸೂಲಾತಿ ನ್ಯಾಯಾಧೀಕರಣದ ಆದೇಶಕ್ಕೆ ಬೆಲೆ ನೀಡದೆ ಕಣ್ಮರೆಯಾಗಿದ್ದರು. ಈ ಬಗ್ಗೆ ಕೋರ್ಟಿನಲ್ಲಿ ವಿಚಾರಣೆ ನಡೆದು ಸಮನ್ಸ್ ಜಾರಿಗೊಂಡ ಬಳಿಕ ಸರಣಿ ಟ್ವೀಟ್ ಗಳ ಮೂಲಕ ಉತ್ತರಿಸಿದ್ದರು, ಮಾಧ್ಯಮಗಳ ವಿರುದ್ಧ ಕೂಡಾ ತಿರುಗಿ ಬಿದ್ದಿದ್ದರು.
ಟ್ವೀಟ್ಸ್ ಲೆಕ್ಕಕ್ಕಿಲ್ಲ: ಮಲ್ಯ ಅವರ ಟ್ವೀಟ್ಸ್ ನೋಡಿರುವ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಇದನ್ನು ಪರಿಗಣಿಸಲು ಸಾಧ್ಯವಿಲ್ಲ, ಅವರು ಸಮನ್ಸ್ ಗೆ ಉತ್ತರಿಸಲು ಖುದ್ದು ಹಾಜರಾಗಬೇಕು. ಒಂದು ವೇಳೆ ಮಾರ್ಚ್ 18ರಂದು ವಿಚಾರಣೆಗೆ ಹಾಜರಾಗದಿದ್ದ ಪಕ್ಷದಲ್ಲಿ ಮುಂದಿನ ಕ್ರಮ ಜರುಗಿಸಬೇಕಾಗುತ್ತದೆ ಎಂದಿದ್ದಾರೆ.
ಲಂಡನ್ನಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೂಲಕ ಮಲ್ಯ ಅವರಿಗೆ ಸಮನ್ಸ್ ತಲುಪಿಸಲಾಗಿದೆ. ಮಲ್ಯ ವಿರುದ್ಧ ಸಾಲ ವಸೂಲಾತಿ ಪ್ರಾಧಿಕಾರ (ಡಿಆರ್ ಟಿ) ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಮಾರ್ಚ್ 30ರಂದು ವಿಚಾರಣೆಗೆ ಬರಲಿದೆ.
ಹಾಗೆ ನೋಡಿದರೆ ಅಕ್ಟೋಬರ್ 12, 2015ರಲ್ಲೇ ಮಲ್ಯ ಅವರ ವಿರುದ್ಧ ಲುಕ್ ಔಟ್ ನೋಟಿಸ್ ನೀಡಲಾಗಿತ್ತು. ಈ ನೋಟಿಸ್ ಪಡೆದರೂ ಮಲ್ಯ ಅವರು ಸುಲಭವಾಗಿ ವಿದೇಶ ಪ್ರಯಾಣ ಮಾಡಿದ್ದರು.












Click it and Unblock the Notifications