ಸ್ವಯಂ ಘೋಷಿತ ದೇವ ಮಾನವ ಅಸಾರಾಮ್ ಬಾಪು ರೇಪ್ ಕೇಸ್ : ಟೈಮ್ ಲೈನ್
ಬೆಂಗಳೂರು, ಏಪ್ರಿಲ್ 25: ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ನೀಡಿದ ಜೋಧಪುರ ಎಸ್ ಸಿ ಎಸ್ ಟಿ ನ್ಯಾಯಾಲಯ ಅವರನ್ನು ದೋಷಿ ಎಂದು ಪರಿಗಣಿಸಿದೆ.
ಅವರೊಂದಿಗೆ ಆರೋಪ ಎದುರಿಸುತ್ತಿದ್ದ ಐವರು ಆರೋಪಿಗಳನ್ನೂ ದೋಷಿ ಎಂದು ಘೋಷಿಸಲಾಗಿದೆ. ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ.
ಲೈಂಗಿಕ ದೌರ್ಜನ್ಯ ಸೇರಿದಂತೆ ಮೈತುಂಬಾ ಹಗರಣಗಳನ್ನು ಹೊತ್ತುಕೊಂಡಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪುಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ ಭೀತಿ ಎದುರಾಗಿತ್ತು.
ಚಹಾದಂಗಡಿಯಲ್ಲಿ ಎಂಜಲಿನ ಗ್ಲಾಸು ತೊಳೆಯುತ್ತಿದ್ದ ಅಸಾರಾಮ್ ಈಗ ಸರಿ ಸುಮಾರು ಸಾವಿರಾರು ಕೋಟಿ ರು ಒಡೆಯ, 16 ವರ್ಷ ವಯಸ್ಸಿನ ಯುವತಿ ಮೇಲೆ ಜೋಧಪುರದ ಆಶ್ರಮದಲ್ಲಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲುವಾಸಿಯಾಗಿದ್ದಾರೆ.

ವಿವಾದಗಳು ಬಾಪುಗೆ ಹೊಸತೇನಲ್ಲ. ಅನೇಕ ಭೂ ಹಗರಣ, ಗಲಾಟೆ, ಕೊಲೆ ಕೇಸ್ ಗಳಲ್ಲಿ ಬಾಪು ಹೆಸರು ಕಾಣಿಸಿಕೊಂಡಿದೆ. ಆದರೆ, ಈತನಿಗೆ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಅಸಂಖ್ಯಾತ ಭಕ್ತರಿದ್ದಾರೆ.
ಅತ್ಯಾಚಾರ ಪ್ರಕರಣದ ಕಳೆದ 5 ವರ್ಷದಿಂದ ಟೈಮ್ ಲೈನ್ :
ಆಗಸ್ಟ್ 15, 2013: ಜೋಧಪುರದ ಮಾಣಾಯಿ ಆಶ್ರಮದಲ್ಲಿ 16 ವರ್ಷ ವಯಸ್ಸಿನ ಯುವತಿಯನ್ನು ಆಗಸ್ಟ್ 15ರಂದು ಕರೆಸಿಕೊಂಡು ಅತ್ಯಾಚಾರ ಎಸಗಿದ ಅಸಾರಾಮ್ ಬಾಪು.
ಆಗಸ್ಟ್ 20, 2013: ಸಂತ್ರಸ್ತ ಯುವತಿಯ ಪೋಷಕರಿಂದ ದೆಹಲಿ ಪೊಲೀಸರಿಗೆ ದೂರು. ಪ್ರಕರಣವನ್ನು ಜೋಧಪುರ ಪೊಲೀಸರಿಗೆ ವರ್ಗಾಯಿಸಲಾಯಿತು.
ಆಗಸ್ಟ್ 31, 2013: ಜೋಧಪುರ ಪೊಲೀಸರಿಂದ ಅಸಾರಾಮ್ ಬಾಪು ಬಂಧನ, ಜೈಲುವಾಸಿಯಾದ ಜನಪ್ರಿಯ ಸ್ವಯಂಘೋಷಿತ ದೇವಮಾನ.
ನವೆಂಬರ್ 6, 2013: ಅಸಾರಾಮ್ ಬಾಪು ಹಾಗೂ ನಾಲ್ವರ ವಿರುದ್ಧ ಜೋಧಪುರ ಚಾರ್ಜ್ ಶೀಟ್ ದಾಖಲಿಸಿದ ಜೋಧಪುರ ಪೊಲೀಸರು.
ಫೆಬ್ರವರಿ 12, 2015 : ಅತ್ಯಾಚಾರ ಪ್ರಕರಣದ ಪ್ರತ್ಯಕ್ಷ ಸಾಕ್ಷಿ ರಾಹುಲ್ ಕೆ ಸಚನ್ ಮೇಲೆ ಹಲ್ಲೆ, ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಬಂದ ರಾಹುಲ್ ಗೆ ಚಾಕು ಇರಿತ.
ಜುಲೈ 08, 2015 : ಮತ್ತೊಬ್ಬ ಸಾಕ್ಷಿ ಸುಧಾ ಪಥಾಂಕ್ ರನ್ನು ಒತ್ತೆಯಾಳಾಗಿಸಿಕೊಂಡು ಹಿಂಸೆ, ಕೋರ್ಟಿನಲ್ಲಿ ಅಸಾರಾಮ್ ಪರ ಸಾಕ್ಷಿ ಹೇಳಿದ ಸುಧಾ, ಆಶ್ರಮದ ಚಟುವಟಿಕೆಗಳ ಬಗ್ಗೆ ಗೊತ್ತಿಲ್ಲ ಎಂದು ಹೇಳಿಕೆ.
ಜುಲೈ 12, 2015 : ಮತ್ತೊಬ್ಬ ಪ್ರಮುಖ ಸಾಕ್ಷಿಯನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಹತ್ಯೆಗೈದರು.
ಏಪ್ರಿಲ್ 07, 2018 : ವಿಶೇಷ ನ್ಯಾಯಾಲಯದಲ್ಲಿ ಅಂತಿಮ ಹಂತದ ವಿಚಾರಣೆ ಮುಕ್ತಾಯ, ತೀರ್ಪು ಕಾಯ್ದಿರಿಸಿದ ಕೋರ್ಟ್, ಏಪ್ರಿಲ್ 25ರಂದು ಆದೇಶ ಪ್ರಕಟ.
ಏಪ್ರಿಲ್ 25, 2018: ಜೋಧಪುರ ಎಸ್ ಸಿ ಎಸ್ ಟಿ ನ್ಯಾಯಾಲಯದಿಂದ ಅಸಾರಾಮ್ ಬಾಪು ದೋಷಿ ಎಂಬ ತೀರ್ಪು. ಅವರೊಂದಿಗೆ ಆರೋಪ ಎದುರಿಸುತ್ತಿದ್ದ ಐವರೂ ತಪ್ಪಿತಸ್ಥರೆಂದು ತೀರ್ಪು ನೀಡಿದ ನ್ಯಾಯಾಲಯವು, ಅಸಾರಾಮ್ ಗೆ ಜೀವಾವಧಿ ಶಿಕ್ಷೆ ನೀಡಿದೆ.
ಸೆಪ್ಟೆಂಬರ್ 11, 2018 : ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಅವರ ಶಿಕ್ಷೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಬಳಿಕ ಅಸಾರಾಮ್ ಅವರು ತಮ್ಮ ಕೊನೆ ಬೇಡಿಕೆ ಸಲ್ಲಿಸಿದ್ದಾರೆ.












Click it and Unblock the Notifications