ಬಂಧನ ಭೀತಿಯಲ್ಲಿ ಸೈಫ್ ಅಲಿಖಾನ್ -ತಾಂಡವ್ ಚಿತ್ರ ತಂಡ
ನವದೆಹಲಿ, ಜನವರಿ 27: ಸೈಫ್ ಅಲಿ ಖಾನ್ ಅಭಿನಯದ ತಾಂಡವ್ ವೆಬ್ ಸೀರಿಸ್ ತಂಡಕ್ಕೆ ಕಾನೂನು ಸಮರದಲ್ಲಿ ಹಿನ್ನಡೆಯಾಗಿದೆ. ಬಂಧನದಿಂದ ರಕ್ಷಣೆ ಕೋರಿ ತಾಂಡವ್ ತಂಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರದಂದು ತಿರಸ್ಕರಿಸಿದೆ.
ಹಿಂದು ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪದ ಮೇಲೆ 'ತಾಂಡವ್' ವೆಬ್ ಸರಣಿ ಮೇಲೆ ಈಗಾಗಲೇ ದೇಶದ ವಿವಿಧೆಡೆ ದೂರು ದಾಖಲಾಗಿದ್ದು, ವಿವಿಧ ಕೋರ್ಟ್ ಗಳಲ್ಲಿ ಪ್ರಕರಣವು ವಿಚಾರಣೆ ಹಂತದಲ್ಲಿದೆ.
ಸೈಫ್ ಅಭಿನಯದ ತಾಂಡವ್ ವಿರುದ್ಧ ಬೆಂಗಳೂರಲ್ಲಿ ಕೇಸ್
ನ್ಯಾ. ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಹಾಗೂ ಎಂಆರ್ ಶಾ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿ ಈ ಪ್ರಕರಣದಲ್ಲಿ ಹೈಕೋರ್ಟಿನಲ್ಲಿ ಮೊದಲಿಗೆ ಎಫ್ಐಆರ್ ರದ್ದುಕೋರಿ ಅರ್ಜಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ತಾಂಡವ್ ವಿರುದ್ಧ ಪ್ರಕರಣ ದಾಖಲಾಗಿದೆ.
ಅಮೆಜಾನ್ ಪ್ರೈ ವಿಡಿಯೋದ ಅಪರ್ಣಾ ಪುರೋಹಿತ್, ತಾಂಡವ್ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್, ನಿರ್ಮಾಪಕ ಫರಾನ್ ಅಖ್ತರ್, ನಟ ಜೀಶಾನ್ ಅಯುಬ್, ಸೈಫ್ ಅಲಿ ಖಾನ್ ವಿರುದ್ಧ ದೂರು ದಾಖಲಿಸಲಾಗಿದೆ. ಹಿಂದು ದೇವರುಗಳ ವಿರುದ್ಧ ಅವಹೇಳನಕಾರಿ ಸಂಭಾಷಣೆಗಳಿವೆ. ಶಿವನನ್ನು ಕೆಟ್ಟ ಪದಗಳಿಂದ ನಿಂದಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಸನ್ನಿವೇಶ, ದೃಶ್ಯ ತೆಗೆದು ಹಾಕಬೇಕು ಹಾಗೂ ಕ್ಷಮೆಯಾಚಿಸಬೇಕು ಎಂದು ದೂರು ದಾಖಲಿಸಲಾಗಿತ್ತು. ಕ್ಷಮೆಯಾಚಿಸಿದ ಚಿತ್ರ ತಂಡ ಎರಡು ದೃಶ್ಯಗಳಿಗೆ ಕತ್ತರಿ ಹಾಕಿದೆ. ಶಿವ ಪಾತ್ರಧಾರಿಯಾಗಿ ಜೀಶಾನ್ ಕಾಣಿಸಿಕೊಂಡಿದ್ದು ಹಾಗೂ ದಲಿತ ಮುಖಂಡರಿಗೆ ಅವಮಾನ ದೃಶ್ಯ ಡಿಲೀಟ್ ಮಾಡಲಾಗಿದೆ.
ಯಾವ ಸೆಕ್ಷನ್ ಅಡಿ ದೂರು ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಂಬ ಆರೋಪದ ಮೇಲೆ ದೂರು ನೀಡಲಾಗಿದ್ದು, ಕೆಆರ್ ಪುರ ಪೊಲೀಸರು ಐಪಿಸಿ ಸೆಕ್ಷನ್ 295 ಎ, 153ಎ, 501, 501 (1)(B) ಹಾಗೂ 298 ಅಡಿ ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿತರ ವಿರುದ್ಧ ಎಫ್ಐಆರ್ ಹಾಕಲಾಗಿದೆ. ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪವನ್ನು ಪರಿಗಣಿಸಲಾಗಿದೆ.